SUDDIKSHANA KANNADA NEWS/ DAVANAGERE/ DATE-03-06-2025
ಬೆಂಗಳೂರು: ಮಂಗಳೂರು ಭಾಗದಲ್ಲಿ ನಡೆದ ಸರಣಿ ಹತ್ಯೆಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರ ಬಹಿರಂಗವಾಗಿ ಮುಸಲ್ಮಾನರನ್ನು ಓಲೈಸುತ್ತಿದೆ. ಎಸ್ಡಿಪಿಐ ಕಾರ್ಯಕರ್ತ ರೆಹಮಾನ್ ಹತ್ಯೆಯ ಬಳಿಕ ಕಾಂಗ್ರೆಸ್ ವಿರುದ್ಧ ರೊಚ್ಚಿಗೆದ್ದಿರುವ ಮುಸ್ಲಿಮ್ ಸಮುದಾಯದ ಆಕ್ರೋಶ ತಣ್ಣಗಾಗಿಸಲು ಅವರ ಬೇಡಿಕೆಯಂತೆ ಹಿಂದೂ ನಾಯಕರ, ಕಾರ್ಯಕರ್ತರ ವಿರುದ್ಧ ಸಿದ್ದರಾಮಯ್ಯ ಸರ್ಕಾರ ಬಲವಂತದ ಪೊಲೀಸ್ ಕ್ರಮ ಕೈಗೊಳ್ಳುತ್ತಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.
ಮುಸಲ್ಮಾನರನ್ನು ಓಲೈಸಲು ಡಿಜೆ ಹಳ್ಳಿ, ಕೆಜಿ ಹಳ್ಳಿ, ಹುಬ್ಬಳ್ಳಿ ದಾಂಧಲೆ ಪ್ರಕರಣಗಳನ್ನು ಹಿಂದಕ್ಕೆ ಪಡೆದ ಈ ಸರ್ಕಾರ, ಉದಯಗಿರಿ ಗಲಭೆ ಪ್ರಕರಣದಲ್ಲಿ ಬಹಿರಂಗವಾಗಿ ಸವಾಲು ಹಾಕಿದ ಮುಲ್ಲಾನ ಮೇಲೆ ಪ್ರಕರಣ ದಾಖಲಿಸಲು ಮೀನಾಮೇಷ ಎಣಿಸಿತ್ತು. ಆದರೆ ರೆಹಮಾನ್ ಹತ್ಯೆಯ ಬೆನ್ನಲ್ಲೇ ಸರ್ಕಾರವನ್ನು ತಂದಿದ್ದೇ ನಾವು ಎನ್ನುತ್ತಿರುವ ಮುಸಲ್ಮಾನರನ್ನು ಓಲೈಸಲು ಹಿಂದೂಗಳ ಮೇಲೆ ತ್ವರಿತವಾಗಿ ಕ್ರಮಕೈಗೊಳ್ಳುತ್ತಿದೆ ಎಂದು
ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿ ದೂರಿದೆ.
ಕಾಂಗ್ರೆಸ್ ಸರ್ಕಾರ ಈ ಕೂಡಲೇ ತನ್ನ ಮತೀಯ ಓಲೈಕೆ ನೀತಿಯಿಂದ ಹಿಂದಕ್ಕೆ ಸರಿಯಬೇಕು, ಇಲ್ಲದಿದ್ದರೆ ಕರಾವಳಿ ಭಾಗದಲ್ಲಿ ಶಾಂತಿ ಎನ್ನುವುದು ಕನಸಿನ ಮಾತಾಗಬಹುದು ಎಂದು ಎಚ್ಚರಿಸಿದೆ.