Site icon Kannada News-suddikshana

ದೂಡಾದಿಂದ 16.22 ಕೋಟಿ ರೂ. ಉಳಿತಾಯ ಬಜೆಟ್: ಕುಂದವಾಡದಲ್ಲಿ ನೂತನ ಬಡಾವಣೆ ನಿರ್ಮಾಣಕ್ಕೆ ಹಣ BUDGET MEETING IN DHUDA

SUDDIKSHANA KANNADA NEWS

DATE: 21-03-2023

DAVANAGERE

ದಾವಣಗೆರೆ: ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ 2023-24 ನೇ ಸಾಲಿನ ಬಜೆಟ್ ಸಭೆ (MEETING) ನಡೆದಿದ್ದು, 16.22 ಕೋಟಿ (CRORE) ರೂಪಾಯಿ  ಉಳಿತಾಯ ಬಜೆಟ್ ಮಂಡಿಸಲಾಯಿತು.

ದೂಡಾ ಕಚೇರಿಯಲ್ಲಿ ಅಧ್ಯಕ್ಷ ಎ. ವೈ. ಪ್ರಕಾಶ್ (A. Y. PRAKASH) ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2023-24 ನೇ ಸಾಲಿನಲ್ಲಿ ವಿವಿಧ ಬ್ಯಾಂಕ್ ಗಳಲ್ಲಿರುವ ನಿಶ್ಚಿತ ಠೇವಣಿ ಸೇರಿ 183.45 ಕೋಟಿ ರೂಪಾಯಿ ಆದಾಯ ಬರುವ ನಿರೀಕ್ಷೆ ಹೊಂದಲಾಗಿದೆ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 181.83 ಕೋಟಿ ರೂಪಾಯಿ ಮೀಸಲಿಡಲಾಗಿದೆ. ದಾವಣಗೆರೆ – ಹರಿಹರ (JHARIHARA) ವ್ಯಾಪ್ತಿಯಲ್ಲಿ 31.67 ಕೋಟಿ ರೂಪಾಯಿ ನೀಡಲು ಸಭೆ ನಿರ್ಧರಿಸಿತು.

ಕುಂದವಾಡ ಗ್ರಾಮದಲ್ಲಿ 53 ಎಕರೆ ಜಮೀನಿನಲ್ಲಿ ನೂತನವಾಗಿ ವಸತಿ ಬಡಾವಣೆ ನಿರ್ಮಾಣಕ್ಕೆ 53 ಎಕರೆ ಗುರುತಿಸಲಾಗಿದ್ದು, ಭೂಮಿ ಖರೀದಿಗೆ 63 ಕೋಟಿ ರೂಪಾಯಿ ಹಾಗೂ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲು 350 ಕೋಟಿ ರೂಪಾಯಿ ಮೀಸಲಿಡಲು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಬಾತಿ ಕೆರೆಯನ್ನು ಮಾದರಿ ಪ್ರವಾಸೋದ್ಯಮ ತಾಣವನ್ನಾಗಿಸಲು ಮತ್ತು ಸೌಂದರ್ಯೀಕರಣಗೊಳಿಸುವ ಸಲುವಾಗಿ 9.33 ಕೋಟಿ ರೂಪಾಯಿ, ನಾಗನೂರು ಕೆರೆ ಅಭಿವೃದ್ಧಿಗೆ 2 ಕೋಟಿ ರೂಪಾಯಿ, ಟಿವಿ ಸ್ಟೇಷನ್ ಕೆರೆ ಅಭಿವೃದ್ಧಿಗೆ 2 ಕೋಟಿ, ಹರಿಹರದಲ್ಲಿ ವಿವಿಧ ರಸ್ತೆ ನಿರ್ಮಾಣಕ್ಕೆ 1 ಕೋಟಿ, ಹರಿಹರದ ಮೊದಲ ರೈಲ್ವೆ ಗೇಟ್ ನವರೆಗೆ ಅಲಂಕಾರಿಕಾ ವಿದ್ಯುತ್ ದೀಪ ಅಳವಡಿಕೆಗೆ 1.40 ಕೋಟಿ, ಆವರಗೆರೆ ಗ್ರಾಮದ ಸರ್ವೆ ನಂಬರ್ 259ರಲ್ಲಿ ಕಾಂಕ್ರಿಟ್ ರಸ್ತೆ, ಚರಂಡಿ ಕಾಮಗಾರಿಗೆ 99 ಲಕ್ಷ ರೂಪಾಯಿ ಖರ್ಚು ಮಾಡಲು ತೀರ್ಮಾನಿಸಲಾಯಿತು.

ದಾವಣಗೆರೆಯಲ್ಲಿ ಬೃಹತ್ ಉದ್ಯಾನಕ್ಕೆ 25 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳುವುದು ಇಲ್ಲವೇ ಖರೀದಿಸಿ 11.32 ಕೋಟಿ ರೂ. ವೆಚ್ಚದಲ್ಲಿ ಪಾರ್ಕ್ ನಿರ್ಮಾಣ, ದಾಖಲಾತಿಗಳ ಗಣಕೀಕರಣಕ್ಕೆ 2.50 ಕೋಟಿ, ಜೆ. ಹೆಚ್. ಪಟೇಲ್ ಬಡಾವಣೆಯಲ್ಲಿ 5 ಕೋಟಿ ರೂಪಾಯಿ ವೆಚ್ಚದಲ್ಲಿ ಅಧಿಕಾರಿಗಳು, ನೌಕರರಿಗೆ ವಸತಿ ಸಂಕೀರ್ಣ, ಅತಿಥಿ ಗೃಹ, ಆರ್ ಟಿ ಒ ಕಚೇರಿ ಎದುರು 5 ಕೋಟಿ ರೂಪಾಯಿ ವೆಚ್ಚದ ನೂತನ ವಾಣಿಜ್ಯ ಸಂಕೀರ್ಣ, ಡಿಸಿಎಂ ಟೌನ್ ಶಿಪ್ ನ ರೈಲ್ವೆ ಅಂಡರ್ ಪಾಸ್ ನಿಂದ ಚಿಂದೋಡಿ ಲೀಲಾ ರಂಗಮಂದಿರದವರೆಗೆ ಅಲಂಕಾರಿಕಾ ವಿದ್ಯುತ್ ದೀಪಗಳ ಅಳವಡಿಕೆಗೆ 1.79 ಕೋಟಿ ರೂಪಾಯಿ ಕಾಯ್ದಿರಿಸಲು ಸಭೆ ತೀರ್ಮಾನಿಸಿತು.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಚರ್ಚಿಸಲಾಯಿತು. ಹಲವು ಬಡಾವಣೆಗಳಲ್ಲಿ ಕಾಂಕ್ರಿಟ್ ರಸ್ತೆ, ಚರಂಡಿ ರಸ್ತೆ, ಪಾದಚಾರಿ ರಸ್ತೆ ನಿರ್ಮಾಣ ಸಂಬಂಧ ಆಯವ್ಯಯದಲ್ಲಿ ಮಂಡನೆ ಮಾಡಲಾಯಿತು.

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಎ. ರವೀಂದ್ರನಾಥ್ (S. A. RAVINDRANATH), ಪ್ರಾಧಿಕಾರದ ಆಯುಕ್ತರು, ದೂಡಾ ಸದಸ್ಯರು, ಎಂಜಿನಿಯರ್ ಗಳು ಸಭೆಯಲ್ಲಿ ಹಾಜರಿದ್ದರು.

Exit mobile version