SUDDIKSHANA KANNADA NEWS/ DAVANAGERE/ DATE:02-11-2024
ದಾವಣಗೆರೆ: ದೀಪದಿಂದ ದೀಪವ ಹಚ್ಚಬೇಕು ಮಾನವ ಎಂಬ ಮಾತಿದೆ. ಎಲ್ಲೆಡೆ ಪಟಾಕಿಗಳ ಸದ್ದು ಮಾರ್ದನಿಸುತ್ತಿದೆ. ಢಂ ಢಂ ಢಮಾರ್ ಪಟಾಕಿ ಸಿಡಿಸುವ, ದೀಪಗಳನ್ನು ಹಚ್ಚುವ ಸಂಭ್ರಮ ಕಂಡು ಬಂದರೆ ದಾವಣಗೆರೆ ತಾಲೂಕಿನ ಲೋಕಿಕೆರೆ ಗ್ರಾಮದಲ್ಲಿ ಮಾತ್ರ ದೀಪಾವಳಿ ಹಬ್ಬದ ಸಂಭ್ರಮ ಇಲ್ಲ.
ಪ್ರತಿವರ್ಷದಂತೆ ಈ ವರ್ಷವೂ ಲೋಕಿಕೆರೆ ಜನರು ದೀಪಾವಳಿ ಆಚರಿಸುತ್ತಿಲ್ಲ. ಅಲ್ಲೋ ಇಲ್ಲೋ ಎಂಬಂತೆ ಒಂದೆರಡು ಮನೆಯವರು ದೀಪಾವಳಿ ಹಬ್ಬ ಆಚರಿಸುತ್ತಾರೆ. ಉಳಿದಂತೆ ಹಬ್ಬದ ಸಡಗರ ಇಲ್ಲ. ಮುಂಗಾರು ಬೆಳೆ ಕೈಗೆ ಬರುವ ಸಂಭ್ರಮದಲ್ಲಿ ರೈತಾಪಿ ವರ್ಗವು ದೀಪಾವಳಿ ಹಬ್ಬವನ್ನು ಗ್ರಾಮೀಣ ಪ್ರದೇಶಗಳಲ್ಲಿ ವಿಭಿನ್ನ, ವಿಶಿಷ್ಟವಾಗಿ ಆಚರಿಸುತ್ತಾರೆ. ಪಟಾಕಿ ಸಿಡಿಸಿ, ದೀಪಗಳನ್ನು ಹಚ್ಚಿ ದೀಪಗಳ ಹಬ್ಬ ಆಚರಿಸುತ್ತಾರೆ. ಲೋಕಿಕೆರೆ ಗ್ರಾಮದಲ್ಲಿ ಈ ಹಬ್ಬ ಬಂತೆಂದರೆ ಕರಾಳ ದಿನ. ಎಲ್ಲರ ಮನೆಯಲ್ಲಿ ಬೆಳಕು ಮೂಡಿದರೆ ಇಲ್ಲಿ ಕತ್ತಲು ಆವರಿಸುತ್ತದೆ.
ಯಾಕೆ ಆಚರಿಸಲ್ಲ?
ಹಬ್ಬ ಆಚರಿಸದಿರಲು ಒಂದು ಕಾರಣ ಇದೆ. ದೀಪಾವಳಿ ಹಬ್ಬದಂದೇ ನಡೆದ ಆ ಒಂದು ದುರ್ಘಟನೆ ಹಬ್ಬ ಆಚರಣೆ ಮಾಡದೇ ಇರಲು ನಿರ್ಧರಿಸಿರುವುದು. ಸುಮಾರು ನಾಲ್ಕು ತಲೆಮಾರುಗಳಿಂದ ಇಲ್ಲಿ ದೀಪಾವಳಿ ಹಬ್ಬ ಸೆಲಬ್ರೆಟ್ ಮಾಡುತ್ತಿಲ್ಲ.
ಹಲವಾರು ವರ್ಷಗಳ ಹಿಂದೆ ಗ್ರಾಮದ ಹಿರಿಯರು ದೀಪಾವಳಿ ಹಬ್ಬಕ್ಕಾಗಿ ಕಾಚಿ ಕಡ್ಡಿ ತರಲು ಹೋಗಿದ್ದರಂತೆ. ಅಂದು ಹೋದ ಹಿರಿಯರು ವಾಪಸ್ ಬರಲಿಲ್ವಂತೆ. ಈ ಹಿನ್ನೆಲೆಯಲ್ಲಿ ನಾಲ್ಕಾರು ತಲೆಮಾರುಗಳಿಂದ ಹಬ್ಬ ಆಚರಣೆ ಮಾಡುವುದನ್ನು ನಿಲ್ಲಿಸಿದ್ದಾರೆ.
ದೀಪಾವಳಿ ಅಪಶಕುನದ ದಿನ:
ಮತ್ತೊಂದು ಕಾರಣ ಈ ಗ್ರಾಮದ ನಾಲ್ಕೈದು ಮಂದಿ ಯುವಕರು ಹಬ್ಬದ ದಿನ ಪೂಜೆಯ ವಸ್ತುಗಳಾದ ಕಾಚಿ ಕಡ್ಡಿ, ಉತ್ರಾಣಿ ಕಡ್ಡಿ ತರಲು ಹೋದವರು ಇದುವರೆಗೂ ಬಂದಿಲ್ಲವಂತೆ. ಹೀಗಾಗಿ ಅವರು ಸತ್ತಿರಬಹುದು. ಹೀಗಾಗಿ ಈ ದೀಪಾವಳಿ ಊರಿಗೆ ಅಪಶಕುನ ಎಂದು ತಿಳಿದು ಹಬ್ಬ ನಿಷೇಧಕ್ಕೆ ಅಂದಿನ ಮುಖಂಡರು, ಗ್ರಾಮಸ್ಥರು ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ.
ಹೀಗಾಗಿ ಅಂದಿನಿಂದ ಇಂದಿನವರೆಗೆ ಇಲ್ಲಿ ದೀಪಾವಳಿ ಇಲ್ಲ. ಆದರೆ ಈಗಿನ ಯುವಕರು ಎಲ್ಲರೂ ಹಬ್ಬ ಮಾಡುವುದು ನೋಡಿ ನಾವು ಮಾಡಬೇಕು ಎಂದು ಹಲವು ಬಾರಿ ಅಂದುಕೊಂಡರೂ ಇದುವರೆಗೆ ಆಗಿಲ್ಲ. ಮುಂದಿನ ವರ್ಷ ಕುಲದೇವರು ಬೀರಪ್ಪನ ಆಶೀರ್ವಾದ ಪಡೆದು ಹಬ್ಬ ಮಾಡಿಯೇ ಮಾಡುತ್ತೇವೆ ಎಂದು ಹೇಳುತ್ತಾರೆ ಗ್ರಾಮದ ಯುವಕ ಗೋಪಾಲಕೃಷ್ಣ.
ಈ ದಿನದಲ್ಲಿ ಎಲ್ಲಾ ಬೆಳೆಗಳು ಫಸಲಿಗೆ ಬಂದಿರುತ್ತವೆ. ಬಂದ ಲಾಭದಿಂದ ಹಳೆ ಬಾಕಿ ತೀರಿಸಿ, ಹೊಸ ವಸ್ತು ಖರೀದಿಸಿ ಹೊಸ ಲೆಕ್ಕ ಶುರು ಮಾಡುವುದು ದೀಪಾವಳಿಯ ಹಳೆ ಶಿಷ್ಟಾಚಾರ. ಧನಲಕ್ಷ್ಮಿ ಪೂಜೆಯೇ ಈ ಹಬ್ಬದ ಸಂಭ್ರಮ.
ದೀಪಾವಳಿಯ ಈ ಖರೀದಿ ಸಂಭ್ರಮ ಈಗಂತೂ ಹೊಸ ಎತ್ತರಕ್ಕೇರಿದೆ. ಮನೆ, ಮನೆಗಳ ಸಂಭ್ರಮ ಹೆಚ್ಚಿಸುವ ಸಲಕರಣೆಗಳ ಖರೀದಿಗೆ ಸಾವಿರ ವೈವಿಧ್ಯಗಳು ಹಿತವಾಗಿ ತೆರೆದುಕೊಳ್ಳುವುದರಿಂದ ದೀಪಾವಳಿ ಕಾತರವನ್ನು ಉಂಟು ಮಾಡುತ್ತದೆ. ಬಡವರಿಂದ ಹಿಡಿದು ಶ್ರೀಮಂತರವರೆಗಿನ ಸರ್ವರಿಗೂ ಹಿತಕರವಾಗಿರುವ ಬೆಲೆ ಮತ್ತು ಗುಣಮಟ್ಟದ ವಿಸ್ತಾರ ಲೋಕ ಈಗಿನ ದೀಪಾವಳಿಯ ವಿಶೇಷ.
ಆದರೆ ಈ ಲೋಕಿಕೆರೆ ಗ್ರಾಮದಲ್ಲಿ ಮಾತ್ರ ಈ ಎಲ್ಲಾ ಆಚರಣೆ ಮತ್ತು ಹೊಸ ವಸ್ತುಗಳ ಖರೀದಿಗೆ ನಾಲ್ಕೈದು ತಲೆಮಾರುಗಳಿಂದ ಬ್ರೇಕ್ ಬಿದ್ದಿದೆ. ಸಣ್ಣ ಒಂದು ಮೂಢನಂಬಿಕೆಗೆ ಮೊರೆ ಹೋಗಿರುವ ಈ ಊರಿನಲ್ಲಿ ಮುಕ್ಕಾಲು ಮಂದಿ ಇರುವ ಕುರುಬ ಜನಾಂಗದ ಮಂದಿ ಈ ಹಬ್ಬವನ್ನು ಮರೆತೇ ಹೋಗಿದ್ದೇವೆ ಎನ್ನುತ್ತಾರೆ ಗ್ರಾಮದ ಮುಖಂಡ ಅಂಜಿನಪ್ಪ.
ಲೋಕಿಕೆರೆ ಇತಿಹಾಸ ನಿಮಗೆಷ್ಟು ಗೊತ್ತು..?
ಐತಿಹಾಸಿಕ ಸ್ಮಾರಕಗಳ ಇತಿಹಾಸ ಗತ ವೈಭವ ಹೊಂದಿದ್ದ ಲೋಕಿಕೆರೆ ಈಗ ಸೊರಗುತ್ತಿದೆ. 7 ನೇ ಶತಮಾನದಲ್ಲಿ ಬಾದಾಮಿ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಅಗ್ರಹಾರ ಇತ್ತು. ವಿಕ್ರಮಾದಿತ್ಯ ಪಟ್ಟದ ರಾಣಿ ಲೋಕಮಹಾ ದೇವಿ ಏಳು ತೂಬಿನ ಕೆರೆ ಕಟ್ಟಿಸಿದ ಐತಿಹ್ಯವೂ ಇದೆ.
ಈಗ ಎರಡು ತೂಬು ಮಾತ್ರ ಉಳಿದಿವೆ. ಲೋಕ್ಕಿಯ ಕೆರೆ, ಲೋಕವ್ವನ ಕೆರೆ, ಲೋಕಿಯಕೆರೆ ಎಂದೆಲ್ಲಾ ಕರೆಯಲಾಗಿತ್ತು. ಬರಬರುತ್ತಾ ಇದು ಲೋಕಿಕೆರೆ ಆಗಿದೆ. ಈ ಕೆರೆ ಕೋಡಿ ಬಿದ್ದಾಗ ನೀರೆಲ್ಲ ಹೊರ ಹರಿದು ಮನೆಗಳು, ಜಮೀನುಗಳಿಗೆ ನೀರು ನುಗ್ಗುತಿತ್ತು. ಊರಿಗೇ ಊರೇ ನೀರಿನಲ್ಲಿ ಮುಳುಗುತಿತ್ತು.
ಮಳಲು ಕೆರೆ, ಲೋಕಿಕೆರೆ ಸೇರಿ ಮೂರು ಗ್ರಾಮಗಳಿಗೆ ಒಂದೇ ಕೆರೆ ಆಧಾರ. ಹಿಂದಿನ ಪೂರ್ವಜರು ದೀಪಾವಳಿಗೆಂದು ಬ್ರಹ್ಮ ದಂಡೆ, ಕಾಸಿಹುಲ್ಲು, ಬಿಳಿ ಹೆಕ್ಕೆ ತರಲು ಕಾಡಿಗೆ ಹೋದವರು ವಾಪಸ್ ಬರಲೇ ಇಲ್ಲವಂತೆ. ಸರಿ ಏನು ಮಾಡೋದು, ಅವರು ಬರದೇ ದೀಪಾವಳಿ ಹೇಗೆ ಆಚರಿಸೋದು ಎಂದು ಅಲ್ಲಿಗೆ ನಿಲ್ಲಿಸಿದ್ದಾರೆ. ಅಲ್ಲಿಂದ ಇಲ್ಲಿಯವರೆಗೆ ದೀಪಾವಳಿ ಆಚರಿಸುವುದಿಲ್ಲ. ಗ್ರಾಮದ ಶೇ 80 ರಷ್ಟು ಸಮುದಾಯದವರು ಹಬ್ಬ ಆಚರಿಸುವುದಿಲ್ಲ. ಕುರುಬ ಸಮುದಾಯದವರದ್ದು 800 ಮನೆಗಳಿದ್ದರೆ, ಹರಿಜನರದ್ದು 85 ಮನೆಗಳಿವೆ. ಭೋವಿ ಜನಾಂಗದವರು, ವಾಲ್ಮೀಕಿ ಸಮುದಾಯದ ಮಳೆಲರು ಬೆಡಗಿನವರು ದೀಪಾವಳಿ ಹಬ್ಬ ಮಾಡುವುದಿಲ್ಲ. ಮಾಡಿದರೆ ಮನೆಗೆ ಕೆಡುಕಾಗಬಹುದು. ಹಾಗಾಗಿ ನಾವೇಕೆ ವ್ಯರ್ಥ ಪ್ರಯತ್ನ ಮಾಡುವುದು ಎಂದು ಾಚರಿಸೋದು ಬಿಟ್ಟು ಬಿಟ್ಟಿದ್ದಾರೆ ಎನ್ನುತ್ತಾರೆ ಪತ್ರಕರ್ತ ಪುರಂದರ ಲೋಕಿಕೆರೆ.