SUDDIKSHANA KANNADA NEWS/ DAVANAGERE/ DATE-06-05-2025
ದಾವಣಗೆರೆ: ನಗರದ ಹದಡಿ ರಸ್ತೆಯಲ್ಲಿನ ಇಸ್ಪೀಟ್ ಕ್ಲಬ್ ನಲ್ಲಿ ಹತ್ಯೆಗೀಡಾದ ರೌಡಿಶೀಟರ್ ಕಣುಮಾ ಅಲಿಯಾಸ್ ಸಂತೋಷ್ ಕುಮಾರ್ ಕೊಲೆ ಪ್ರಕರಣದ ಹತ್ತು ಆರೋಪಿಗಳು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪೊಲೀಸ್ ಠಾಣೆಗೆ ಹಾಜರಾಗಿ ಶರಣಾಗಿದ್ದಾರೆ.
ಸಂತೋಷ್ ಅಲಿಯಾಸ್ ಕಣುಮಾ ಹತ್ಯೆ ಪ್ರಕರಣ ಸಂಚಲನ ಮೂಡಿಸಿತ್ತು. ಆದ್ರೆ, ಆರೋಪಿಗಳು ಹೊಳಲ್ಕೆರೆ ಪೊಲೀಸ್ ಠಾಣೆಗೆ ಹೋಗಿ ಹಾಜರಾಗಿರುವುದು ಕುತೂಹಲ ಕೆರಳಿಸಿದೆ. ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಅವರು ಠಾಣೆಗೆ ಭೇಟಿ ನೀಡಿ, ಆರೋಪಿಗಳ ಮಹಜರು ನಡೆಸಿದ್ದಾರೆ.
ಹತ್ಯೆ ಮಾಡಿದ ಆರೋಪಿಗಳ ವಿವರ:
ದಾವಣಗೆರೆಯ ಆರ್ ಎಂ ಸಿ ರಸ್ತೆಯ ಭಾರತ್ ಕಾಲೋನಿ ನಿವಾಸಿಯಾದ ಟೈಲ್ಸ್ ಕೆಲಸ ಮಾಡುತ್ತಿದ್ದ ಸಂತೋಷ (28), ಭಾರತ್ ಕಾಲೋನಿಯ ಟೈಲ್ಸ್ ಕೆಲಸ ಮಾಡುತ್ತಿದ್ದ ಕಾರ್ತಿಕ್ (29), ದಾವಣಗೆರೆ ನಗರದ ಬಾಬು ಜಗಜೀವನ್ ರಾಮ್ ನಗರದ ಬೂದಾಳ್ ರಸ್ತೆಯ ವಾಸಿಯಾದ ಹಮಾಲಿ ಕೆಲಸ ಮಾಡುತ್ತಿದ್ದ ಪ್ರಭು (30), ನವೀನ್ ಅಲಿಯಾಸ್ ಬಾಕ್ರಿ (25). ರಾಜ ಅಲಿಯಾಸ್ ತಾರಕ್ (25), ಹರಳಯ್ಯನಗರದ ಹಳೇಚಿಕ್ಕನಹಳ್ಳಿ ವಾಸಿಯೂ ಆದ ಪೇಟಿಂಗ್ ಕೆಲಸ ಮಾಡುತ್ತಿದ್ದ ನವೀನ್ @ ಸೈಲೆಂಟ್ ನವೀನ್ (20), ಭಾರತ್ ಕಾಲೋನಿ ನಿವಾಸಿ ಮಾರುತಿ (25), ಭಾರತ್ ಕಾಲೋನಿಯ ಟೈಲ್ಸ್ ಕೆಲಸ ಮಾಡುತ್ತಿದ್ದ ಬಸವರಾಜ್ ಅಲಿಯಾಸ್ ಪಿಂಕಿ (20), ಆವರಗೆರೆಯ ಪ್ರಥಮ ವರ್ಷದ ಬಿ. ಕಾಂ. ವಿದ್ಯಾರ್ಥಿ ಜಯಸೂರ್ಯ ಅಲಿಯಾಸ್ ಪಿ. ಟಿ. (20), ಆಟೋ ಡ್ರೈವರ್ ಭರತ್ ಅಲಿಯಾಸ್ ಸ್ಲಮ್ (26) ಶರಣಾದ ಆರೋಪಿಗಳು.
ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆ ಮಾಡಿರುವುದಾಗಿ ಆರೋಪಿಗಳು ಪೊಲೀಸರ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಯಾರ ಮೇಲೆಲ್ಲಾ ಡೌಟ್ ಇತ್ತು?
ದಾವಣಗೆರೆಯ ಹದಡಿ ರಸ್ತೆಯ ಕ್ಲಬ್ ವೊಂದರಲ್ಲಿ ನಡೆದ ರೌಡಿ ಶೀಟರ್ ಕಣುಮಾ ಅಲಿಯಾಸ್ ಸಂತೋಷ್ ಕುಮಾರ್ ಹತ್ಯೆ ಪ್ರಕರಣ ಬೆಚ್ಚಿಬೀಳಿಸುವಂತಿದೆ. ಕೇವಲ 36 ಸೆಕೆಂಡ್ ನಲ್ಲಿ ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿಗಳ ಪೈಕಿ ಹತ್ತು ಮಂದಿ ಈಗ ಪೊಲೀಸರಿಗೆ ಶರಣಾಗಿದ್ದಾರೆ.
ವಿದ್ಯಾನಗರ ಪೊಲೀಸ್ ಠಾಣೆಗೆ ಕಣುಮಾ ಅಲಿಯಾಸ್ ಸಂತೋಷ್ ಕುಮಾರ್ ಪತ್ನಿ ನೀಡಿದ್ದ ದೂರಿನಲ್ಲಿ 12 ಮತ್ತು ಇತರೆ ಆರೋಪಿಗಳ ವಿರುದ್ಧ ಕೊಲೆ ಮಾಡಿದ ಆರೋಪ ಮಾಡಲಾಗಿತ್ತು. ಗುಂಡಪ್ಪ, ಕಾರ್ತಿಕ್ ಭಾರತ್ ಕಾಲೋನಿ, ನವೀನ್ ಬೂದಾಳ್ ರಸ್ತೆ, ಖಾರದ ಪುಡಿ ಮಂಜನ ತಮ್ಮ ನವೀನ್, ಚಾವಳಿ ಸಂತು, ಬಸವರಾಜ್ ಅಲಿಯಾಸ್ ಬಸ್ಯ, ಹನುಮಂತ, ಗಡ್ಡ ವಿಜಿ, ಚಿಕ್ಕನಹಳ್ಳಿ ಶಿವು, ಕಡ್ಡಿ ರಘು, ಪ್ರಶಾಂತ್ ಅಲಿಯಾಸ್ ಪಚ್ಚಿ, 60 ಅಡಿ ರೋಡ್ ಗಣಿ ಮತ್ತು ಇತರರು ಸೇರಿ ನನ್ನ ಪತಿಯನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ನಿಟುವಳ್ಳಿಯ ಖಾದಿ ಕೇಂದ್ರದ ಹತ್ತಿರ ಕಣುಮಾ ಅಲಿಯಾಸ್ ಸಂತೋಷ್ ಕುಮಾರ್ ಅವರು ಪತ್ನಿ ಹಾಗೂ ಪುತ್ರನೊಂದಿಗೆ ವಾಸವಾಗಿದ್ದರು. ಸೋಮವಾರ ಮಧ್ಯಾಹ್ನ 1 ಗಂಟೆಯಿಂದ 1.30ರ ಸುಮಾರಿನಲ್ಲಿ ಮನೆಗೆ ಬಂದು ಊಟ ಮಾಡಿ ವ್ಯವಹಾರದ ಕೆಲಸ ಇರುವುದಾಗಿ ಹೇಳಿ ಹೋಗಿದ್ದರು. ಆದ್ರೆ, 5.30ರಿಂದ 5.45ರ ನಡುವೆ ಸಂಬಂಧಿ ಮಂಜುನಾಥನು ಫೋನ್ ಮಾಡಿ ಯಾರೋ ದುಷ್ಕರ್ಮಿಗಳು ನನ್ನ ಗಂಡನನ್ನು ಕೊಂದು ಹಾಕಿದ್ದಾರೆ ಎಂದು ತಿಳಿಸಿದರು. ಕೂಡಲೇ ನಾನು ಹಾಗೂ ನನ್ನ ಮಗ ಹತ್ಯೆಯಾದ ಸ್ಥಳಕ್ಕೆ ಹೋದೆವು. ಅಲ್ಲಿ ನೋಡಿದರೆ ಮೃತದೇಹವು ರಕ್ತಸಿಕ್ತವಾಗಿ ಇತ್ತು ಎಂದು ದೂರಿನಲ್ಲಿ ಹೇಳಿದ್ದಾರೆ.
ನನ್ನ ಗಂಡನನ್ನು ಯಾವುದೋ ದುರುದ್ದೇಶದಿಂದ ಹತ್ಯೆ ಮಾಡಿರುವ ಗುಂಡಪ್ಪ, ಕಾರ್ತಿಕ್ ಭಾರತ್ ಕಾಲೋನಿ, ನವೀನ್ ಬೂದಾಳ್ ರಸ್ತೆ, ಖಾರದ ಪುಡಿ ಮಂಜನ ತಮ್ಮ ನವೀನ್, ಚಾವಳಿ ಸಂತು, ಬಸವರಾಜ್ ಅಲಿಯಾಸ್ ಬಸ್ಯ, ಹನುಮಂತ, ಗಡ್ಡ ವಿಜಿ, ಚಿಕ್ಕನಹಳ್ಳಿ ಶಿವು, ಕಡ್ಡಿ ರಘು, ಪ್ರಶಾಂತ್ ಅಲಿಯಾಸ್ ಪಚ್ಚಿ, 60 ಅಡಿ ರೋಡ್ ಗಣಿ ಮತ್ತು ಇತರರ ವಿರುದ್ಧ ಕಾನೂನು ಕ್ರಮ ಜರುಗಿಸಿ ಶಿಕ್ಷೆ ವಿಧಿಸಬೇಕು ಎಂದು ಸಂತೋಷ್ ಕುಮಾರ್ ಪತ್ನಿ ಅವರು ದೂರಿನಲ್ಲಿ ಆಗ್ರಹಿಸಿದ್ದರು.