SUDDIKSHANA KANNADA NEWS/ DAVANAGERE/ DATE:17-03-2025
ದಾವಣಗೆರೆ: ಚನ್ನಗಿರಿ ತಾಲೂಕಿನ ಲಕ್ಷ್ಮೀಸಾಗರ – ದಿಗ್ಗೇನಹಳ್ಳಿ ಗ್ರಾಮದ ಹೊಸಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವತಿಯರು ಹಾಗೂ ಮಹಿಳೆಯೊಬ್ಬರು ಸಾವು ಕಂಡ ಘಟನೆ ನಡೆದಿದೆ.
ಸಹೋದರಿಯರಾದ ದಿವ್ಯಾ (26), ಚಂದನಾ (19) ಮತ್ತು ದೀಪಾರಾಣಿ (30) ಮೃತಪಟ್ಟ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಈಗಾಗಲೇ ದೀಪಾರಾಣಿಗೆ ಮದುವೆಯಾಗಿದೆ.
ಬಟ್ಟೆ ತೊಳೆಯಲು ಮೂವರು ಲಕ್ಷ್ಮೀಸಾಗರ – ದಿಗ್ಗೇನಹಳ್ಳಿ ಗ್ರಾಮಕ್ಕೆ ತೆರಳಿದ್ದಾರೆ. ಈ ವೇಳೆ ಚಂದನಾ ಬಿಸಿಲು ಹೆಚ್ಚಿದ್ದ ಕಾರಣಕ್ಕೆ ಈಜಲು ಕೆರೆಗೆ ಇಳಿದಿದ್ದಾಳೆ. ಈ ವೇಳೆ ಚಂದನಾಳ ರಕ್ಷಣೆಗೆ ಸಹೋದರಿ ದಿವ್ಯಾ ಧಾವಿಸಿದ್ದಾರೆ. ಅಕ್ಕ ತಂಗಿ ಇಬ್ಬರೂ ನೀರಿನಲ್ಲಿನ ಕೆಸರಿನಲ್ಲಿ ಸಿಲುಕಿಕೊಂಡಿದ್ದಾರೆ. ಇವರಿಬ್ಬರನ್ನು ರಕ್ಷಣೆ ಮಾಡಲು ದೀಪಾರಾಣಿ ಮುಂದಾಗಿದ್ದಾರೆ. ಅವರೂ ಸಹ ನೀರಿಗೆ ಇಳಿದಿದ್ದಾರೆ. ಆದ್ರೆ, ಉಸಿರುಗಟ್ಟಿ ಮೂವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಕೂಡಲೇ ಕೆರೆ ಬಳಿ ಆಗಮಿಸಿದ್ದಾರೆ. ಆದ್ರೆ, ಬರುವಷ್ಟರಲ್ಲಿ ಮೂವರೂ ಇಹಲೋಕ ತ್ಯಜಿಸಿ ಆಗಿತ್ತು. ಇಬ್ಬರು ಯುವತಿಯರು ಹಾಗೂ ಗೃಹಿಣಿ ಸಾವಿಗೆ ಇಡೀ ಊರೇ
ಕಂಬಿನಿ ಮಿಡಿದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ, ಚನ್ನಗಿರಿ ಪೊಲೀಸರು ಆಗಮಿಸಿದ್ದು, ಸ್ಥಳೀಯರ ಸಹಕಾರದಿಂದ ಮೂರು ಮೃತದೇಹಗಳನ್ನು ಮೇಲಕ್ಕೆ ತೆಗೆಯಲಾಗಿದೆ.