SUDDIKSHANA KANNADA NEWS/ DAVANAGERE/ DATE:02-01-2025
ದಾವಣಗೆರೆ: ಸ್ವಾಭಿಮಾನಿ ಬಳಗದ ಶಿಕ್ಷಣ ಅದಾಲತ್ – ನಮ್ಮ ನಡೆ ಸರ್ಕಾರಿ ಶಾಲೆಗಳ ಕಡೆಗೆ ಅಭಿಯಾನವು ಜನವರಿ 3ರಂದು ನ್ಯಾಮತಿ-ಹೊನ್ನಾಳಿ ತಾಲ್ಲೂಕುಗಳ ಹತ್ತು ಸರ್ಕಾರಿ ಶಾಲೆಗಳಲ್ಲಿ ಮುಂದುವರಿಯಲಿದೆ.
ಶುಕ್ರವಾರದಂದು ಬೆಳಿಗ್ಗೆ 9.30 ರಿಂದ ಸವಳಂಗದಿಂದ ಆರಂಭವಾಗಲಿದೆ. ಬಳಿಕ ಸೋಗಿಲು, ಫಲವನಹಳ್ಳಿ, ಕಂಚಿಗಾರನಹಳ್ಳಿ, ಗಂಜೀನಹಳ್ಳಿ, ಚಟ್ನಹಳ್ಳಿ-2, ನ್ಯಾಮತಿ, ದೊಡ್ಡೆತ್ತಿನಹಳ್ಳಿ, ಕಂಕನಹಳ್ಳಿ ಹಾಗೂ ಕೊಡಚಗೊಂಡನಹಳ್ಳಿ ಗ್ರಾಮಗಳಲ್ಲಿನ ಸರ್ಕಾರಿ ಶಾಲೆಗಳಲ್ಲೂ ಅಭಿಯಾನ ನಡೆಯಲಿದೆ ಎಂದು ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಅವರು ತಿಳಿಸಿದ್ದಾರೆ.
ಕಳೆದ ತಿಂಗಳು 18ರಂದು ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪ, ಜೋಗ 1 ಮತ್ತು 2, ಚಿನ್ನಿಕಟ್ಟೆ, ಮಾದಾಪುರ, ಕೊಡತಾಳ ಹಾಗೂ ಸವಳಂಗ ಗ್ರಾಮದ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ಶಾಲಾ ಕೊಠಡಿ, ಆಟದ ಮೈದಾನ, ಬಿಸಿಯೂಟದ ಯೋಜನೆ, ಶೌಚಾಲಯ, ಭದ್ರತೆ, ಶಿಕ್ಷಣದ ಗುಣಮಟ್ಟಗಳ ಬಗ್ಗೆ ಶಾಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಎಸ್. ಡಿ. ಎಂ. ಸಿ. ಸದಸ್ಯರು ಹಾಗೂ ವಿದ್ಯಾರ್ಥಿಗಳ ಜೊತೆ ಮುಕ್ತವಾಗಿ ಅನುಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಮುಕ್ತವಾಗಿ ವಿದ್ಯಾಭ್ಯಾಸ ಮಾಡಿ, ಉತ್ತಮ ಅಂಕಗಳನ್ನು ಗಳಿಸಿ ಉತ್ತಮ ದರ್ಜೆಯಲ್ಲಿ ತೇರ್ಗಡೆಯಾಗಿ ದೇಶಕ್ಕೆ ಕೀರ್ತಿ ತರುವಂತಹ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬುವಂತಹ “ನಮ್ಮ ನಡೆ ಸರ್ಕಾರಿ ಶಾಲೆಗಳ ಕಡೆಗೆ” ಅಭಿಯಾನವು ಶಿಕ್ಷಕ ವೃಂದ, ಎಸ್. ಡಿ. ಎಂ. ಸಿ. ಸದಸ್ಯರುಗಳು, ಗ್ರಾಮಸ್ಥರ ಸಹಕಾರದಿಂದ ಯಶಸ್ವಿಯಾಗುತ್ತಿದೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಶೈಕ್ಷಣಿಕ ಸಾಮರ್ಥ್ಯವನ್ನು ಹೆಚ್ಚಿಸಲು ಕೈಗೊಳ್ಳಬಹುದಾದ ಮಾರ್ಗಗಳು, ಸಲಹೆಗಳು ಹಾಗೂ ಶಾಲೆಗಳಲ್ಲಿನ ಮೂಲಭೂತ ಸೌಲಭ್ಯಗಳ ಕೊರತೆಗಳ ಮಾಹಿತಿಗಳನ್ನು ಪಡೆಯಲಾಗಿತ್ತು. ಅದೇ ರೀತಿಯಲ್ಲಿ ಎರಡನೇ ಕಾರ್ಯಕ್ರಮದಲ್ಲಿಯೂ ಇದೇ ಮಾಹಿತಿ ಕಲೆಹಾಕಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಎಸ್.ಎಸ್.ಎಲ್.ಸಿ., ಪಿ.ಯು.ಸಿ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಹೆಚ್ಚಿಸುವ ಕಲಿಕಾ ಕಾರ್ಯಾಗಾರಗಳನ್ನು ಇನ್ಸೈಟ್ಸ್ ಐ.ಎ.ಎಸ್. ಅಕಾಡೆಮಿ ಸಹಯೋಗದೊಂದಿಗೆ ಸ್ವಾಭಿಮಾನಿ ಬಳಗವು ಆಯೋಜಿಸಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ
ಜಿ. ಬಿ. ವಿನಯ್ ಕುಮಾರ್ ಅವರು ಹೇಳಿದ್ದಾರೆ.