SUDDIKSHANA KANNADA NEWS/ DAVANAGERE/ DATE-10-05-2025
ದಾವಣಗೆರೆ: ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಹಾಗೂ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಬಗ್ಗೆ ಮಾತನಾಡಿರುವ ಬಿಜೆಪಿ ಮುಖಂಡ ಲೋಕಿಕೆರೆ ನಾಗರಾಜ್ ದಾವಣಗೆರೆಗೆ ಏನು ಕೊಡುಗೆ ನೀಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಹಾನಗರ ಪಾಲಿಕೆ ಮಾಜಿ ಸದಸ್ಯ ಜಿ. ಎಸ್. ಮಂಜುನಾಥ್ ಗಡಿಗುಡಾಳ್ ಅವರು ಪ್ರಶ್ನಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ದಾವಣಗೆರೆ ಇಷ್ಟೊಂದು ಪ್ರಮಾಣದಲ್ಲಿ ಅಭಿವೃದ್ಧಿಯಾಗಲು, ವಿಶ್ವದ ಗಮನ ಸೆಳೆಯುವಂತಾಗಿದ್ದು ಎಸ್. ಎಸ್. ಮಲ್ಲಿಕಾರ್ಜುನ್ ಅವರ ಅಭಿವೃದ್ಧಿ ಕಾರ್ಯಗಳಿಂದ. ದೂರದೃಷ್ಟಿತ್ವ ಇದ್ದುದರಿಂದ. ಲೋಕಿಕೆರೆ ನಾಗರಾಜ್ ದಾವಣಗೆರೆ ಅಭಿವೃದ್ಧಿಗಾಗಿ ಏನು ಮಾಡಿದ್ದಾರೆ? ಕೈಕಾಲು ಹಿಡಿದು ಬಿಜೆಪಿ ಬಿಫಾರಂ ತಂದು ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದೇ ದೊಡ್ಡ ಸಾಧನೆ ಎಂಬಂತೆ ವರ್ತಿಸುತ್ತಿರುವ ಲೋಕಿಕೆರೆ ನಾಗರಾಜ್ ಮೊದಲು ಏನು ಮಾಡಿದ್ದಾರೆ ಎಂಬುದನ್ನು ಜನರಿಗೆ ತಿಳಿಸಲಿ. ಆಮೇಲೆ ಮಾತನಾಡಲಿ ಎಂದು ಸವಾಲು ಹಾಕಿದ್ದಾರೆ.
ಮಲ್ಲಿಕಾರ್ಜುನ್ ಅವರು ಮೊದಲಿನಿಂದಲೂ ಯಾವುದೇ ನಿರ್ಧಾರ ತೆಗೆದುಕೊಂಡರೂ ಸರಿಯಾಗಿಯೇ ಇರುತ್ತದೆ. ಬಿಜೆಪಿಯವರ ರೀತಿಯಲ್ಲಿ ರಾಜಕಾರಣ ಮಾಡುವುದಿಲ್ಲ. ಲೋಕಿಕೆರೆ ನಾಗರಾಜ್ ಚುನಾವಣೆಯಲ್ಲಿ ಹೀನಾಯವಾಗಿ
ಸೋತಿದ್ದಾರೆ. ಯಾವೆಲ್ಲಾ ಚುನಾವಣೆಗಳಲ್ಲಿ ಗೆದ್ದು ಏನೆಲ್ಲಾ ದಾವಣಗೆರೆ ಜನರಿಗೆ ಮಾಡಿದ್ದಾರೆಂದು ದಾಖಲೆ ಸಮೇತ ತೋರಿಸಲಿ. ಇಲ್ಲದಿದ್ದರೆ ತೆಪ್ಪಗಿರಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಮತ್ತು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರರ ಬಗ್ಗೆ ಮಾತನಾಡುವ ನೈತಿಕತೆ, ಯೋಗ್ಯತೆ ಬಿಜೆಪಿಯ ಲೋಕಿಕೆರೆ ನಾಗರಾಜ್ ಗೆ ಇಲ್ಲ. ಭ್ರಷ್ಟಾಚಾರದ ಪಿತಾಮಹರು ದಾವಣಗೆರೆಯಲ್ಲಿ ಯಾರು ಎಂಬುದು
ಎಲ್ಲರಿಗೂ ಗೊತ್ತು. ಮೊದಲು ಲೋಕಿಕೆರೆ ನಾಗರಾಜ್ ಅವರ ಬಂಡವಾಳ ಬಯಲು ಮಾಡಲಿ. ಸ್ಮಾರ್ಟ್ ಸಿಟಿ ಸೇರಿದಂತೆ ಎಲ್ಲಾ ಯೋಜನೆಗಳಲ್ಲಿಯೂ ಅಕ್ರಮ ಎಸಗಿದ ಬಿಜೆಪಿ ನಾಯಕರು, ಮಾಜಿ ಸಂಸದ ಜಿ. ಎಂ. ಸಿದ್ದೇಶ್ವರರ ಬಗ್ಗೆ ಮಾತನಾಡಲಿ. ಅದನ್ನು ಬಿಟ್ಟು ಮಲ್ಲಿಕಾರ್ಜುನ್ ಅವರು ಗೆದ್ದ ಬಳಿಕ ದಾವಣಗೆರೆಯಲ್ಲಿ ಯಾವೆಲ್ಲಾ ಕೆಲಸ ಆಗುತ್ತಿದೆ ಎಂಬುದು ಕಣ್ಮುಂದೆಯೇ ಇದೆ ಎಂದು ಹೇಳಿದ್ದಾರೆ.
ಬಿಜೆಪಿ ಅಧಿಕಾರಾವಧಿಯಲ್ಲಿ ದಾವಣಗೆರೆಯಲ್ಲಿ ಭ್ರಷ್ಟಾಚಾರ ಮಿತಿಮೀರಿತ್ತು. ಸ್ಮಾರ್ಟ್ ಸಿಟಿ ಹಣ ನುಂಗಿ ಹಾಕಿದವರು ಬಿಜೆಪಿಯವರು. ಆಗ ಸುಮ್ಮನಿದ್ದದ್ದು ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಲಿ. ಅಶೋಕ್ ರೈಲ್ವೆ ಗೇಟ್, ಖಾಸಗಿ ಬಸ್ ನಿಲ್ದಾಣ, ಜಲಸಿರಿ, ರಸ್ತೆ ಅಭಿವೃದ್ಧಿ ಸೇರಿದಂತೆ ಎಲ್ಲದರಲ್ಲೂ ಹಣ ಕೊಳ್ಳೆ ಹೊಡೆದವರು. ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತೆ ಲೋಕಿಕೆರೆ ನಾಗರಾಜ್ ಮಾತನಾಡಿದ್ದು ಸರಿಯಲ್ಲ. ಕೂಡಲೇ ಮಲ್ಲಿಕಾರ್ಜುನ್ ಅವರ ಮೇಲೆ ಮಾಡಿರುವ ಆರೋಪ ವಾಪಸ್ ಪಡೆದು, ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಲೋಕಿಕೆರೆ ನಾಗರಾಜ್ ಬಂಡವಾಳ ಬಯಲು ಮಾಡಬೇಕಾಗುತ್ತದೆ ಎಂದು ಮಂಜುನಾಥ್ ಗಡಿಗುಡಾಳ್ ಎಚ್ಚರಿಕೆ ನೀಡಿದ್ದಾರೆ.