SUDDIKSHANA KANNADA NEWS/ DAVANAGERE/ DATE-03-05-2025
ಮಂಗಳೂರು: ಹಿಂದೂ ಮುಖಂಡ, ಬಜರಂಗದಳದ ಮಾಜಿ ಸದಸ್ಯ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ.
42 ವರ್ಷದ ಸುಹಾಸ್ ಶೆಟ್ಟಿ ಅವರನ್ನು ಸುರತ್ಕಲ್ ಸಮೀಪ 9 ಮಂದಿ ತಂಡವು ಅಟ್ಯಾಕ್ ಮಾಡಿ ಹತ್ಯೆ ಮಾಡಿತ್ತು. ಈ ಪ್ರಕರಣ ಕರಾವಳಿಯ ಶಾಂತಿಗೆ ಭಂಗ ತಂದಿತ್ತು. ಮಾತ್ರವಲ್ಲ, ಆರೋಪಿಗಳ ಬಂಧನಕ್ಕೆ ಸಂಸದ, ಮಾಜಿ ಸಂಸದರು, ಶಾಸಕರು ಸರ್ಕಾರ ಒತ್ತಾಯಿಸಿದ್ದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೇಂದ್ರ ಸರ್ಕಾರಕ್ಕೆ ಈ ಪ್ರಕರಣ ಎನ್ ಐ ಎಗೆ ವಹಿಸುವಂತೆ ಪತ್ರ ಬರೆದಿದ್ದರು.
ಮಂಗಳೂರು ಪೊಲೀಸರು ಪ್ರಮುಖ ಆರೋಪಿ ಸೇರಿದಂತೆ ಎಂಟು ಕೊಲೆಗಡುಕರನ್ನು ಬಂಧಿಸಿದ್ದಾರೆ. 2022 ರ ಫಾಜಿಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯೂ ಆಗಿದ್ದ ಸುಹಾಸ್ ಶೆಟ್ಟಿ ಅವರನ್ನು ದುಷ್ಕರ್ಮಿಗಳ ಗುಂಪೊಂದು ಹತ್ಯೆ ಮಾಡಿತ್ತು.
ಈ ಘಟನೆಯು ದಕ್ಷಿಣ ಕನ್ನಡದ ಕರಾವಳಿ ಜಿಲ್ಲೆಯಾದ್ಯಂತ ಆಕ್ರೋಶಕ್ಕೂ ಕಾರಣವಾಗಿತ್ತು. ಮೇ 6ರವರೆಗೆ ನಿಷೇಧಾಜ್ಞೆಯನ್ನೂ ವಿಧಿಸಲಾಗಿತ್ತು.
ಸುಹಾಸ್ ಶೆಟ್ಟಿ ಯಾರು?
42 ವರ್ಷದ ಶೆಟ್ಟಿ ಕರ್ನಾಟಕದ ಕರಾವಳಿ ರಾಜಕೀಯದಲ್ಲಿ ವಿವಾದಾತ್ಮಕ ವ್ಯಕ್ತಿಯಾಗಿದ್ದರು. ಕ್ರಿಮಿನಲ್ ಹಿನ್ನೆಲೆಯೂ ಇತ್ತು. ಈ ಪ್ರದೇಶದಲ್ಲಿ ಚಿರಪರಿಚಿತರಾಗಿದ್ದರು. ಅವರ ವಿರುದ್ಧ ಐದು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ದಕ್ಷಿಣ ಕನ್ನಡದಲ್ಲಿ ಒಂದು ಮತ್ತು ಮಂಗಳೂರು ನಗರದಲ್ಲಿ ನಾಲ್ಕು. ಹಿಂದುತ್ವ ಸಂಘಟನೆಗಳೊಂದಿಗೆ, ವಿಶೇಷವಾಗಿ ಬಜರಂಗದಳದೊಂದಿಗೆ ಅವರ ದೀರ್ಘಕಾಲದಿಂದಲೂ ನಂಟು ಹೊಂದಿದ್ರು. ಹಿಂದುತ್ವಕ್ಕೆ ಕೊನೆ ಉಸಿರು ಇರುವವರೆಗೂ ಹೋರಾಡವುದಾಗಿ ಹೇಳಿದ್ದರು.
2022 ರಲ್ಲಿ ಕಾಟಿಪಳ್ಳದ ಮಂಗಳಪೇಟೆಯ ಮುಸ್ಲಿಂ ಯುವಕ 23 ವರ್ಷದ ಮೊಹಮ್ಮದ್ ಫಾಜಿಲ್ ಹತ್ಯೆಯಲ್ಲಿ ಪ್ರಮುಖ ಆರೋಪಿಗಳಲ್ಲಿ ಒಬ್ಬನೆಂದು ಹೆಸರಿಸಲ್ಪಟ್ಟ ನಂತರ ಬೆಳಕಿಗೆ ಬಂದಿದ್ದರು. ಸುಳ್ಯದಲ್ಲಿ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆಯಾದ ಕೇವಲ ಎರಡು ದಿನಗಳ ನಂತರ ಫಜಿಲ್ ಅವರ ಕೊಲೆ ಸಂಭವಿಸಿತ್ತು. ಕರ್ನಾಟಕದ ಕರಾವಳಿ ಪ್ರದೇಶ ಮಂಗಳೂರಿನಾದ್ಯಂತ ಕೋಮು ಉದ್ವಿಗ್ನತೆಗೆ ಕಾರಣವಾಗಿತ್ತು. ಈಗ ಪ್ರತೀಕಾರಕ್ಕಾಗಿ ಸುಹಾಸ್ ಶೆಟ್ಟಿ ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.