SUDDIKSHANA KANNADA NEWS/ DAVANAGERE/ DATE-04-05-2025
ದಾವಣಗೆರೆ: ನಾಡಿನ ಒಳಿತಿಗಾಗಿ ಹಾಗೂ ದಾವಣಗೆರೆ ಜಿಲ್ಲೆಯ ಸಮಗ್ರ ಅಭಿವೃದ್ದಿಗಾಗಿ ಮಾಜಿ ಸಚಿವರು ಹಾಗೂ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರ ಕುಟುಂಬವು ಹಗಲಿರುಳು ಶ್ರಮಿಸುತ್ತಿದೆ ಎಂದು ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ವೀರಸಿಂಹಾಸನ ಮಠದ ಪರಮಪೂಜ್ಯ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಮಹಾಸ್ವಾಮಿಗಳು ಅಭಿಪ್ರಾಯ ಪಟ್ಟರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟೀಯ ಅಧ್ಯಕ್ಷರು ಹಾಗೂ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರ ನಿವಾಸದಲ್ಲಿ ಧಾರ್ಮಿಕ ಹಾಗೂ ಇಷ್ಟಲಿಂಗ ಮಹಾ ಪೂಜಾ ಕಾರ್ಯಕ್ರಮವನ್ನು ನಡೆಸಿ, ಸರ್ವರಿಗೂ ಆಶಿರ್ವಚನವನ್ನು ನೀಡಿ ಮಾತನಾಡಿದರು.
ದಾವಣಗೆರೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಅವರು ಹಾಗೂ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರು ಹಗಲಿರುಳೆನ್ನದೆ ಜನಪರ ಕಾರ್ಯಗಳನ್ನು ಮಾಡುತ್ತಿರುವರು ಎಂದರು.
ಡಾ. ಪ್ರಭಾ ಮಲ್ಲಿಕಾರ್ಜುನ ಅವರು ಕ್ರೀಯಾಶೀಲ ಸಂಸದರಾಗಿರುವರು, ನೊಂದವರ ಧ್ವನಿಯಾಗಿರುವರು, ಕಷ್ಟ ಎಂದು ಬಂದವರ ಸಮಸ್ಯೆಗಳಿಗೆ ತಕ್ಷಣಕ್ಕೆ ಸ್ಪಂದಿಸುವ ಗುಣದವರು. ನಾವು ಸಹ ಅವರನ್ನು ಗಮನಿಸುತ್ತಲೆ ಬಂದಿದ್ದು, ಡಾ.ಪ್ರಭಾ ಮಲ್ಲಿಕಾರ್ಜುನ ಅವರು ಸಂಸದರಾಗಿ ಆಯ್ಕೆಯಾದಗಿನಿಂದಲೂ ಹಾಗೂ ಜನತೆಯು ಕೊಟ್ಟ ಅವಕಾಶವನ್ನು ಸಂಸದರು ಸದ್ಬಳಕೆ ಮಾಡಿಕೊಳ್ಳುತ್ತಿರುವರು. ಇಡೀ ದೇಶವು ದಾವಣಗೆರೆ ಜಿಲ್ಲೆಯನ್ನು ನೋಡುವಂತೆ ಮಾಡಿದ ಕೀರ್ತಿ ಸಚಿವರು ಹಾಗೂ ಸಂಸದರಿಗೆ ಸಲ್ಲುತ್ತದೆ ಎಂದರೆ ತಪ್ಪಾಗಲಾರದು ಎಂದರು.
ಹಿರಿಯ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ ಅವರು ಮಾತನಾಡಿ, ವೀರಶೈವ ಧರ್ಮ ಪರಂಪರೆಯಲ್ಲಿ ಅತ್ಯಂತ ಪ್ರಾಚೀನ ಪರಂಪರೆ ರಂಭಾಪುರಿ ಪೀಠಕ್ಕೆ ಇತಿಹಾಸ ಇದೆ. 121 ಪರಮಾಚಾರ್ಯರು ಪೀಠವನ್ನು ಅಲಂಕರಿಸಿದ ಇತಿಹಾಸದ ಪುಟಗಳಿಂದ ಕಾಣುತ್ತಿದ್ದೇವೆ. ರಾಜ ಮನೆತನಗಳಿಗೂ ಸಹ ಮಾರ್ಗದರ್ಶನ ಮಾಡಿ ಅಶೀರ್ವದಿಸಿದ ಕೀರ್ತಿ ಪೀಠಗಳಿಗೆ ಇದೆ. ರಂಭಾಪುರಿ ಪೀಠದ ಲಿಂಗೈಕ್ಯ ಶಿವಾನಂದ ಜಗದ್ಗುರುಗಳು ಮೈಸೂರು ರಾಜರಿಗೆ ಮಾರ್ಗದರ್ಶನ ಮಾಡಿರುವರು. ಲಿಂಗೈಕ್ಯ ಗಂಗಾಧರ ಜಗದ್ಗುರುಗಳ ಇಷ್ಟಲಿಂಗ ಪೂಜೆಯನ್ನು ನಾವು ನೋಡಿದ್ದೇವೆ. ಶ್ರೀ ಗಂಗಾಧರ ಜಗದ್ಗುರುಗಳ ಅವಾ-ಭಾವ ಪೂಜೆ ವೈಭವ ವನ್ನು ಪ್ರಸ್ತುತ ರಂಭಾಪುರಿ ಪೀಠದ ಜಗದ್ಗುರುಗಳ ಹತ್ತಿರ ನೋಡುತ್ತಿದ್ದೇವೆ. ನಮ್ಮ ಮಕ್ಕಳಿಗೆ ಗುರುಪೂಜೆಯಿಂದ ಅಧ್ಯಾತ್ಮದ ಶ್ರದ್ಧೆಯನ್ನು ಕಲಿಸಿದಂತಾಗಿದೆ ಎಂದರು.
ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರು ಮಾತನಾಡಿ, ನಮ್ಮ ಕುಟುಂಬವು ಗುರು ಪರಂಪರೆಯ ಮಾರ್ಗದರ್ಶನದಲ್ಲಿ ಬೆಳೆದು ಬಂದಿದೆ. ಅಂದಿನಿಂದ ಇಂದಿನವರೆಗೂ ಗುರುಗಳ ಮಾರ್ಗದರ್ಶನದಲ್ಲಿ ಮತ್ತು ಅಶೀರ್ವಾದದಲ್ಲಿ ಬೆಳಿದ್ದಿದ್ದೇವೆ. ಪ್ರಸ್ತುತ ಜಗದ್ಗುರುಗಳು ನಮ್ಮ ಮನೆಯಲ್ಲಿ ಇಷ್ಟಲಿಂಗ ಮಹಾಪೂಜೆ ಮಾಡಿದ್ದು ನಮ್ಮ ಮನೆಯ ಸೌಭಾಗ್ಯವಾಗಿದೆ ಎಂದರು.
ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರು ಮಾತನಾಡಿ ನಮ್ಮ ಮನೆಗೆ ಆಗಮಿಸಿದ ಎಲ್ಲಾ ಪೂಜ್ಯರಲ್ಲಿಯೂ ಸಹ ಒಂದು ರೀತಿಯ ಅಧ್ಯಾತ್ಮಿಕ ಶಕ್ತಿ ಇದೆ ಎಂದು ನಂಬಿದ್ದೇವೆ. ಶ್ರೀಗಳಿಂದ ಆಶಿರ್ವಾದ ಪಡೆದ ನಾವುಗಳು ಹಾಗೂ ಭಕ್ತರೇ ಧನ್ಯರು ಎಂದರು.
ಇಷ್ಟಲಿಂಗ ಮಹಾಪೂಜಾ ಕಾರ್ಯಕ್ರಮದಲ್ಲಿ ಎಡೆಯೂರು ಬಾಳೇಹೊನ್ನುರುಮಠ ಕ್ಷೇತ್ರದ ಶ್ರೀ ಷ.ಬ್ರ. ರೇಣುಕ ಶಿವಾಚಾರ್ಯ ಸ್ವಾಮಿಗಳು, ಸೂಡಿ ಹಿರೇಮಠದ ಶ್ರೀ ಷ ಬ್ರ. ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು, ಸಿದ್ದರಬೆಟ್ಟ ರಂಭಾಪುರಿ ಶಾಖಾ ಮಠದ ಶ್ರೀ ಷ.ಬ್ರ ವೀರಭದ್ರ ಶಿವಾಚಾರ್ಯ ಸ್ವಾಮಿಗಳು, ತಾವರೆಕೆರೆ ಶೀಲಾಮಠದ ಶ್ರೀ ಷ ಬ್ರ ಡಾ.ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು, ಶಾಮನೂರು ಶಿವಶಂಕರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.