SUDDIKSHANA KANNADA NEWS/ DAVANAGERE/ DATE-29-04-2025
ದಾವಣಗೆರೆ: ಪ್ರಥಮ ವರ್ಷದ ಬಿಎ, ಬಿಕಾಂ, ಬಿಬಿಎ, ಬಿಸಿಎ, ಬಿಎಫ್ಎಸ್ಐ(ಬಿಕಾಂ) ಹಾಗೂ ಬಿಎಸ್ಸಿಗೆ ಪ್ರವೇಶ ಪಡೆಯಲು ದಾಖಲಾತಿ ಆರಂಭವಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ.ಬಸವರಾಜ ಸಿ. ತಹಸೀಲ್ದಾರ ತಿಳಿಸಿದ್ದಾರೆ.
ಕಾಲೇಜಿನಲ್ಲಿ 62 ಪೂರ್ಣಕಾಲಿಕ ಹಾಗೂ 48 ಅತಿಥಿ ಉಪನ್ಯಾಸಕರಿದ್ದು 40ಕ್ಕೂ ಹೆಚ್ಚು ಪ್ರಾಧ್ಯಾಪಕರು, ಪಿಎಚ್ಡಿ, ಎನ್ಇಟಿ, ಎಸ್ಎಲ್ಇಟಿಯಂಥ ಅರ್ಹತೆ ಪಡೆದ ಅಧ್ಯಾಪಕರ ವೃಂದ ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದಾರೆ. ಕಾಲೇಜು ಸುಸಜ್ಜಿತವಾದ ಕಟ್ಟಡ ಮೂಲಭೂತ ಸೌಕರ್ಯ ಹೊಂದಿದ್ದು, ಸುಮಾರು ಮೂರು ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ವಿವಿಧ ಕೋರ್ಸ್ ಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಗಣಕೀಕೃತ ಗ್ರಂಥಾಲಯವಿದ್ದು, ಮೂಲ ಆಕಾರ ಪರಾಮರ್ಶನ ಗ್ರಂಥಗಳೂ ಸೇರಿ ಸುಮಾರು ಆರು ಸಾವಿರ ಪುಸ್ತಕಗಳು ಇವೆ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ 8 ಪ್ರಯೋಗಾಲಯಗಳು ಹಾಗೂ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳಿಗೆ ಇಂಟರ್ನೆಟ್ ವ್ಯವಸ್ಥೆ ಇರುವ ಪ್ರಯೋಗಾಲಯಗಳೂ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ವಿದ್ಯಾರ್ಥಿವೇತನ ಹಾಗೂ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ವಿಶೇಷ ವಿದ್ಯಾರ್ಥಿ ವೇತನ ಸೌಲಭ್ಯವೂ ಇದೆ. ಯುವ ರೆಡ್ಕ್ರಾಸ್, ರೋವರ್ಸ್ & ರೇಂಜರ್ಸ್, ಕ್ರೀಡೆ, ಎನ್ಎಸ್ಎಸ್ ಹಾಗೂ ಎನ್ಸಿಸಿ ಸೌಲಭ್ಯ ಒಳಗೊಂಡಿದ್ದು, ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ದಾಖಲಿಸಿ ಎಂದು ಪಾಲಕರಲ್ಲಿ ಮನವಿ ಮಾಡಿದ್ದಾರೆ. ಹಾಗೆಯೇ ಉನ್ನತ ಶಿಕ್ಷಣದಿಂದ ದೂರವಿರುವ ಅಭ್ಯರ್ಥಿಗಳಿಗೆ ಇದೇ ಕಾಲೇಜಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಸಂಜೆ ಕಾಲೇಜು ಸಹ ಪ್ರಾರಂಭಿಸಿದ್ದು, ಬಿಕಾಂ ಹಾಗೂ ಬಿಸಿಎ ಪ್ರಥಮ ವರ್ಷದ ಪದವಿ ಕೋರ್ಸುಗಳಿಗೆ ಕೂಡ ಪ್ರವೇಶಾತಿ ದಾಖಲಾತಿಯೂ ಸಹ ಪ್ರಾರಂಭವಾಗಿದೆ ಎಂದು ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.