SUDDIKSHANA KANNADA NEWS/DAVANAGERE/DATE:28_12_2025
ದಾವಣಗೆರೆ: ‘ರಾಜಕೀಯ ಮುತ್ಸದ್ದಿಯಾಗಿದ್ದ ಜೆ.ಎಂ. ಇಮಾಂ ಅವರು ದಶಕಗಳ ಹಿಂದೆಯೇ ಕೆರೆಗಳನ್ನು ಕಟ್ಟುವ ಮೂಲಕ ನೀರಾವರಿಗೆ ಒತ್ತು ನೀಡಿದ್ದರು. ಪ್ರಾಮಾಣಿಕತೆ ಮತ್ತು ಬದ್ಧತೆಯ ರಾಜಕಾರಣಕ್ಕೆ ಮಾದರಿಯಾಗಿದ್ದರು’ ಎಂದು ಸಿರಿಗೆರೆಯ ಶ್ರೀ ತರಳಬಾಳುಬೃಹನ್ಮಠದ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.
ಜಗಳೂರಿನ ಜೆ.ಎಂ. ಇಮಾಂ ಸ್ಮಾರಕ ಶಾಲೆ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬೆಳ್ಳಿಹಬ್ಬ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕಡೂರಿನ ಮಾಜಿ ಶಾಸಕ ವೈ.ಎಸ್.ವಿ. ದತ್ತಾ ಅವರಿಗೆ 7ನೇ ರಾಜ್ಯಮಟ್ಟದ ‘ಜೆ.ಎಂ ಇಮಾಂ’ ಪ್ರಶಸ್ತಿ ಪ್ರದಾನ
ಮಾಡಿ ಮಾತನಾಡಿದರು.
‘ಇಮಾಂ ಸಾಹೇಬರ ಸೇವೆ ಅವಿಸ್ಮರಣೀಯ. ಇಂದಿನ ಪೀಳಿಗೆಗೆ ಅವರು ಸ್ಫೂರ್ತಿಯಾಗಿದ್ದಾರೆ. ನಮ್ಮ ಗುರುವರ್ಯರಾದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರಿಗೂ ಅವರಿಗೂ ಅವಿನಾಭಾವ ಸಂಬಂಧವಿತ್ತು. ಅವರಿಬ್ಬರ ಕಾರ್ಯದ ಮುಂದುವರಿದ ಭಾಗವೇ 57 ಕೆರೆ ತುಂಬಿಸುವ ಏತ ನೀರಾವರಿ ಯೋಜನೆಯಾಗಿದೆ. ಎಂದು ಶ್ರೀ ಜಗದ್ಗುರುಗಳವರು ಸ್ಮರಿಸಿದರು.
ಇಮಾಂ ಸಾಹೇಬರಿಗೂ ಸಿರಿಗೆರೆ ಮಠಕ್ಕೂ ಅವಿನಾಭಾವ ಸಂಬಂಧವಿತ್ತು. ನಮ್ಮ ಮಠದ ಇತಿಹಾಸದಲ್ಲಿ ಜಾತ್ಯತೀತ ಮೊಟ್ಟ ಮೊದಲ ಸಹಾಯಕರು ಇಮಾಮ್ ಸಾಹೇಬರಾಗಿದ್ದರು. ಅವರು ‘ಮೈಸೂರು ಆಗ ಈಗ’ ಕೃತಿ ಬರೆದಿದ್ದು. ಇನ್ನೂ ಅನೇಕ ಹಸ್ತ ಪ್ರತಿಗಳ ಸಂಗ್ರಹ ನಮ್ಮ ಬಳಿ ಇವೆ. ಕಾರ್ಯದ ಒತ್ತಡದಿಂದ ಪುಸ್ತಕ ಹೊರತರಲು ಸಾಧ್ಯವಾಗಿಲ್ಲ. ಆದಷ್ಟು ಬೇಗ ಸಾಹಿತಿ ದಾದಾಪೀರ್ ನವಿಲೇಹಾಳ್ ಮತ್ತು ಜೆ.ಕೆ.ಮಹಮದ್ ಹುಸೇನ್ ನಮ್ಮನ್ನು ಕಾಡಿಯಾದರೂ ಪುಸ್ತಕವನ್ನು ಹೊರತರಲು ಬೆನ್ನು ಹತ್ತಬೇಕು ಎಂದು ಕರೆ ನೀಡಿದರು.
ವೇದಿಕೆ ಮೇಲೆ ಎಸ್ಎಸ್ಎಲ್ಸಿ ಮಕ್ಕಳನ್ನು ಕರೆಸಿ ಕೂರಿಸಿದ ತರಳಬಾಳು ಶ್ರೀಗಳು ಇಮಾಂ ವ್ಯಕ್ತಿತ್ವದ ಕುರಿತು ಬೋಧಿಸಿದರು. ಕಂಪನಿಯೊಂದರ ಸಿಇಒ ಮತ್ತು ಭದ್ರತಾರಕ್ಷಕ ಹಾಗೂ ಅಮೆರಿಕ ಮಾಜಿ ಅಧ್ಯಕ್ಷ ಲಿಂಡನ್ ಜಾನ್ಸನ್ ಅವರ ಕಾಲ್ಪನಿಕ ಮತ್ತು ವಾಸ್ತವ ಕಥೆಗಳೊಂದಿಗೆ ರಾಜಕಾರಣ ಮತ್ತು ಕರ್ತವ್ಯನಿಷ್ಠೆಯನ್ನು ಶಿಕ್ಷಕ ವಿದ್ಯಾರ್ಥಿಯ ಮಧ್ಯೆಗಿನ ಘಟನೆಯೊಂದಿಗೆ ಓದು ಭವಿಷ್ಯ ಜೀವನಕ್ಕೆ ಆಧಾರವಾಗಲು ಶ್ರೀಗಳು ವಿದ್ಯಾರ್ಥಿಗಳಿಗೆ ಬೋಧಿಸಿದ್ದು ಎಲ್ಲರ ಗಮನ ಸೆಳೆಯಿತು.





Leave a comment