SUDDIKSHANA KANNADA NEWS/ DAVANAGERE/ DATE:20-01-2025
ದಾವಣಗೆರೆ: ಭದ್ರಾ ನೀರಾವರಿ ಸಲಹಾ ಸಮಿತಿ (ಐ.ಸಿ.ಸಿ) ಸಭೆ ನಿರ್ಣಯದ ವೇಳಾಪಟ್ಟಿಯಂತೆ ರೈತನ ಜಮೀನಿಗೆ ನೀರು ಹರಿಯುವಂತೆ ಕ್ರಮವಹಿಸಬೇಕು ಎಂದು ರೈತ ಒಕ್ಕೂಟ ಆಗ್ರಹಿಸಿದೆ. ಈ ಸಂಬಂಧ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದೆ.
ದಾವಣಗೆರೆ ಜಿಲ್ಲೆಯ ರೈತರ ಜೀವನಾಡಿ ಭದ್ರಾ ಡ್ಯಾಂನಿಂದ ಬೇಸಿಗೆ ಹಂಗಾಮಿಗೆ ನೀರು ಹರಿಸಲು ಪ್ರಾರಂಭಿಸಿ ಇಂದಿಗೆ 12 ದಿನಗಳಾದ್ರೂ ತ್ಯಾವಣಿಗೆ ಉಪವಿಭಾಗದ ಕಾಲುವೆಗಳಿಗೆ ನೀರು ಬಂದಿಲ್ಲ. ಇದರಿಂದ ಬೇಸಿಗೆ ಹಂಗಾಮಿನಲ್ಲಿ ಭತ್ತದ ಬೆಳೆ ಬೆಳೆಯಲು ಸಸಿಮಡಿ ಮಾಡಿಕೊಳ್ಳಲು, ಜಮೀನು ಉಳಿಮೆ ಮಾಡಿಕೊಂಡು ಬೀಜ ಉಗ್ಗುವ ಚೆಲ್ಲು ಪದ್ಧತಿಯ ಮೂಲಕ ನೇರ ಬಿತ್ತನೆ ಮಾಡುವ ರೈತರಿಗೆ ಅನಾನುಕೂಲವಾಗಿದೆ ಎಂದು ತಿಳಿಸಿತು.
ತೋಟಗಳಿಗೂ ನೀರು ಹಾಯಿಸಲು ಸಾಧ್ಯವಾಗಿಲ್ಲ. ಇದರಿಂದ ಈ ಭಾಗದ ರೈತರು ಆತಂಕಗೊಂಡಿದ್ದಾರೆ. ನೀರಾವರಿ ಇಲಾಖೆ ಇಂಜಿನಿಯರ್ ಗಳನ್ನು ವಿಚಾರಿಸಿದರೆ ನೀರು ನಿರ್ವಹಣೆ ಮಾಡುವ ಸೌಡಿಗಳು ಕೆಲಸಕ್ಕೆ ಬಾರದೆ ಮುಷ್ಕರ ನಡೆಸುತ್ತಿದ್ದಾರೆ. ಅವರು ಹೊರಗುತ್ತಿಗೆ ಆಧಾರದಲ್ಲಿ ನೇಮಕವಾಗಿದ್ದು, ಅವರಿಗೆ ಸುಮಾರು 10 ತಿಂಗಳಿನಿಂದ ವೇತನವಾಗಿಲ್ಲ ನಾವು ಏನು ಮಾಡಲು ಸಾಧ್ಯ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿ ಜಾರಿ ಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿತು.
ಪ್ರಸ್ತುತ ಡ್ಯಾಂನಲ್ಲಿ ನೀರಿನ ಮಟ್ಟ 180 ಅಡಿ ಇದ್ದು, ಪ್ರತಿನಿತ್ಯ ಹೊರಹರಿವು 3277 ಕ್ಯೂಸೆಕ್ಸ್ ನೀರನ್ನು ನಾಲೆಗಳಿಗೆ ಹರಿಸಲಾಗುತ್ತಿದೆ. ನೀರು ನಿರ್ವಹಣೆ ಇಲ್ಲದೆ ವ್ಯರ್ಥವಾಗಿ ಹಳ್ಳ ಕೊಳ್ಳಗಳಿಗೆ ಹರಿದು ಹೋಗುತ್ತಿದೆ. ಡ್ಯಾಂನಿಂದ ಸರಿಯಾದ ಪ್ರಮಾಣದಲ್ಲಿ ನೀರು ಹರಿಸುತ್ತಿದ್ರೂ ಕಾಲುವೆಗಳಲ್ಲಿ ನೀರು ಹರಿದು ಬರುತ್ತಿಲ್ಲ. ಅಂಗೈಯಲ್ಲಿ ಬೆಣ್ಣೆ ಇದ್ರೂ ತುಪ್ಪಕ್ಕೆ ಬರ (ಹಲ್ಲಿದ್ದರೂ ಕಡಲೆ ಇಲ್ಲ) ಎಂಬಂತಹ ಸ್ಥಿತಿ ರೈತರದ್ದಾಗಿದೆ ಎಂದು ಆತಂಕ ವ್ಯಕ್ತಪಡಿಸಿದೆ.
ತಕ್ಷಣ ಸೌಡಿಗಳ ಬಾಕಿ ವೇತನ ಬಿಡುಗಡೆ ಮಾಡಿ, ಮುಷ್ಕರದಲ್ಲಿ ನಿರತರಾಗಿರುವ ಸೌಡಿಗಳ ಮನವೊಲಿಸಿ ಕೆಲಸಕ್ಕೆ ಹಾಜರಾಗಿ ಕರ್ತವ್ಯ ನಿರ್ವಹಿಸುವಂತೆ ಮಾಡಬೇಕು. ಕಾಲುವೆಗಳಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ಸ್ವಚ್ಛ ಮಾಡಿಸಬೇಕು. ಹೂಳು ತೆಗೆಸಬೇಕು. ಕಾಲುವೆಗಳ ಕಟ್ಟಡಗಳ ದುರಸ್ಥಿ ಮಾಡಿಸಿ, ನೀರು ಸರಾಗವಾಗಿ ಹರಿಯುವಂತೆ ಮಾಡುವ ಮೂಲಕ ಕೊನೆ ಭಾಗಕ್ಕೆ ತಲುಪುವಂತೆ ಕ್ರಮವಹಿಸಬೇಕು ಎಂದು ಒತ್ತಾಯಿಸಿತು.
ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿದ ನಿಯೋಗದಲ್ಲಿ ರೈತ ಮುಖಂಡರಾದ ಕೊಳೇನಹಳ್ಳಿ ಬಿ ಎಂ ಸತೀಶ್, ಬೆಳವನೂರು ನಾಗೇಶ್ವರರಾವ್, ಕುಂದುವಾಡದ ಹೆಚ್.ಜಿ.ಗಣೇಶಪ್ಪ, ದೂಡ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಮಾಜಿ ಮೇಯರ್ ಹೆಚ್.ಎನ್.ಗುರುನಾಥ್ ಮುಂತಾದವರು ಉಪಸ್ಥಿತರಿದ್ದರು.
ಎಡಿಸಿ ಭರವಸೆ
ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಲೋಕೇಶ್ ರವರು ವಿಷಯ ತುಂಬಾ ಗಂಭೀರವಾಗಿದೆ. ಶೀಘ್ರದಲ್ಲೇ ನೀರಾವರಿ ಇಲಾಖೆ ಅಧಿಕಾರಿಗಳ ಸಭೆ ಕರೆದು ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದರು.