ಬೆಂಗಳೂರು: ಸ್ವತಃ ಹಿಂದೂ ಆಗಿರುವ, ಗುತ್ತಿನ ಮನೆಯವರಾಗಿ ದೈವಾರಾಧನೆಯನ್ನೂ ನಡೆಸುವ, ಮಾಜಿ ಸಚಿವರಾದ ರಮಾನಾಥ ರೈ ಅವರಿಗೆ ಭಗವಾ ಧ್ವಜ ‘ರಾಜಕೀಯ ಧ್ವಜ’ದಂತೆ ಕಂಡದ್ದು ದೊಡ್ಡ ವಿಪರ್ಯಾಸ! ಎಂದು ಬಿಜೆಪಿ ಮುಖಂಡ ಸಿ. ಟಿ. ರವಿ ಕಿಡಿಕಾರಿದ್ದಾರೆ.
ದೇವಸ್ಥಾನಗಳಲ್ಲಿ ತ್ಯಾಗ, ಶೌರ್ಯದ ಸಂಕೇತವಾದ, ಸಾಧು – ಸಂತರುಗಳು ಎತ್ತಿ ಹಿಡಿದ, ದೇಶದ ಸನಾತನ ಸಂಸ್ಕೃತಿಯ ಪ್ರತೀಕವಾದ ಕೇಸರಿ ಧ್ವಜ ಹಾರಿಸದೆ ಮರುಭೂಮಿಯಿಂದ ಖಡ್ಗದ ಮೇಲೆ ಸಾಗಿ ಬಂದ ಧ್ವಜ ಹಾರಿಸಬೇಕೇನು? ಎಂದು
ಪ್ರಶ್ನಿಸಿದ್ದಾರೆ.
ಕೇಸರಿ ಧ್ವಜವನ್ನು ರಾಜಕೀಯ ಧ್ವಜ ಎನ್ನುವುದು ತುಷ್ಟೀಕರಣದ ರಾಜಕಾರಣವಲ್ಲದೆ ಇನ್ನೇನೂ ಅಲ್ಲ. ಕಾಂಗ್ರೆಸ್ ಸ್ವತಃ ಹಿಂದೂ ವಿರೋಧಿ ಪಕ್ಷ. ಭಗವಾ ಧ್ವಜ ಪಾಕಿಸ್ತಾನದ ಧ್ವಜವಲ್ಲ. ಅದು ತ್ಯಾಗ, ಧೈರ್ಯದ ಸಂಕೇತ. ಭಗವಾ ಧ್ವಜ ಇಲ್ಲಿಯ ತನಕ
ಭಯೋತ್ಪಾದಕರನ್ನು ಸೃಷ್ಟಿಸಿಲ್ಲ. ಅದರ ನೆರಳಲ್ಲಿ ಸೃಷ್ಟಿಯಾದದ್ದು ಸಂತರು, ತ್ಯಾಗಿಗಳು, ಶಿವಾಜಿ ಮಹಾರಾಜ, ರಾಣಾ ಪ್ರತಾಪರಂತಹ ವೀರರನ್ನು. ಭಗವಾ ಧ್ವಜ ಹಿಡಿಯುವುದು ಅಪರಾಧವಲ್ಲ. ಆದರೆ, ಕಾಂಗ್ರೆಸ್ ಜಿಲ್ಲಾಧಿಕಾರಿ ಭಗವಾ ಧ್ವಜ ಹಿಡಿದರು ಎಂದು ತನ್ನ ಹಿಂದೂ ವಿರೋಧಿ ಸಂಕುಚಿತ ಮಾನಸಿಕತೆಯನ್ನು ಪ್ರದರ್ಶಿಸಿದೆ ಎಂದು ಆರೋಪಿಸಿದ್ದಾರೆ.
ಅಷ್ಟು ಧೈರ್ಯವಿದ್ದರೆ, ಕಾಂಗ್ರೆಸ್ ನಾಯಕರು ನಾವು ಭಗವಾ ಧ್ವಜ ಇರುವ ಯಾವುದೇ ಸಮಾರಂಭದಲ್ಲಿ ಪಾಲ್ಗೊಳ್ಳುವುದಿಲ್ಲ, ನಮಗೆ ಹಿಂದೂಗಳ ಮತ ಬೇಡ ಎಂದು ಘೋಷಿಸಲಿ ಎಂದು ಸವಾಲು ಹಾಕಿದ್ದಾರೆ.





Leave a comment