SUDDIKSHANA KANNADA NEWS/ DAVANAGERE/ DATE:25-02-2025
ದಾವಣಗೆರೆ: ದಾವಣಗೆರೆಯ ನಮನ ಅಕಾಡೆಮಿ ದಾವಣಗೆರೆಯು ಸತತ 5ನೇ ವರ್ಷವೂ ಶಿವರಾತ್ರಿ ಹಬ್ಬದ ದಿನವಾದ ಫೆ. 26ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ “ಶಿವಸ್ಮರಣೆ ನೃತ್ಯ ಜಾಗರಣೆ” ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಶಿವರಾತ್ರಿಯಂದು ರಾತ್ರಿ 9ಗಂಟೆಯಿಂದ ಬೆಳಗಿನ ಜಾವ 3 ಗಂಟೆಯವರೆಗೆ ನಗರದನಾಲ್ಕು ದೇವಸ್ಥಾನಗಳಲ್ಲಿ ಒಂದರ ನಂತರ ಒಂದರಂತೆ ನೃತ್ಯಸೇವೆಯನ್ನು ಮಾಡುವ ಮೂಲಕ ಶಿವನಿಗೆ “ಶಿವಸ್ಮರಣೆ”ಯನ್ನು ನೃತ್ಯ ಜಾಗರಣೆಯ ಮೂಲಕ ಸಮರ್ಪಿಸುತ್ತಿದೆ ಎಂದು ಅಕಾಡೆಮಿ ಉಪಾಧ್ಯಕ್ಷ ದಿನೇಶ್ ಕೆ. ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅಂದು ರಾತ್ರಿ 9.30 ಕ್ಕೆ ನಗರದ ರಿಂಗ್ ರಸ್ತೆಯಲ್ಲಿರುವ “ಶ್ರೀ ಶಾರದಾ ಮಂದಿರ”ದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಮತ್ತು ಶ್ರೀ ಶಂಕರ ಸೇವಾ ಸಂಘದ ಅಧ್ಯಕ್ಷ ಡಾ. ಬಿ.ಟಿ. ಅಚ್ಯುತ್ರವರು ಭಾಗವಹಿಸಲಿದ್ದಾರೆ. ನಮನ ಅಕಾಡೆಮಿಯ ಗೌರವಾಧ್ಯಕ್ಷ ಡಾ. ಎ.ಎಂ. ಶಿವಕುಮಾರ್, ನಮನ ಅಕಾಡೆಮಿಯ ಉಪಾಧ್ಯಕ್ಷ ದಿನೇಶ್ ಕೆ. ಶೆಟ್ಟಿ ಮತ್ತು ನಾಗಭೂಷಣ್ ಆರ್.ಎಲ್. ಹಾಗೂ ಅಕಾಡೆಮಿಯ ನಿರ್ದೇಶಕರುಗಳು ಉಪಸ್ಥಿತರಿರುವರು ಎಂದು ತಿಳಿಸಿದರು.
ರಾತ್ರಿ 11 ಕ್ಕೆ ಜಯದೇವ ಸರ್ಕಲ್ನಲ್ಲಿರುವ ಶ್ರೀ ಕೂಡಲಿ ಶಂಕರ ಮಠದಲ್ಲಿ, ರಾತ್ರಿ 12.30 ಕ್ಕೆ ಗೀತಾಂಜಲಿ ಟಾಕೀಸ್ ಪಕ್ಕದಲ್ಲಿರುವ ಶ್ರೀ ಲಿಂಗೇಶ್ವರ ದೇವಸ್ಥಾನದಲ್ಲಿ ಹಾಗೂ ರಾತ್ರಿ 2 ಕ್ಕೆ ವಿದ್ಯಾನಗರದ ಶ್ರೀ ಶಿವ ಪಾರ್ವತಿ ದೇವಸ್ಥಾನದಲ್ಲಿ
ನೃತ್ಯ ಸೇವೆಯನ್ನು ಮಾಡುವುದರ ಮೂಲಕ ಶಿವನಿಗೆ ನೃತ್ಯ ಜಾಗರಣೆಯನ್ನು ಸಮರ್ಪಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಶಿವಸ್ಮರಣೆ ನೃತ್ಯ ಜಾಗರಣೆಯಲ್ಲಿ ನಮನ ಅಕಾಡೆಮಿಯ ಗುರು ವಿದುಷಿ ಮಾಧವಿ ಡಿ.ಕೆ. ಮತ್ತು ಅವರ ಶಿಷ್ಯಂದಿರಾದ ಕು|| ಸಿಂಚನ ಎಸ್., ಕು|| ಭೂಮಿಕಾ ಶ್ಯಾಮ ಕಠಾರೆ, ಕು|| ರೋಹಿಣಿ ಎಸ್., ಕು|| ಭವಾನಿ ಡಿ.ಎಸ್., ಕು|| ಋತು ಹಿರೇಮಠ್, ಕು|| ಅಧಿತಿ ಸಿ.ಜಿ., ಕು|| ನಿಹಾರಿಕಾ ಎಸ್., ಕು|| ನಿಧಿ ಪಿ. ಧೂಳೆಹೊಳೆ, ಕು|| ಸಂಸ್ಕೃತಿ ಜೆ. ಆಚಾರ್, ಕು|| ಮಾನ್ವಿ ಜಿ.ಎಂ. ಇವರುಗಳು ನೃತ್ಯವನ್ನು ಸಮರ್ಪಿಸಲಿದ್ದಾರೆ ಎಂದರು.
ಕಾರ್ಯಕ್ರಮಕ್ಕೆ ಎಲ್ಲರೂ ಬಂದು ಪ್ರೋತ್ಸಾಹಿಸಿ, ವಿನೂತನ “ಶಿವಸ್ಮರಣೆ ನೃತ್ಯ ಜಾಗರಣೆ”ಗೆ ಸಾಕ್ಷಿಯಾಗಬೇಕೆಂದು “ನಮನ ಅಕಾಡೆಮಿ”ಯ ಆಡಳಿತ ಮಂಡಳಿ, ಶಿಷ್ಯವೃಂದ, ಪೋಷಕರು ಮನವಿ ಮಾಡಿದ್ದಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಅಕಾಡೆಮಿಯ ಅಧ್ಯಕ್ಷ ಗೋಪಾಲಕೃಷ್ಣ, ಕಾರ್ಯದರ್ಶಿ ಡಿ. ಕೆ. ಮಾಧವಿ, ಪಿ. ಸಿ. ರಾಮನಾಥ, ಅನಿಲ್ ಬಾರೆಂಗಳ್, ಡಿ. ಎಸ್. ಭವಾನಿ, ಸಂಸ್ಕೃತಿ ಜೆ. ಆಚಾರ್ ಮತ್ತಿತರರು ಹಾಜರಿದ್ದರು.