SUDDIKSHANA KANNADA NEWS/ DAVANAGERE/ DATE:15-08-2024
ದಾವಣಗೆರೆ: ಮಾಜಿ ಸಚಿವ ಎಸ್. ಎ. ರವೀಂದ್ರನಾಥ್ ಅವರು ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದವರು. ಮೊದಲಿನಿಂದಲೂ ಪರಿಚಯ. ನನಗೆ ಸಂಬಂಧದಲ್ಲಿ ಅಣ್ಣ ಆಗಬೇಕು. ಹೈಸ್ಕೂಲ್ ನಲ್ಲಿ ಓದುವಾಗಿನಿಂದಲೂ ರವೀಂದ್ರನಾಥ್ ಅವರೂ ಬಿಜೆಪಿ ಪಕ್ಷಕ್ಕಾಗಿ ದುಡಿದಿದ್ದಾರೆ. ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ವಿನಾಕಾರಣ ಇಂಥವರ ದೂಷಣೆ ಸಲ್ಲದು ಎಂದು ತೋಟಗಾರಿಕೆ ಇಲಾಖೆ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿಣಿ, ಶಂಕರ್ ನಾರಾಯಣ್, ಬಿಜೆಪಿ ಸೋಮಣ್ಣ, ತಾರಾನಾಥ್, ಸಾಕ್ರೆ ಇವರೆಲ್ಲರೂ ಬಿಜೆಪಿ ಪಕ್ಷ ಕಟ್ಟಲು ಶ್ರಮಿಸುತ್ತಿದ್ರು. ಆಗಿನ ಕಾಲದಲ್ಲಿಯೇ ಸಂಜೆ 5.30ಕ್ಕೆ ಕೂರುತ್ತಿದ್ದರು. ಒಂದು ವಾರದ
ಯೋಜನೆ ಹಾಕಿಕೊಳ್ಳುತ್ತಿದ್ದರು. ನಾವು ಬಿಜೆಪಿಯವರ ಬಳಿ ಮತ ಕೇಳಲು ಹೋಗಬಾರದಾ? ಎಂದು ಪ್ರಶ್ನಿಸಿದರು.
ನಾನು ಕಾರಿನಲ್ಲಿ ಬರುವಾಗ ಚುನಾವಣೆಯ ಮತದಾನದ ದಿನ ರವೀಂದ್ರನಾಥ್ ಅವರು ಸಿಕ್ಕರು. ಚಹಾ ಕುಡಿಯಲು ಸಹ ರವೀಂದ್ರನಾಥ್ ಅವರು ಕರೆಯಲಿಲ್ಲ. ನಾನು ಕರೆದೆ. ಎಲೆಕ್ಷನ್ ಮುಗಿದ ಮೇಲೆ ಬಾ ಎಂದ್ರು. ಅವರನ್ನು ಮಾತನಾಡಿಸಲೇಬಾರದಾ? ಮನೆಗೆ ಅವರೇನೂ ಕರೆದಿಲ್ಲ, ನಾನು ಹೋಗಿಲ್ಲ. ಹೋಳಿಗೆ ಊಟ ಮಾಡಿಸಿ ಕರೆಯಿರಿ ಎನ್ನುತ್ತೇನೆ. ಆಗ ಹೋಗಿಬರುತ್ತೇನೆ. ನಮ್ಮದು ಹೊಂದಾಣಿಕೆ ರಾಜಕಾರಣ ಇಲ್ಲ. ವಿನಾಕಾರಣ ಆರೋಪ ಮಾಡಬಾರದು
ಎಂದು ಮಲ್ಲಿಕಾರ್ಜುನ್ ಹೇಳಿದರು.
ಮಾಜಿ ಸಂಸದ ಸಿದ್ದೇಶ್ವರ ಅವರು ಆಲದ ಮರ ಬೇಡ ಜಾಲಿಮರದ ಕೆಳಗೆ ಕೂತು ಧ್ಯಾನ ಮಾಡಲಿ. ಅವರ ಪಾಪ ಅವರನ್ನೇ ತಿನ್ನುತ್ತದೆ. ಮೊದಲಿನಂತೆ ಮುಂದಿನ ಜನ್ಮ ಅಲ್ಲ ಈ ಜನ್ಮದಲ್ಲಿ ಅವರೇ ಅನುಭವಿಸಬೇಕು ಎಂದು ಲೇವಡಿ ಮಾಡಿದರು.
ಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ, ಎಸ್ಪಿ ಉಮಾಪ್ರಶಾಂತ್, ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ, ದೂಡಾ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ, ಮೇಯರ್ ವಿನಾಯಕ್ ಪೈಲ್ವಾನ್, ಪಾಲಿಕೆ ಸದಸ್ಯರಾದ ಗಡಿಗುಡಾಳ್ ಮಂಜುನಾಥ್, ಕೆ. ಚಮನ್ ಸಾಬ್,ಆಯೂಬ್ ಪೈಲ್ವಾನ್, ಗಣೇಶ್ ಹುಲ್ಲುಮನಿ, ನಾಗರಾಜ್ ಮತ್ತಿತರರು ಹಾಜರಿದ್ದರು.