SUDDIKSHANA KANNADA NEWS/ DAVANAGERE/ DATE:27-02-2025
ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಿಜೆಪಿ ಸೇರುವ ಕುರಿತು ಬಿಜೆಪಿಯಲ್ಲಿ ಯಾವುದೇ ಚರ್ಚೆ ಇಲ್ಲ. ರಾಜಕಾರಣದಲ್ಲಿ ಬೆಳವಣಿಗೆ ಕ್ಷೀಪ್ರವೇ ಆಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಾ ಶಿವರಾತ್ರಿ ನಿಮಿತ್ತ ಈಶಾ ಫೌಂಡೇಶನ್ ಸದ್ಗುರು ಜಗ್ಗಿ ವಾಸುದೇವ ಅವರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪಾಲ್ಗೊಂಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಸದ್ಗುರು ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಿಂದೆ ಭಾಗವಹಿಸಿದ್ದರು. ಅಮಿತ್ ಶಾ ಅವರು ಭಾಗಿಯಾಗಿದ್ದರು. ನಾವೂ ಸಹ ಸಾಕಷ್ಟು ಸಲ ಭಾಗಿಯಾಗಿವಹಿಸಿದ್ದೇವೆ. ಇದಕ್ಕೆ ರಾಜಕೀಯ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ಕಾಂಗ್ರೆಸ್ ನಲ್ಲಿ ಬೇರೆ ಬೇರೆ ವ್ಯಾಖ್ಯಾನ ನಡೆಯತ್ತಿರುವುದು ಅವರ ಪಕ್ಷದ ವಿಚಾರ ಅದು ಆ ಪಕ್ಷದ ಅಪನಂಬಿಕೆ ಮತ್ತು ಗೊಂದಲದ ಸಂಕೇತ. ಅಪನಂಬಿಕೆ ಇದೆ, ಅದಕ್ಕೆ ಅಪಸ್ವರ ಇದೆ. ಡಿ.ಕೆ.ಶಿವಕುಮಾರ್ ಬಿಜೆಪಿ ಸೇರುವ ಕುರಿತು ಯಾವುದೇ ಚರ್ಚೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ರಾಜಕಾರಣದಲ್ಲಿ ಬೆಳವಣಿಗೆ ಕ್ಷೀಪ್ರವೇ ಆಗುವುದು, ಓವರ್ ನೈಟ್ ಆಗುತ್ತದೆ. ಪ್ರಶ್ನೆ ಅದಲ್ಲ, ಆದರೆ, ನಮ್ಮ ತಿಳುವಳಿಕೆ ಯಲ್ಲಿ ಆ ರೀತಿ ಯಾವುದೇ ಸ್ಥಿತಿ ಇಲ್ಲ ಎಂದು ಹೇಳಿದರು.
ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷರ ಸ್ಥಾನದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯಾಧ್ಯಕ್ಷ ಸ್ಥಾನಕ್ಕೆ ನನ್ನ ಹೆಸರನ್ನು ತೇಲಿಬಿಡುತ್ತೀರಿ ಎಲ್ಲರೂ ಒಟ್ಟಿಗೆ ಶಕ್ತಿಯಾಗಿ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಬೇಕು. ಎಲ್ಲರನ್ನೂ ಒಳಗೊಂಡಂತಹ ಸಂಘಟನೆ ಮಾಡುವ ಉದ್ದೇಶ ಇದೆ ಎಂದು ಬಸವರಾಜ್ ಬೊಮ್ಮಾಯಿ ತಿಳಿಸಿದರು.