SUDDIKSHANA KANNADA NEWS/ DAVANAGERE/ DATE-06-05-2025
ದಾವಣಗೆರೆ: ದಾವಣಗೆರೆಯ ಹದಡಿ ರಸ್ತೆಯ ಕ್ಲಬ್ ವೊಂದರಲ್ಲಿ ನಡೆದ ರೌಡಿ ಶೀಟರ್ ಕಣುಮಾ ಅಲಿಯಾಸ್ ಸಂತೋಷ್ ಕುಮಾರ್ ಹತ್ಯೆ ಪ್ರಕರಣ ಬೆಚ್ಚಿಬೀಳಿಸುವಂತಿದೆ. ಕೇವಲ 36 ಸೆಕೆಂಡ್ ನಲ್ಲಿ ಬರ್ಬರವಾಗಿ ಹತ್ಯೆ ಮಾಡಿದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಮಚ್ಚು ಮತ್ತು ಲಾಂಗ್ ಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಈ ಸಂಬಂಧ ಸಂತೋಷ್ ಕುಮಾರ್ ಅವರ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.
ವಿದ್ಯಾನಗರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ 12 ಮತ್ತು ಇತರೆ ಆರೋಪಿಗಳ ವಿರುದ್ಧ ಕೊಲೆ ಮಾಡಿದ ಆರೋಪ ಮಾಡಿದ್ದಾರೆ. ಗುಂಡಪ್ಪ, ಕಾರ್ತಿಕ್ ಭಾರತ್ ಕಾಲೋನಿ, ನವೀನ್ ಬೂದಾಳ್ ರಸ್ತೆ, ಖಾರದ ಪುಡಿ ಮಂಜನ ತಮ್ಮ ನವೀನ್, ಚಾವಳಿ ಸಂತು, ಬಸವರಾಜ್ ಅಲಿಯಾಸ್ ಬಸ್ಯ, ಹನುಮಂತ, ಗಡ್ಡ ವಿಜಿ, ಚಿಕ್ಕನಹಳ್ಳಿ ಶಿವು, ಕಡ್ಡಿ ರಘು, ಪ್ರಶಾಂತ್ ಅಲಿಯಾಸ್ ಪಚ್ಚಿ, 60 ಅಡಿ ರೋಡ್ ಗಣಿ ಮತ್ತು ಇತರರು ಸೇರಿ ನನ್ನ ಪತಿಯನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ನಿಟುವಳ್ಳಿಯ ಖಾದಿ ಕೇಂದ್ರದ ಹತ್ತಿರ ಕಣುಮಾ ಅಲಿಯಾಸ್ ಸಂತೋಷ್ ಕುಮಾರ್ ಅವರು ಪತ್ನಿ ಹಾಗೂ ಪುತ್ರನೊಂದಿಗೆ ವಾಸವಾಗಿದ್ದರು. ಸೋಮವಾರ ಮಧ್ಯಾಹ್ನ 1 ಗಂಟೆಯಿಂದ 1.30ರ ಸುಮಾರಿನಲ್ಲಿ ಮನೆಗೆ ಬಂದು ಊಟ ಮಾಡಿ ವ್ಯವಹಾರದ ಕೆಲಸ ಇರುವುದಾಗಿ ಹೇಳಿ ಹೋಗಿದ್ದರು. ಆದ್ರೆ, 5.30ರಿಂದ 5.45ರ ನಡುವೆ ಸಂಬಂಧಿ ಮಂಜುನಾಥನು ಫೋನ್ ಮಾಡಿ ಯಾರೋ ದುಷ್ಕರ್ಮಿಗಳು ನನ್ನ ಗಂಡನನ್ನು ಕೊಂದು ಹಾಕಿದ್ದಾರೆ ಎಂದು ತಿಳಿಸಿದರು. ಕೂಡಲೇ ನಾನು ಹಾಗೂ ನನ್ನ ಮಗ ಹತ್ಯೆಯಾದ ಸ್ಥಳಕ್ಕೆ ಹೋದೆವು. ಅಲ್ಲಿ ನೋಡಿದರೆ ಮೃತದೇಹವು ರಕ್ತಸಿಕ್ತವಾಗಿ ಇತ್ತು ಎಂದು ದೂರಿನಲ್ಲಿ ಹೇಳಿದ್ದಾರೆ.
ನನ್ನ ಗಂಡನನ್ನು ಯಾವುದೋ ದುರುದ್ದೇಶದಿಂದ ಹತ್ಯೆ ಮಾಡಿರುವ ಗುಂಡಪ್ಪ, ಕಾರ್ತಿಕ್ ಭಾರತ್ ಕಾಲೋನಿ, ನವೀನ್ ಬೂದಾಳ್ ರಸ್ತೆ, ಖಾರದ ಪುಡಿ ಮಂಜನ ತಮ್ಮ ನವೀನ್, ಚಾವಳಿ ಸಂತು, ಬಸವರಾಜ್ ಅಲಿಯಾಸ್ ಬಸ್ಯ, ಹನುಮಂತ, ಗಡ್ಡ ವಿಜಿ, ಚಿಕ್ಕನಹಳ್ಳಿ ಶಿವು, ಕಡ್ಡಿ ರಘು, ಪ್ರಶಾಂತ್ ಅಲಿಯಾಸ್ ಪಚ್ಚಿ, 60 ಅಡಿ ರೋಡ್ ಗಣಿ ಮತ್ತು ಇತರರ ವಿರುದ್ಧ ಕಾನೂನು ಕ್ರಮ ಜರುಗಿಸಿ ಶಿಕ್ಷೆ ವಿಧಿಸಬೇಕು ಎಂದು ಸಂತೋಷ್ ಕುಮಾರ್ ಪತ್ನಿ ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.