ಮಂಗಳೂರು: ನಗರದಲ್ಲಿ ಫುಟ್ ಬಾಲ್ ಆಟದ ವಿಷಯವಾಗಿ ವಿವಾದ ಏರ್ಪಟ್ಟು ವಿದ್ಯಾರ್ಥಿಗಳ ಗುಂಪು ಮತ್ತೊಂದು ತಂಡದ ವಿದ್ಯಾರ್ಥಿಗಳನ್ನು ಅಪಹರಿಸಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಸೋಮವಾರ ಸಂಜೆ ನಡೆದಿದೆ. ಈ ಸಂಬಂಧ 9 ಜನರ ಮೇಲೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೆಹರು ಮೈದಾನಿನಲ್ಲಿ ಸ್ವಾತಂತ್ರೋತ್ಸವದ ಅಂಗವಾಗಿ ಆಗಸ್ಟ್ 14 ಆಯೋಜಿಸಿದ್ದ ಫುಟ್ ಬಾಲ್ ಪಂದ್ಯಾಟ ವೇಳೆ ವಿದ್ಯಾರ್ಥಿ ಗುಂಪುಗಳ ಮಧ್ಯೆ ಉಂಟಾದ ಮತಭೇದ ಇದಕ್ಕೆ ಕಾರಣವೆಂದು ಶಂಕಿಸಲಾಗಿದೆ.
ಸಂತ ಅಲೋಸಿಯಸ್ ಕಾಲೇಜು ಮತ್ತು ಯೆನಪೋಯಾ ಕಾಲೇಜಿನ ವಿದ್ಯಾರ್ಥಿಗಳ ಫುಟ್ ಬಾಲ್ ಆಟದ ವೇಳೆ ಮೊಹಮ್ಮದ್ ಮತ್ತು ಆತನ ಸ್ನೇಹಿತರಾದ ಮೊಹಮ್ಮದ್ ಅಫ್ರಾನ್, ಇಬ್ರಾಹಿಂ ಖಲೀಲ್ ಪಾರಿಸ್ ಮತ್ತು ಮೊಹಮ್ಮದ್ ಜುನೈದ್ ರವರು ಯೇನೆಪೋಯಾ ಟೀಂಗೆ ಸಪೋರ್ಟ್ ಮಾಡಿದ್ದಾರೆ ಎಂದು ಅಪಾದಿಸಿ, ಅನಾಸ್,ಅನ್ನೈ, ದಿಯಾನ್, ತಸ್ಮಿನ್, ಸಲ್ಮಾನ್ ಮತ್ತಿತರರು ಮೊಹಮ್ಮದ್ ರನ್ನು ಕಾರಿನಲ್ಲಿ ಅಪಹರಿಸಿ ಮಹಾಕಾಳಿ ಪಡ್ಪು ಬಳಿ ಕಾಲಿನಿಂದ ತುಳಿದು, ಸಿಗರೇಟ್ ನಿಂದ ಸುಟ್ಟು ಗಂಭಿರ ಹಲ್ಲೆ ನಡೆಸಿದ್ದಾರೆ.
ಜೊತೆಗೆ ಅವರ ಸ್ನೇಹಿತರನ್ನು ಕರೆಸಿ ಕಾರಿನಲ್ಲಿ ಕೂರಿಸಿ ಪಡೀಲ್ ಕಣ್ಣೂರು ಬಳಿ ಖಾಲಿ ಸ್ಥಳದಲ್ಲಿ ಕರೆದುಕೊಂಡು ಹೋಗಿ ಅಲ್ಲಿಯೂ ಮರಾಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಮಂಗಳೂರು ನಗರದ ಮೂರು ಕಡೆ ಕರೆದುಕೊಂಡು ಹೋಗಿ ಅರೆಬೆತ್ತಲು ಗೊಳಿಸಿ ಬಸ್ಕಿ ಹೊಡೆಸಿ ಕ್ಷಮೆ ಕೇಳುವಂತೆ ಹಲ್ಲೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಈ ಸಂಬಂಧ ನಗರದ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.