SUDDIKSHANA KANNADA NEWS/ DAVANAGERE/ DATE:26-02-2025
ಬರೇಲಿ: ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದ ವಿವಾಹದ ವಿಧಿವಿಧಾನ ವೇಳೆ ಯಡವಟ್ಟಾಗಿದೆ. ವರ ಕುಡಿದು ಬಂದು ವಧುವಿನ ಆತ್ಮೀಯ ಗೆಳತಿಗೆ ಹಾರ ಹಾಕಿದ. ಇದರಿಂದ ಆಕ್ರೋಶಗೊಂಡ 21ರ ಹರೆಯದ ವಧು ರಾಧಾದೇವಿ ವರನಿಗೆ ಕಪಾಳಮೋಕ್ಷ ಮಾಡಿ, ಮದುವೆಯನ್ನು ರದ್ದುಪಡಿಸಿ ಅಲ್ಲಿಂದ ತೆರಳಿದ್ದಾಳೆ.
26 ವರ್ಷದ ವರ ರವೀಂದ್ರ ಕುಮಾರ್ ಮದುವೆ ಮೆರವಣಿಗೆ ಸ್ಥಳಕ್ಕೆ ತಡವಾಗಿ ಬಂದ. ಎಫ್ಐಆರ್ ಪ್ರಕಾರ ವರನ ಕಡೆಯವರು ಹೆಚ್ಚುವರಿ ವರದಕ್ಷಿಣೆ ಕೇಳಿದ್ದಾರೆ. ವಧುವಿನ ತಂದೆ ವಿವಾಹ ಪೂರ್ವ ಸಮಾರಂಭದಲ್ಲಿ 2.5 ಲಕ್ಷ ಮತ್ತು ಶನಿವಾರದಂದು ಮತ್ತೊಂದು 2 ಲಕ್ಷ ನೀಡಿರುವುದಾಗಿ ಹೇಳಿಕೊಂಡರೂ ಇದು ಸಾಕಾಗಲಿಲ್ಲ. ಆದ್ರೆ. ವರನು ಬೇರೆಯೊಬ್ಬಳ ಜೊತೆ ಪ್ರೀತಿಯಲ್ಲಿ ಬಿದ್ದ ಕಾರಣ ಕುಡಿದು ಬಂದಿದ್ದ ಎಂದು ತಿಳಿದು ಬಂದಿದೆ.
ವರನು ತಾನು ಪ್ರೀತಿಸುತ್ತಿದ್ದ ಹುಡುಗಿ ಮದುವೆಯಾಗಲು ಬಯಸಿದ್ದನು. ಆತ ಕುಡಿದು ಬಂದು ಕುಟುಂಬ ಸದಸ್ಯರೊಂದಿಗೆ ಅನುಚಿತವಾಗಿ ವರ್ತಿಸಿದ್ದ ಎನ್ನಲಾಗಿದೆ. ಮದುವೆಯ ವಿಧಿವಿಧಾನಗಳ ಮುಂಚೆಯೇ ಸ್ನೇಹಿತರೊಟ್ಟಿಗೆ ಎಣ್ಣೆ ಹೊಡೆದಿದ್ದಾನೆ.
ಮದ್ಯದ ಅಮಲಿನಲ್ಲಿ ವರನು ಆಕಸ್ಮಿಕವಾಗಿ ವಧುವಿನ ಆತ್ಮೀಯ ಗೆಳತಿಗೆ ಮಾಲೆ ಹಾಕಿದನು, ಅವಳ ಪಕ್ಕದಲ್ಲಿ ನಿಂತನು. ಇದರಿಂದ ಕೋಪಗೊಂಡ ದೇವಿ ವರನಿಗೆ ಕಪಾಳಮೋಕ್ಷ ಮಾಡಿ ಕುಮಾರ್ ಅವರನ್ನು ಮದುವೆಯಾಗಲು ನಿರಾಕರಿಸಿ ಅಲ್ಲಿಂದ ಹೊರನಡೆದರು.
ಎರಡು ಕುಟುಂಬಗಳ ನಡುವೆ ವಾಗ್ವಾದ ನಡೆದಿದ್ದು, ಇಬ್ಬರೂ ಪರಸ್ಪರ ಕುರ್ಚಿಗಳನ್ನು ಎಸೆದಿದ್ದಾರೆ, ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಭಾಯಿಸಲು ಹರಸಾಹಸ ಪಟ್ಟರು. ಮದುವೆಯ ಮೆರವಣಿಗೆಯು ನಿಂತಿತು.
ವರದಿಯ ಪ್ರಕಾರ, ವರನ ಸ್ನೇಹಿತರು ಮದ್ಯ ಖರೀದಿಸಿ ಶ್ರೀಕುಮಾರ್ಗೆ ನೀಡಿದ್ದಾರೆ. ಪ್ರಕರಣದಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಉದ್ದೇಶಪೂರ್ವಕವಾಗಿ ವಧುವಿನ ಕುಟುಂಬಕ್ಕೆ ಅವಮಾನ ಮಾಡಿ ಶಾಂತಿ ಕದಡಿದ್ದಕ್ಕಾಗಿ ಪೊಲೀಸರು ವರ ಮತ್ತು ಸ್ನೇಹಿತರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ವರದಕ್ಷಿಣೆಗೆ ಒತ್ತಾಯಿಸಿದ ವರನ ವಿರುದ್ಧವೂ ಪ್ರಕರಣ ದಾಖಲಾಗಿದೆ.