SUDDIKSHANA KANNADA NEWS/ DAVANAGERE/ DATE:21-08-2024
ದಾವಣಗೆರೆ : ರಾಷ್ಟ್ರವಾಪ್ತಿ ವೈದ್ಯರು ಮುಷ್ಕರ ನಡೆಸಿದ ಹಿನ್ನೆಲೆಯಲ್ಲಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಭೇಟಿ ನೀಡಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವ ಸಾರ್ವಜನಿಕರ ಯೋಗಕ್ಷೇಮದ ಕುರಿತು ವಿಚಾರಿಸಿದರು.
ವೈದ್ಯರ ಮುಷ್ಕರದ ಕಾರಣದಿಂದಾಗಿ ಯಾವುದೇ ಒಳರೋಗಿಗಳಿಗೆ ಯಾವುದೇ ರೀತಿಯ ತೊಂದರೆಗಳು ಆಗಬಾರದೆಂದು ಆಸ್ಪತ್ರೆಯಲ್ಲಿದ್ದ ವೈದ್ಯರು ಮತ್ತು ಇತರೆ ಸಿಬ್ಬಂದಿಯವರಿಗೆ ಸೂಚನೆಯನ್ನು ನೀಡಿದ್ದ ಸಂಸದರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಸ್ಪತ್ರೆಯ ಕಟ್ಟಡದ ಸ್ಥಿತಿಗತಿ ಬಗ್ಗೆ ತಮ್ಮ ಬೇಸರ ವ್ಯಕ್ತಪಡಿಸಿದ ಸಂಸದರು ಆಸ್ಪತ್ರೆಯ ಕಟ್ಟಡ ತುಂಬಾ ಹಳೆಯದಾಗಿದ್ದು ಕೆಲವು ಕಡೆಗಳಲ್ಲಿ ಶಿಥಿಲಾವಸ್ಥೆಯಲ್ಲಿ ಕಂಡು ಬಂದಿದ್ದರಿಂದ ಈ ಬಗ್ಗೆ ತುರ್ತಾಗಿ ಯೋಗ್ಯ ಕ್ರಮಗಳನ್ನು ಜರುಗಿಸಬೇಕೆಂದು ತಿಳಿಸಿದರು.
ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ಜನರು ಸಾಮಾನ್ಯವಾಗಿ ಆರ್ಥಿಕವಾಗಿ ಹಿಂದುಳಿದವರಾಗಿದ್ದು, ಈ ವ್ಯಕ್ತಿಗಳಿಗೆ ಹೊರೆಯಾಗದಂತೆ ಬಾಹ್ಯ ಮೂಲಗಳಿಂದ ಮಾತ್ರೆ ಔಷಧಿಗಳನ್ನು ಮತ್ತು ಪರೀಕ್ಷಾ ವರದಿಗಳನ್ನು ತರುವಂತೆ ಹೇಳಬಾರದು ಎಂದು ಸೂಚಿಸಿದರು.
ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ವೈದ್ಯರು, ತರಬೇತಿ ನಿರತ ವೈದ್ಯರುಗಳಿಗೆ ಮೂಲಭೂತ ಸೌಲಭ್ಯಗಳೊಂದಿಗೆ ಸೂಕ್ತ ರಕ್ಷಣೆ ಒದಗಿಸಲು ಕ್ರಮ ಕೈಗೊಳ್ಳಬೇಕು. ಆಸ್ಪತ್ರೆಯಲ್ಲಿ ಕೇವಲ ಮೂವರು ಪೊಲೀಸ್ ಸಿಬ್ಬಂದಿ ಇದ್ದು, ಇನ್ನು 5-6 ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಆಸ್ಪತ್ರೆಯ ಕ್ಯಾಂಟೀನ್ಗೂ ಭೇಟಿ ನೀಡಿದ ಸಂಸದರು ಕ್ಯಾಂಟೀನ್ ನಿರ್ವಹಣೆಯ ಲೋಪದ ಬಗ್ಗೆ ಬೇಸರ ವ್ಯಕ್ತಪಡಿಸಿ ಶೀಘ್ರ ಲೋಪಗಳನ್ನು ಸರಿಪಡಿಸುವಂತೆ ಸೂಚಿಸಿದರು. ಜಿಲ್ಲಾ ಸರ್ಜನ್ ಡಾ.ನಾಗೇಂದ್ರಪ್ಪ ಹಾಗೂ ವೈದ್ಯರು, ಶುಶ್ರೂಷಕರು ಉಪಸ್ಥಿತರಿದ್ದರು.