SUDDIKSHANA KANNADA NEWS/ DAVANAGERE/ DATE-04-05-2025
ದಾವಣಗೆರೆ (Davanagere): ಸ್ವಾಭಿಮಾನ. ಇದು ಪ್ರತಿಯೊಬ್ಬ ನಾಗರಿಕರ ಜೀವನದಲ್ಲಿ ಅತ್ಯಮೂಲ್ಯ ಪಾಲನೆ. ಸ್ವಾಭಿಮಾನಿಯಾಗಿ ಬದುಕುವುದು ಅಷ್ಟು ಸುಲಭವಲ್ಲ. ಆದ್ರೆ, ರಾಜ್ಯದಲ್ಲಿ ಶೈಕ್ಷಣಿಕ ರಂಗದಲ್ಲಿ ಕ್ರಾಂತಿ ಎಬ್ಬಿಸಿರುವ ಹಾಗೂ ಕರ್ನಾಟಕದ ಜನರಲ್ಲಿ ಸ್ವಾಭಿಮಾನದ ಕಿಚ್ಚು ಹಚ್ಚುವ ಜೊತೆಗೆ ಬಡಿದೆಬ್ಬಿಸಿರುವ ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಹಾಗೂ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಅವರು ಈಗ ಎಲ್ಲರಿಗೂ ಚಿರಪರಿಚಿತ.
ಕರ್ನಾಟಕ ಮಾತ್ರವಲ್ಲ, ಭಾರತ ದೇಶದ ಹಲವು ರಾಜ್ಯಗಳಲ್ಲಿ ವಿನಯ್ ಕುಮಾರ್ ಅವರು ಮೂಡಿಸಿರುವ ಛಾಪು ಅಂತಿಂಥದ್ದಲ್ಲ. ಎಲ್ಲೇ ಹೋದರೂ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳನ್ನು ನೀಡಿದ ಕೊಡುಗೆ ಇನ್ ಸೈಟ್ಸ್ ಸಂಸ್ಥೆ. ಈ ಸಂಸ್ಥೆಯಲ್ಲಿ ಕೋಚಿಂಗ್ ಪಡೆದು ದೇಶ ಮತ್ತು ರಾಜ್ಯದಲ್ಲಿ ರ್ಯಾಂಕ್ ಪಡೆದವರ ಸಂಖ್ಯೆ ಕಡಿಮೆ ಏನಿಲ್ಲ. ಬರೋಬ್ಬರಿ 1500 ಕ್ಕೂ ಹೆಚ್ಚು ಅಧಿಕಾರಿಗಳು ಈಗ ದೇಶಾದ್ಯಂತ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಇನ್ ಸೈಟ್ಸ್ ಸಂಸ್ಥೆ ಎಂಬ ಐಎಎಸ್ ಕೋಚಿಂಗ್ ಸೆಂಟರ್.
ಇನ್ನು ವಿನಯ್ ಕುಮಾರ್ ಕೇವಲ ಶೈಕ್ಷಣಿಕ ರಂಗ ಮಾತ್ರವಲ್ಲ, ರಾಜಕಾರಣದಲ್ಲೂ ಅದೃಷ್ಟ ಪರೀಕ್ಷೆಗೆ ಇಳಿದವರು. ಕಳೆದ ಲೋಕಸಭೆ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಿಂದ ಕಣಕ್ಕಿಳಿದು ಸೋಲು ಕಂಡರೂ ಪಡೆದ ಮತಗಳು ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡಿದವರು. ವಿನಯ್ ಕುಮಾರ್ ಅವರು ಏಕಾಂಗಿಯಾಗಿ ಅಭಿಮನ್ಯುನಂತೆ ಹೋರಾಡಿದರೆ, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಗೆ ದೊಡ್ಡ ದೊಡ್ಡ ರಾಷ್ಟ್ರ ಮಟ್ಟದ ನಾಯಕರು ಬಂದು ಪ್ರಚಾರ ಮಾಡಿ ಹೋಗಿದ್ದರು. ಆದರೂ 43 ಸಾವಿರಕ್ಕೂ ಹೆಚ್ಚು ಮತ ಪಡೆದು ಇಡೀ ಕರ್ನಾಟಕದಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬರು ಅತಿ ಹೆಚ್ಚು ಮತ ಪಡೆದ ಹೆಗ್ಗಳಿಕೆ ಪಡೆದವರು.
READ ALSO THIS STORY: ದೇವಸ್ಥಾನ ನಿರ್ಮಾಣಕ್ಕೆ ಕಾಳಜಿ ತೋರುವಷ್ಟೇ ಶಾಲೆಗಳ ಅಭಿವೃದ್ಧಿಗೆ ಗಮನ ಅಗತ್ಯ: ಜಿ. ಬಿ. ವಿನಯ್ ಕುಮಾರ್ ಪ್ರತಿಪಾದನೆ
ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಕೆ. ಎಸ್. ಈಶ್ವರಪ್ಪ ರಾಜಕಾರಣದಲ್ಲಿ ನುರಿತವರು. ಶಾಸಕರಾಗಿ, ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ, ಉಪಮುಖ್ಯಮಂತ್ರಿಯಾಗಿ ಕಳೆದ ನಲ್ವತ್ತೈದು ವರ್ಷಗಳಿಂದಲೂ ರಾಜಕಾರಣ ಮಾಡಿದವರು. ಅವರಿಗಿಂತ ಹೆಚ್ಚಿನ ಮತ ಪಡೆದ ಜಿ. ಬಿ. ವಿನಯ್ ಕುಮಾರ್ ಅವರ ಸಾಮರ್ಥ್ಯ ಏನು ಎಂಬುದಕ್ಕೆ ಹಿಡಿದ ಕೈಗನ್ನಡಿ.
ವಿನಯ್ ಕುಮಾರ್ ಹಿನ್ನೆಲೆ:
ದಾವಣಗೆರೆ ತಾಲೂಕಿನ ಕಕ್ಕರಗೊಳ್ಳ ಗ್ರಾಮದಲ್ಲಿ ವಿನಯ್ ಕುಮಾರ್ ಅವರ ಬಾಲ್ಯ ಜೀವನ. ಬಾಲ್ಯಜೀವನ ಹೂವಿನ ಹಾಸಿಗೆ ಆಗಿರಲಿಲ್ಲ. ಕಷ್ಟಪಟ್ಟು ಓದಿದವರು. ಪ್ರತಿ ಹಂತದಲ್ಲಿಯೂ ಸವಾಲುಗಳನ್ನು ಮೆಟ್ಟಿಲನ್ನಾಗಿಸಿಕೊಂಡು ಮೇಲೆ ಬಂದವರು. ತಾವು ಕೈ ಹಾಕಿದ ಕ್ಷೇತ್ರಗಳಲ್ಲಿ ಯಶಸ್ಸು ಕಂಡಿರುವ ವಿನಯ್ ಕುಮಾರ್ ಅವರು ಜನಸೇವೆ ಮಾಡಬೇಕೆಂಬ ಕನಸು ಕಂಡಿರುವ ಜನಸೇವಕ.
ಇನ್ನು ಜಿ. ಬಿ. ವಿನಯ್ ಕುಮಾರ್ ಹುಟ್ಟಿದ್ದು ದಾವಣಗೆರೆಯಲ್ಲಿಯೇ. ತಂದೆ ಬಸವಂತಪ್ಪ ಗುದಗತ್ತಿಯವರ್ ಮತ್ತು ತಾಯಿ ರೇಣುಕಮ್ಮ ದಂಪತಿ ಪುತ್ರ. ವಿನಯ್ ಕುಮಾರ್ ಅವರಿಗೆ ಪುಸ್ತಕಗಳ ಮೇಲಿನ ಓದಿನ ಪ್ರೀತಿ ಬರಲು ಕಾರಣ ತಂದೆ
ಬಸವಂತಪ್ಪ ಅವರು. ಉಪನ್ಯಾಸಕರಾಗಿಯೂ ಕೆಲಸ ಮಾಡಿರುವ ಬಸವಂತಪ್ಪ ಅವರು ಎಲ್ಲೇ ಹೋದರೂ ಪುಸ್ತಕಗಳನ್ನು ಖರೀದಿಸಿ ತರುತ್ತಿದ್ದರು. ಇನ್ನು ಚಿಕ್ಕವಯಸ್ಸಿನಲ್ಲಿಯೇ ತಂದೆ ತರುತ್ತಿದ್ದ ಪುಸ್ತಕಗಳನ್ನು ಜೋಡಿಸಿಡುತ್ತಿದ್ದ ವಿನಯ್ ಕುಮಾರ್ ಓದಲು ಪ್ರಾರಂಭಿಸಿದರು. ಆ ನಂತರ ಹವ್ಯಾಸ ಆಯಿತು. ಜ್ಞಾನಾರ್ಜನೆಯೂ ಹೆಚ್ಚುತ್ತಾ ಹೋಯಿತು. ಆ ಬಳಿಕ ಎಲ್ಲೇ ಹೋಗಲಿ, ಪ್ರಯಾಣ ಮಾಡಲಿ, ಸಮಯ ಸಿಕ್ಕರೆ ಪುಸ್ತಕ ಓದುತ್ತಾರೆ.
ವಿದ್ಯಾರ್ಹತೆ ಮತ್ತು ಕೆಲಸ:
ವಿನಯ್ ಕುಮಾರ್ ಜಿ. ಬಿ. ಈಗ ಸದ್ಯ ಕರ್ನಾಟಕದಲ್ಲಿ ಚಿರಪರಿಚಿತವಾಗಿರುವ ಹೆಸರು. ಒಂದರಿಂದ ನಾಲ್ಕನೇ ತರಗತಿಯವರೆಗೆ ಕಕ್ಕರಗೊಳ್ಳದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ಆ ಬಳಿಕ ಚಿತ್ರದುರ್ಗದ ಜವಾಹರ್ ನವೋದಯ ವಿದ್ಯಾಲಯದಲ್ಲಿ (ಜೆಎನ್ವಿ) ಶಾಲಾ ಶಿಕ್ಷಣ ಪಡೆದರು. ಜೆನೆಟಿಕ್ಸ್ನಲ್ಲಿ ಪದವಿ ಪೂರ್ಣಗೊಳಿಸಿದ ನಂತರ, ಅವರು ಐಎಎಸ್ ಅಧಿಕಾರಿಯಾಗಬೇಕೆಂಬ ಗುರಿ ಹೊಂದಿದರು. ಹತ್ತಿರಹತ್ತಿರ ಬಂದು ಸ್ವಲ್ಪದರಲ್ಲಿಯೇ ತಪ್ಪಿ ಹೋಯಿತು. ಐಎಎಸ್ ಪರೀಕ್ಷೆ ಬರೆದರಲ್ಲದೇ, ಕೂದಲೆಳೆ ಅಂತರದಲ್ಲಿ ಸಾಧ್ಯ ಆಗಲಿಲ್ಲ. ಆ ನಂತರ ಕಟ್ಟಿದ್ದೇ ಇನ್ಸೈಟ್ಸ್ ಐಎಎಸ್ ಸಂಸ್ಥೆ. ಸಾವಿರಾರು ಜನರನ್ನು ಐಎಎಸ್ ಅಧಿಕಾರಿಗಳನ್ನಾಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಸರ್ಕಾರಿ ಅಧಿಕಾರಿಯಾಗಿ ಕೆಲಸ:
ಮೈಸೂರಿನಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿ ಕೆಲಸ ಮಾಡಿದವರು. ಇದಷ್ಟೇ ನನ್ನ ಗುರಿಯಲ್ಲ, ಬೇರೆಯದ್ದೇ ಇದೆ. ಹಾಗಾಗಿ, ಕೆಲಸಕ್ಕೆ ರಾಜೀನಾಮೆ ನೀಡಿದರು. ತಾನು ಕಲಿತ ವಿದ್ಯೆ, ಐಎಎಸ್ ನನ್ನ ಕೈಯಲ್ಲಿಂದ ಆಗದಿದ್ದರೂ ಬೇರೆಯವರು ವಂಚಿತರಾಗಬಾರದು ಎಂಬ ಕಾರಣಕ್ಕೆ ಐಎಎಸ್ ಕೋಚಿಂಗ್ ಸೆಂಟರ್ ಆರಂಭಿಸಿದರು. IAS ಆಕಾಂಕ್ಷಿಗಳಿಗೆ ಸರಿಯಾದ ಮಾರ್ಗದರ್ಶನ ನೀಡಿದರಲ್ಲದೇ, ಆನ್ಲೈನ್ ನಲ್ಲಿಯೂ ಟೀಚಿಂಗ್ ಕೊಟ್ಟರು. ಯುಪಿಎಸ್ಸಿ ಐಎಎಸ್ ತಯಾರಿಗಾಗಿ ಭಾರತದ ಪ್ರಮುಖ ವೆಬ್ಸೈಟ್ ಅನ್ನು ಮಾಡಿರುವ ಅವರು, ಅತ್ಯಂತ ಜನಪ್ರಿಯ ಮತ್ತು ಹೆಚ್ಚು ಬೇಡಿಕೆಯಿರುವ ಸಂಸ್ಥೆಯಾಗಿ ಬೆಳೆಸಿದ ಕೀರ್ತಿ ವಿನಯ್ ಕುಮಾರ್ ಅವರದ್ದು.
ಭಾರತದ ಐಎಎಸ್ ಮುಕುಟದ ಗರಿ:
ಇನ್ ಸೈಟ್ಸ್ ಐಎಎಸ್ ಸಂಸ್ಥೆಯು ಈಗ ಭಾರತದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದವರು. ಕರ್ನಾಟಕದತ್ತ ಇಡೀ ದೇಶವೇ ತಿರುಗಿನೋಡುವಂತೆ ಮಾಡಿದವರು. ಅತಿ ಹೆಚ್ಚು ರ್ಯಾಂಕ್ ನೀಡುತ್ತಿರುವ ಸಂಸ್ಥೆ ಎಂಬ ಖ್ಯಾತಿಯನ್ನೂ ಸಹ ಹೊಂದಿದೆ.
ಬೆಂಗಳೂರು, ದೆಹಲಿ, ಹೈದರಾಬಾದ್, ದಾವಣಗೆರೆ ಮತ್ತು ಜಮ್ಮುಕಾಶ್ಮೀರದಲ್ಲಿಯೂ ವಿನಯ್ ಕುಮಾರ್ ಜಿ ಬಿ ಅವರ ಮಾರ್ಗದರ್ಶನದಲ್ಲಿ ಸಂಸ್ಥೆಗಳು ನಡೆಯುತ್ತಿವೆ. ನಿಯಮಿತ ಲೇಖನಗಳು, ವೀಡಿಯೊಗಳು, ವೆಬ್ನಾರ್ಗಳು ಮತ್ತು ಇನ್ಸ್ಟಾಕ್ಲಾಸ್ಗಳ ಮೂಲಕ ಆನ್ಲೈನ್ನಲ್ಲಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಈಗಲೂ ಮಾರ್ಗದರ್ಶನ ನೀಡುತ್ತಿದ್ದಾರೆ ಮತ್ತು ಪ್ರೇರೇಪಿಸುತ್ತಿದ್ದಾರೆ.
ಸ್ವಾಭಿಮಾನಿ ಬಳಗ ಕಟ್ಟಿದ ಸ್ವಾಭಿಮಾನಿ:
ಸ್ವಾಭಿಮಾನಿ ಬಳಗ ಸ್ಥಾಪಿಸಿರುವ ವಿನಯ್ ಕುಮಾರ್ ಅವರು ಶಿಕ್ಷಣದ ಮಹತ್ವ ಕುರಿತಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ನಮ್ಮ ನಡೆ ಸರ್ಕಾರಿ ಶಾಲೆಗಳ ಕಡೆಗೆ ಎಂಬ ಅತ್ಯುನ್ನತ ಕಾರ್ಯಕ್ರಮ ನಡೆಸುತ್ತಿದ್ದಾರೆ. ಈ ಮೂಲಕ ಹಳ್ಳಿಗಳಿಗೆ ಹೋಗಿ ಸರ್ಕಾರಿ ಶಾಲೆಗಳ ದುಃಸ್ಥಿತಿಯನ್ನು ತೆರೆದಿಟ್ಟರಲ್ಲದೇ, ಶಿಕ್ಷಣಕ್ಕೆ ಮಹತ್ವ ನೀಡುವಂತೆ ಪೋಷಕರಲ್ಲಿ ಅರಿವು ಮೂಡಿಸಿ ಆತ್ಮಸ್ಥೈರ್ಯ ತುಂಬುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಬದುಕಿಗೆ ಆಶಾಕಿರಣ ಆಗುವ ಭರವಸೆ ಮೂಡಿಸಿದ್ದಾರೆ.
ಈಗಾಗಲೇ ಅನೇಕ ಜನೋಪಯೋಗಿ, ಸಮಾಜಮುಖಿ, ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಎರಡು ಸಾವಿರ ವಿಕಲಚೇತನರಿಗೆ ವೀಲ್ ಚೇರ್, ವಾಕಿಂಗ್ ಸ್ಟಿಕ್, ವಾಕರ್, ಶ್ರವಣಯಂತ್ರಗಳನ್ನು ಟ್ರಸ್ಟ್ನಿಂದ ವಿತರಣೆ ಮಾಡಲಾಗಿದೆ. ಅಂತೆಯೇ ಆಟೋ, ಗೂಡ್ಸ್, ಲಾರಿ ಚಾಲಕರಿಗೆ ಸಮವಸ್ತ್ರ, ಅವರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಜೊತೆಗೆ ಆರ್ಥಿಕ ಸಹಾಯ ಮಾಡಲಾಗಿದೆ. ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳಲ್ಲಿ ಯು.ಪಿ.ಎಸ್ಸಿ.ಕೆ.ಪಿ.ಎಸ್ಸಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶಿ ಕಾರ್ಯಾಗಾರಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಿಗೆ ಮನಸ್ಟೈರ್ಯ ತುಂಬಿ ಪದವಿ ನಂತರ ಮುಂದೇನು
ಎನ್ನುವ ವಿಚಾರಗಳಿಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ.
ದಶಕದ ಸಂಭ್ರಮ:
ಒಂದು ಸಂಸ್ಥೆ ಕಟ್ಟಿ ಬೆಳೆಸುವುದು ಅಷ್ಟು ಸುಲಭವಲ್ಲ. ಇಡೀ ದೇಶದ ಗಮನ ಸೆಳೆಯುವಂತೆ ಮಾಡುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಭಾರತ ದೇಶವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಕೀರ್ತಿ ವಿನಯ್ ಕುಮಾರ್ ಅವರಿಗೆ ಸಲ್ಲುತ್ತದೆ. ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹದ ಜೊತೆಗೆ ಐಎಎಸ್ ಕನಸು ಸಾಕಾರಗೊಳಿಸಿದ ಶಿಕ್ಷಣ ಪ್ರೇಮಿ, ಶಿಕ್ಷಣ ಪ್ರೋತ್ಸಾಹಕ.
ಇನ್ಸೈಟ್ ತರಬೇತಿ ಸಂಸ್ಥೆಗೆ ದುಡಿದವರು 450 ಜನರು. ದೇಶದಲ್ಲಿಯೇ 3ನೇ ಸ್ಥಾನ ಹೊಂದಿದೆ. ಕಾಶ್ಮಿರದಲ್ಲಿ ಸ್ಥಾಪನೆಗೆ ವಿನಯ್ ಕುಮಾರ್ ಅವರ ಬಂಧು ಶರತ್ ರ ಕೊಡುಗೆ ಅಪಾರ. ಕನಸು ಕಾಣುವ, ಕನಸು ಪೋಷಿಸುವ ಹಾಗೂ ಕನಸುಗಳ ಸಶಕ್ತಗೊಳಿಸುವ ದಶಕದ ಸಂಭ್ರಮ ಆಚರಿಸುವ ಈ ಸಂಸ್ಥೆಯು ಈಗ ಎಲ್ಲೆಡೆ ಮನೆ ಮಾತಾಗಿದೆ. ಯಶಸ್ಸಿನ ಆಧಾರಸ್ಥಂಭವಾಗಿರುವುದು ವಿದ್ಯಾರ್ಥಿಗಳು.
ಕಳೆದ 10 ವರ್ಷಗಳ ಈ ಪ್ರಯಾಣ ಹಲವು ಸಮಸ್ಯೆಗಳನ್ನ ಮೆಟ್ಟಿ ನಿಂತಿದೆ. ಇನ್ ಸೈಟ್ಸ್ ಐಎಎಸ್ ನಿಂದ ಹೊರಹೊಮ್ಮಿದ ಪ್ರತಿಯೊಂದು ಯಶಸ್ಸಿನ ಕಥೆಗೆ ವಿದ್ಯಾರ್ಥಿಗಳ, ಪೋಷಕರ ಹಾಗೂ ಜನರ ನಂಬಿಕೆಯೇ ಪ್ರೇರಕ ಶಕ್ತಿ. ಒಟ್ಟಾಗಿ ನಾವು ಸವಾಲುಗಳನ್ನು ಜಯಿಸಿದ್ದೇವೆ, ವಿಜಯಗಳನ್ನು ಆಚರಿಸಿದ್ದೇವೆ. ತರಗತಿಯ ಮಿತಿಗಳನ್ನು ಮೀರಿದ ಬಂಧಗಳನ್ನು ಬೆಸೆದುಕೊಂಡಿದ್ದೇವೆ. ಮುಂಬರುವ ವರ್ಷಗಳಲ್ಲಿಯೂ ಅಸಂಖ್ಯಾತ ಮನಸ್ಸುಗಳನ್ನು ತಲುಪುವ, ಕನಸುಗಳನ್ನು ಪೋಷಿಸುವ ಹಾಗೂ ಪರಿಣಾಮಕಾರಿಯಾದ ಭವಿಷ್ಯವನ್ನು ರೂಪಿಸುವ ಕಾರ್ಯಕ್ಕೆ ನಾವು ಬದ್ಧರಾಗಿದ್ದೇವೆ ಎನ್ನುತ್ತಾರೆ ವಿನಯ್ ಕುಮಾರ್.
ಇದಿಷ್ಟು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿರುವ ವಿನಯ್ ಕುಮಾರ್ ಈಗ ಸಿಂಪ್ಲಿಸಿಟಿಯಿಂದ ಪ್ರತಿಯೊಬ್ಬರನ್ನೂ ಸೆಳೆಯುತ್ತಿದ್ದಾರೆ. ಸರಳತೆ ಮೂಲಕ ಮಕ್ಕಳ ಮನ ಗೆದ್ದಿದ್ದಾರೆ, ಹಿರಿಯರ ಆಶೀರ್ವಾದವನ್ನೂ ಪಡೆದಿದ್ದಾರೆ. ಜೊತೆಗೆ ಯುವಕರು, ಮಹಿಳೆಯರು, ರೈತರು ಸೇರಿದಂತೆ ಎಲ್ಲಾ ವರ್ಗದವರು ಇದ್ದರೆ ಇರಬೇಕು ಈ ರೀತಿಯ ಜನಪ್ರತಿನಿಧಿ ಎಂಬಷ್ಟರ ಮಟ್ಟಿಗೆ ಮನಸ್ಸಿಗೆ ಹತ್ತಿರವಾಗಿದ್ದಾರೆ. ಇದಕ್ಕೆಲ್ಲಾ ಕಾರಣವಾಗಿದ್ದು ರಾಜಕಾರಣದಲ್ಲಿ ವಿನಯ್ ಕುಮಾರ್ ಮೂಡಿಸಿದ ಸಂಚಲನ.
ಚನ್ನಯ್ಯ ಒಡೆಯರ್ ಬಳಿಕ…!
ಚನ್ನಯ್ಯ ಒಡೆಯರ್ ಅವರು ಮೂರು ಬಾರಿ ದಾವಣಗೆರೆ ಜಿಲ್ಲೆಯಲ್ಲಿ ಸಂಸದರಾಗಿ ಆಯ್ಕೆಯಾಗಿದ್ದು ಬಿಟ್ಟರೆ, ಉಳಿದಂತೆ ಸಾದು ಲಿಂಗಾಯತ ಸಮಾಜದವರೇ ಸಂಸದರಾಗಿರುವುದು ವಿಶೇಷ. ಈ ನಿಟ್ಟಿನಲ್ಲಿ ಸಾಗುತ್ತಿರುವ ವಿನಯ್ ಕುಮಾರ್ ಅವರ ಭಾಷಣ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಇತಿಹಾಸ, ಸ್ಫೂರ್ತಿದಾಯಕ ಮಾತುಗಳು, ಶೈಕ್ಷಣಿಕ ರಂಗದಲ್ಲಿನ ಮಾಹಿತಿ ಪ್ರತಿಯೊಬ್ಬರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಒಟ್ಟಾರೆ, ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿ ಜೊತೆಗೆ ಸ್ವಾಭಿಮಾನ ಬಡಿದೆಬ್ಬಿಸುತ್ತಿರವ ಸ್ವಾಭಿಮಾನಿ ಎಂಬ ಕೀರ್ತಿಗೂ ವಿನಯ್ ಕುಮಾರ್ ಅವರು ಪಾತ್ರರಾಗಿದ್ದಾರೆ. ಇನ್ನು 41ನೇ ವರ್ಷದ ಜನ್ಮ ದಿನಾಚರಣೆ ಸಂಭ್ರಮದಲ್ಲಿರುವ ವಿನಯ್ ಕುಮಾರ್ ಅವರಿಗೆ ದೇವರು ಆರೋಗ್ಯ, ಆಯಸ್ಸು, ರಾಜಕಾರಣದಲ್ಲಿ ಯಶಸ್ಸು ಸಿಗಲಿ. ಇನ್ನಷ್ಟು ಸಾಧನೆ ಮಾಡಲು ದೇವರು ಶಕ್ತಿ ನೀಡಲಿ ಎಂದು ಜಿ. ಬಿ. ವಿನಯ್ ಕುಮಾರ್ ಅಭಿಮಾನಿಗಳು, ಸ್ನೇಹಿತರು, ಕುಟುಂಬ ವರ್ಗದವರು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.