SUDDIKSHANA KANNADA NEWS/ DAVANAGERE/ DATE:04-12-2024
ದಾವಣಗೆರೆ: ಬಸವಣ್ಣನವರು ಹೊಳೆಗೆ ಹಾರಿ ಸತ್ತರು ಹಾಗೂ ಮಹಾಸಭೆಯ ಬಗ್ಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಅಖಿಲ ಭಾರತ ವೀರಶೈವ ಮಹಾಸಭಾವು ನಾಲಿಗೆ ಕುಲ ಹೇಳುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಮಹಾಸಭಾವು ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಬಸವಣ್ಣನವರು ಮತ್ತು ಮಹಾಸಭೆಯ ಬಗ್ಗೆ ನೀಡಿರುವ ಹೇಳಿಕೆಗಳನ್ನು ಖಂಡಿಸುತ್ತೇವೆ ಎಂದು ತಿಳಿಸಿದೆ.
“ನಾಲಿಗೆ ಕುಲ ಹೇಳುತ್ತದೆ” ಎಂಬ ಮಾತಿದೆ. ನಿಮ್ಮ ಹೇಳಿಕೆಗಳು ಮತ್ತು ನಡವಳಿಕೆಗಳನ್ನು ಗಮನಿಸಿದಾಗ ನೀವು ವೀರಶೈವ ಲಿಂಗಾಯತರೇ ಎಂಬ ಅನುಮಾನ ಮೂಡುತ್ತದೆ. ವೀರಶೈವ ಲಿಂಗಾಯಿತರಿಗೆ ಇರಬೇಕಾದ ಆಚಾರವಾಗಲಿ, ಸಂಸ್ಕಾರವಾಗಲಿ ನಿಮ್ಮಲ್ಲಿ ಇರದೇ ಇರುವುದು ದುರದೃಷ್ಟಕರ. ಅಗ್ಗದ ಪ್ರಚಾರ ಮತ್ತು ತಮ್ಮ ರಾಜಕೀಯ ತೆವಲಿಗಾಗಿ ಇಂತಹ ಕೀಳು ಮಟ್ಟದ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಇಂತಹ ಹೇಳಿಕೆಗಳು ಮತ್ತು ತಮ್ಮ ನಡವಳಿಕೆಗಳನ್ನು ಗಮನಿಸಿದರೆ ತಮ್ಮ ಹಿಂದೆ ಇರಬಹುದಾದವರು ಯಾರೆಂಬುದನ್ನು ನಾವು ಅರ್ಥಮಾಡಿ ಕೊಳ್ಳಬಹುದಾಗಿದೆ ಎಂದು ಮಹಾಸಭಾ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಸಮಾಜ ಒಡೆಯುವ ಕೃತ್ಯವಲ್ಲದೇ ಮತ್ತೇನೂ ಅಲ್ಲ. ಇಂದು ಬಸವಣ್ಣನವರ ವಿಚಾರಗಳು ವಿಶ್ವದಾದ್ಯಂತ ಮುನ್ನೆಲೆಗೆ ಬರುತ್ತಿರುವುದನ್ನು ಸಹಿಸದ ಆ ಒಂದು ವರ್ಗ ತಮ್ಮಿಂದ ಇಂತಹ ಹೇಳಿಕೆಗಳನ್ನು ಹೇಳಿಸುತ್ತಿದೆ ಎಂದು ಭಾವಿಸಬೇಕಾಗುತ್ತದೆ. ಅಂದು ಬಸವಣ್ಣನವರು ಮತ್ತು ಅವರ ವಿಚಾರಗಳಿಗೆ ಅಂತ್ಯ ಹಾಡಲು ಪ್ರಯತ್ನಿಸಿದ ಸಂಘಟನೆಯ ನೇತೃತ್ವ ವಹಿಸಿದವರ ಸಂಘಟನೆಯಲ್ಲಿರುವ ತಮ್ಮಿಂದ ನೀರೀಕ್ಷಿಸುವುದಾದರೂ ಎನನ್ನ? ಕನಿಷ್ಠ ಈ ಸಮಾಜದಲ್ಲಿ ಜನಿಸಿದ್ದಕ್ಕಾದರೂ ಈ ಧರ್ಮದ ಬೆಳಕಾಗಿರುವ “ಬಸವಣ್ಣ”ನವರ ಬಗ್ಗೆ ಇಂತಹ ಕೀಳುಮಟ್ಟದ ಹೇಳಿಕೆಗಳನ್ನು ನೀಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮಹಾಸಭೆಯ ಗೌರವಾಧ್ಯಕ್ಷ ಡಾ|| ಭೀಮಣ್ಣ ಖಂಡ್ರೆ, ಸಮಾಜದ ಜನನಾಯಕ ಯಡಿಯೂರಪ್ಪ ಮತ್ತು ನಾನು ಸಮಾಜಕ್ಕೆ ನೀಡಿರುವ ಕೊಡುಗೆಗಳನ್ನು ಅರಿತುಕೊಳ್ಳದೆ ವಿನಾಃಕಾರಣ ನಮ್ಮಗಳ ಬಗ್ಗೆ ಮಾತನಾಡಿರುವುದನ್ನು ಎಂದಿಗೂ ಸಹಿಸುವುದಿಲ್ಲ. ನಮ್ಮಗಳ ಬಗ್ಗೆ ಹೇಳಿಕೆ ನೀಡುವ ಮೊದಲು ತಾವು ಸಮಾಜಕ್ಕೆ ನೀಡಿರುವ ಕೊಡುಗೆ ಏನೆಂಬುದನ್ನು ತಿಳಿಸುತ್ತೀರಾ? ಎಂದು ಪ್ರಶ್ನಿಸಿದ್ದಾರೆ.