SUDDIKSHANA KANNADA NEWS/ DAVANAGERE/ DATE:01-01-2025
ದಾವಣಗೆರೆ: ಜಗಳೂರಿನಲ್ಲಿ ಜನವರಿ 11 ಮತ್ತು 12 ರಂದು ಡಾ.ಎ.ಬಿ.ರಾಮಚಂದ್ರಪ್ಪನವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ದಾವಣಗೆರೆ ಜಿಲ್ಲಾ 14 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಜಗಳೂರು ತಾಲೂಕಿನಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ತಾಲೂಕಿನಾದ್ಯಂತ ಸಂಚರಿಸಲು ವಿಶೇಷವಾಗಿ ತಯಾರಿಸಿರುವ “ಕನ್ನಡ ರಥ” ಸಂಚಾರಕ್ಕೆ ಜನವರಿ 2ರಂದು ಸಂಚರಿಸಲಿದೆ.
ತಹಶೀಲ್ದಾರರ ಕಚೇರಿಯ ಆವರಣದಲ್ಲಿ ಶಾಸಕರು ಹಾಗೂ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಚಿಕ್ಕಮ್ಮನಹಟ್ಟಿ ಬಿ ದೇವೇಂದ್ರಪ್ಪ ಮತ್ತು ಸಮ್ಮೇಳನದ ಸರ್ವಾಧ್ಯಕ್ಷ ಡಾ.ಎ.ಬಿ.ರಾಮಚಂದ್ರಪ್ಪ ಅವರ ಉಪಸ್ಥಿತಿಯಲ್ಲಿ ದಾವಣಗೆರೆ ಜಿಲ್ಲಾ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಅವರು ಚಾಲನೆ ನೀಡುವರು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ ತಿಳಿಸಿದ್ದಾರೆ.
ಸಮ್ಮೇಳನದ ಮಾಹಿತಿಯನ್ನು ಹೊತ್ತ ಕನ್ನಡ ರಥವನ್ನು ಮೈಸೂರಿನಲ್ಲಿ ವಿಶೇಷವಾಗಿ ತಯಾರಿಸಲಾಗಿದೆ. ಜನವರಿ 2 ರಿಂದ ಜನವರಿ 10 ನೇ ತಾರೀಕಿನವರೆಗೆ 9 ದಿನಗಳ ಕಾಲ ನಿರಂತರವಾಗಿ ಜಗಳೂರು ತಾಲೂಕಿನ 22 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಎಲ್ಲ ಗ್ರಾಮಗಳಲ್ಲಿ ಕನ್ನಡ ರಥವು ಸಂಚರಿಸಿ ಜನರಿಗೆ ಸಮ್ಮೇಳನದ ಮಾಹಿತಿಯನ್ನು ಒದಗಿಸಿ ಸಮ್ಮೇಳನದಲ್ಲಿ ಭಾಗವಹಿಸಲು ಸ್ಪೂರ್ತಿ ನೀಡುವ ಕೆಲಸ ಮಾಡಲಿದೆ. ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ತಾಲೂಕು ಕಸಾಪ ಅಧ್ಯಕ್ಷೆ ಕೆ.ಸುಜಾತಮ್ಮ ರಾಜು, ಜಿಲ್ಲಾ ಹಾಗೂ ತಾಲೂಕು ಕಸಾಪ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು, ರಥ ನಿರ್ಮಾಣ ಮತ್ತು ನಿರ್ವಹಣಾ ಸಮಿತಿಯ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿರುವರು.
ಜಿಲ್ಲಾ ಸಮ್ಮೇಳನದ ಇತಿಹಾಸದಲ್ಲಿಯೇ ಪ್ರಪ್ರಥಮವಾಗಿ ಸಂಚರಿಸುವ ಈ ಕನ್ನಡ ರಥದ ಚಾಲನೆಯ ಸಂದರ್ಭದಲ್ಲಿ ತಾಲೂಕಿನ ಅಧಿಕಾರಿ ಬಳಗದವರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪತ್ರಕರ್ತ ಬಂಧುಗಳು, ಕಲಾವಿದರು ಸೇರಿದಂತೆ ಸಮಸ್ತ ಕನ್ನಡಿಗರು ಹಾಜರಿರಬೇಕೆಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ ಮನವಿ ಮಾಡಿದ್ದಾರೆ.