SUDDIKSHANA KANNADA NEWS/ DAVANAGERE/ DATE:31-10-2024
ಕರ್ನಾಟಕದ ಪ್ರಾಚೀನಕಾಲದ ರಾಜಕೀಯ ಶಕ್ತಿ ಬೇರೆ ಬೇರೆ ಮತಾವಲಂಬಿಗಳ ಕೈಯಲ್ಲಿ ಇದ್ದುದರಿಂದ ಕನ್ನಡನುಡಿ, ಸಾಹಿತ್ಯಕ್ಕೆ ಆದಿಕವಿಗಳ ಕೊಡುಗೆ ಸ್ಮರಣಿಯವಾದುದು. ದೊರಕಿರುವ ಕನ್ನಡದ ಮೊದಲ ಗ್ರಂಥ ‘ಕವಿರಾಜ ಮಾರ್ಗ’ ಜೈನ ಕವಿಯದು ಆತನೇ ಶ್ರೀವಿಜಯ. ಇದಕ್ಕೂ ಪೂರ್ವದಲ್ಲಿ 50 ರಿಂದ 100 ವರ್ಷಗಳಷ್ಟು ಹಿಂದಿನಿಂದಲೂ ಕನ್ನಡದಲ್ಲಿ ಪೂರ್ಣಪ್ರಮಾಣದ ಗದ್ಯ ಮತ್ತು ಪದ್ಯ ಗ್ರಂಥಗಳು ರಚಿತವಾಗುತ್ತಾ ಬಂದಿರುವ ಮಾಹಿತಿ ಲಭ್ಯ. ಜೈನ ಕವಿಗಳು ಕನ್ನಡ ಭಾಷೆ ಮತ್ತು ಸಾಹಿತ್ಯ ಬೆಳವಣಿಗೆಗೆ ಆಸ್ಥೆಯಿಂದ ಪರಿಶ್ರಮಮಾಡಿ ಅನೇಕ ಗ್ರಂಥಗಳನ್ನು ರಚಿಸಿ, ಕನ್ನಡಕ್ಕೆ ಮಹತ್ವದ ಸ್ಥಾನ, ಮಾನ ಲಭಿಸುವಂತೆ ಮಾಡಿ, ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಹೀಗಾಗಿ ಕನ್ನಡ ಭಾಷೆಗೆ ಜೈನರೇ ಆದಿಕವಿಗಳು. ಕನ್ನಡ ಭಾಷೆಯ ಸೌಂದರ್ಯ ಮತ್ತು ಕಾಂತಿಗಳಿಗೆ ಜೈನ ಕವಿಗಳೇ ಬಹುಮಟ್ಟಿಗೆ ಕಾರಣೀಭೂತರು. ಕರ್ನಾಟಕ ಪ್ರಸಿದ್ಧ ಅರಸು ಮನೆತನಗಳು ಜೈನಮತಕ್ಕೆ ಪ್ರೊತ್ಸಾಹವನ್ನು ನೀಡಿವೆ.
ಕನ್ನಡ ನಾಡಿನ ಆದಿ ಕವಿಗಳು:
ಶಾಸನ ಕವಿಗಳಾದ ಶ್ರೀಧರಯ್ಯ, ಅರ್ಹದ್ಭಕ್ತ, ಜಿನವಲ್ಲಭ, ಜಿನವರ್ಮ, ಮಲ್ಲಿನಾಥ, ಕನ್ನಪಯ್ಯ, ನಾಗಾರ್ಜುನ ಪಂಡಿತ, ಶಾಂತಿನಾಥ ಭಾಸ್ಕರ ಹಾಗೂ ಪಂಪ ಪೂರ್ವಯುಗದ ಕವಿಗಳಾದ ಅಸಗ, ಗುಣವರ್ಮ, ಗುಣನಂದಿ ಇವರು ಸಹ ಜೈನ ಕವಿಗಳೇ ಆಗಿದ್ದು ಕನ್ನಡದಲ್ಲಿ ಕೃತಿ ರಚನೆ ಮಾಡಿದ್ದಕ್ಕೆ ಸಾಕ್ಷ್ಯಾಧಾರಗಳಿವೆ. ಕರ್ನಾಟಕ ಕವಿ ಚರಿತೆಯ ‘ಮೂರು’ ಸಂಪುಟಗಳಲ್ಲಿ ಆರ್. ನರಸಿಂಹಾಚಾರ್ಯರು ಒಟ್ಟಿಗೆ ಸುಮಾರು ‘ಎರಡುನೂರು’ ಜೈನ ಕವಿಗಳನ್ನು ಪರಿಚಯಿಸಿ, ಕನ್ನಡಭಾಷೆ ಮತ್ತು ಸಾಹಿತ್ಯ ಬೆಳವಣಿಗೆಗೆ ಅವರ ಸೇವೆಯನ್ನು ಸ್ಮರಿಸಿದ್ದಾರೆ. ಆರಂಭದ ಕನ್ನಡ ಸಾಹಿತ್ಯವೆಂದರೆ ಜೈನ ಸಾಹಿತ್ಯವೇ ಆಗಿದೆ. ಜೈನ ಸಾಹಿತ್ಯದ ಪ್ರವಾಹಕ್ಕೆ ಸುಮಾರು 11-12ನೇ ಶತಮಾನದ ಹೊತ್ತಿಗೆ ವೀರಶ್ಯವ ಸಾಹಿತ್ಯ ಪ್ರವಾಹ ಬಂದು ಕೂಡಿಕೊಂಡಿತು.
ಕನ್ನಡದ ಪ್ರಥಮ ಗ್ರಂಥಗಳು ‘ಎರಡು’:
ಕನ್ನಡದ ಮೊದಲ ಗ್ರಂಥವೇ ಶ್ರೀವಿಜಯ ರಚಿಸಿದ ‘ಕನ್ನಡ ಲಕ್ಷ್ಮಣ ಗ್ರಂಥ’ ಎರಡನೆಯದ್ದು ನಾಗವರ್ಮನ ‘ಕಾವ್ಯಾವಲೋಕನ’ ಇದು ಒಂದು ಅಲಂಕಾರ ಗ್ರಂಥ. ಸಾಳ್ವನ ‘ರಸರತ್ನಾಕರ’ ಇದು ಕನ್ನಡ ಲಕ್ಷಣ ಗ್ರಂಥಗಳ ಶ್ರೇಣಿಗಳಲ್ಲಿ ಗಣ್ಯವಾದ ಸ್ಥಾನ ಪಡೆದಿದೆ. ಶಿವಕೋಟ್ಟಾಚಾರ್ಯರಿಂದ ರಚಿತವಾದ ‘ವಡ್ಡಾರಾಧನೆ’ ಪ್ರಥಮ ಗದ್ಯ ಕಥಾಸಂಗ್ರಹ. ಇದನ್ನು ಪ್ರಥಮ ಜೈನ ಧಾರ್ಮಿಕ ಗದ್ಯ ಕಥಾಸಂಗ್ರಹ ಎಂದು ಹೇಳಲಾಗಿದೆ. ‘ಕವಿರಾಜ ಮಾರ್ಗವು’ ಲಕ್ಷಣ ಗ್ರಂಥವಾದ್ದರಿಂದ ಅದರಲ್ಲಿ ಧಾರ್ಮಿಕ ವಿಷಯ ಪ್ರತಿಪಾದನೆಗೆ ಅವಕಾಶವಿಲ್ಲ. ಪಂಪ ಪೂರ್ವ ಯುಗದ ಉಪಲಬ್ಧ ಕೃತಿಗಳೆಂದರೆ ಎರಡು – ಒಂದು ‘ಕವಿರಾಜಮಾರ್ಗ’ ಇನ್ನೊಂದು ‘ವಡ್ಡಾರಾಧನೆ’ ಯಾಗಿದೆ. ಜೈನ ಕವಿಗಳು ವೀರಶೈವ ಕವಿಗಳಿಂತ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು. ಅವರಲ್ಲಿ ಪ್ರಸಿದ್ಧರಾದವರೆಂದರೆ ‘ನೇಮಿಚಂದ್ರ’ ‘ಅಗ್ಗಳ’ ‘ಜನ್ನ’ ‘ಆಂಡಯ್ಯ’ ‘ಕೇಶಿರಾಜ’ ಮುಂತಾದವರು.
ಕನ್ನಡ ನುಡಿ, ಸಾಹಿತ್ಯದ ಸುವರ್ಣಯುಗ:
ಕನ್ನಡದ ಆದಿಕವಿ, ಅಗ್ರಕವಿ ಎಂದು ಹೆಸರು ಪಡೆದ ಮಹಾಕವಿ ‘ಪಂಪ’ನ ಯುಗವು ಜೈನ ಕವಿಗಳಿಂದಲೇ ತುಂಬಿದೆ. ಕನ್ನಡನುಡಿ, ಸಾಹಿತ್ಯದ ಸುವರ್ಣಯುಗಕ್ಕೆ ಪಂಪನೇ ಚಕ್ರವರ್ತಿ. ‘ಪಸರಿಸ ಕನ್ನಡಕ್ಕೊಡೆಯನೊರ್ವನೆ ಪಂಪನಾವಗಂ’ ಎಂಬ ಕೀರ್ತಿ ಆತನಿಗಿದೆ. ಅವರ ಕೃತಿಗಳಾದ ‘ಆದಿಪುರಾಣ’ ಮತ್ತು ‘ವಿಕ್ರಮಾರ್ಜುನ ವಿಜಯ’ ಗಳನ್ನು ಬರೆದು ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಭದ್ರಬುನಾದಿ ಹಾಕಿದ್ದಾನೆ. ಪಂಪನ ಹಾದಿಯಲ್ಲಿಯೇ ನಡೆದು ಕನ್ನಡನುಡಿ ಮತ್ತು ಸಾಹಿತ್ಯಕ್ಕೆ ದುಡಿದ ಕವಿಗಳೆಂದರೆ ಪೊನ್ನ, ರನ್ನ, ನಾಗಚಂದ್ರ, ಜನ್ನ ಇವರುಗಳು. ರನ್ನನು ಬರೆದ ಪರಶುರಾಮ ಚರಿತೆ, ಚಕ್ರೇಶ್ವರ ಚರಿತೆ, ಅಜಿತ ತೀರ್ಥೇಶ್ವರ ಚರಿತೆ, ಸಾಹಸಭೀಮ ವಿಜಯ, ಮತ್ತು ವ್ಯಾಕರಣ ಗ್ರಂಥಗಳನ್ನು ಬರೆದು ‘ಕವಿಚಕ್ರವರ್ತಿ’ ಎಂಬ ಕೀರ್ತಿಗೆ ಪಾತ್ರಾನಾದನು.
ಕನ್ನಡಭಾಷೆಯ ಮಹತ್ವದ ಗ್ರಂಥಗಳು:
ನಾಗಚಂದ್ರನು ಬರೆದ ಶ್ರೀರಾಮಚಂದ್ರ ಚರಿತೆ, ಮಲ್ಲಿನಾಥಪುರಾಣ, ಜಿನಾಕ್ಷರಮಾಲೆ, ಜಿನಮುನಿಯತಿಗಳು ಎಂಬ ಗ್ರಂಥಗಳು ಮಹತ್ವ ಪಡೆದಿದೆ. ಜನ್ನನ ‘ಯಶೋಧರ ಚರಿತ್ರೆ’ ಅಮೃತಮತೀಯ ಚಿತ್ರಣ, ಮಹತ್ವದ ಕೃತಿಗಳು. ಕ್ರಿ.ಶ.1235ರಲ್ಲಿ ಆಂಡಯ್ಯನು ಸಂಸ್ಕೃತ ಶಬ್ದಗಳನ್ನೇ ಬಳಸದೇ ಅಚ್ಚಕನ್ನಡದಲ್ಲಿ ಕಾವ್ಯ ರಚಿಸುವುದಾಗಿ ಪ್ರತಿಜ್ಞೆತೊಟ್ಟು, ದೇಸ್ಯ ಮತ್ತು ತದ್ಭವ ಶಬ್ದಗಳ ಸಹಾಯದಿಂದ ‘ಕಬ್ಬಿಗರ ಕಾವ’ ಎಂಬ ಕೃತಿಯನ್ನು ಬರೆದನು. ಇದು ಕನ್ನಡಭಾಷೆ ಮತ್ತು ಸಾಹಿತ್ಯದಲ್ಲಿ ಏಕೈಕ ಅಪ್ರತಿಮ ಘಟನೆ. ಕವಿಗೆ ಕನ್ನಡ ಭಾಷೆಯ ಬಗ್ಗೆ ಇರುವ ಪ್ರೇಮ ಎಷ್ಟೆಂದು ತಿಳಿಯುತ್ತದೆ. ಚಾವುಂಡರಾಯನ – ಚಾವುಂಡ ಪುರಾಣ ಒಂದು ಮಹತ್ವದ ಕೃತಿ. ಆಚಣ್ಣನ ‘ವರ್ಧಮಾನ ಪುರಾಣ’, ಅಚ್ಚ ಕನ್ನಡ ಶಬ್ದಗಳಲ್ಲಿ ಬರೆದದು. ಅಗ್ಗಳನ ಚಂದ್ರಪ್ರಭಪುರಾಣ, ಬಂಧುವರ್ಮನ – ಹರಿವಂಶಾಭ್ಯಾದಯ, ಪಾರ್ಶ್ವಪಂಡಿತನ – ಪಾರ್ಶ್ವನಾಥ ಪುರಾಣ, ಮಹಾಬಲಕವಿಯ – ನೇಮಿನಾಥ ಪುರಾಣ ಮುಂತಾದವು ಕನ್ನಡ ನುಡಿ ಹಾಗೂ ಸಾಹಿತ್ಯದ ಶ್ರೀಮಂತಿಕೆ ಹೆಚ್ಚಿಸಿವೆ.
ಕನ್ನಡದ ಮಹತ್ವದ ಕವಿಗಳು, ಕೃತಿಗಳು:
ಹದಿಮೂರನೇ ಶತಮಾನದ ಜೈನ ಕವಿಗಳೆಂದರೆ, ಪಾರ್ಶ್ವಪಂಡಿತ, ಎರಡನೇ ಗುಣವರ್ಮ, ಬಾಳಚಂದ್ರಕವಿ, ಕಮಲಭವನ, ಆಂಡಯ್ಯ, ಮಲ್ಲಿಕಾರ್ಜುನ ಇವರೆಲ್ಲ ಕನ್ನಡನುಡಿ, ಸಾಹಿತ್ಯದ ಶ್ರೀಮಂತಿಕೆಗೆ ಕಾರಣೀಕರ್ತರು. ಕೇಶಿರಾಜನ ಶಬ್ದ ಮಣಿದರ್ಪಣ (1275) ಮಾಷುಣಂದಿಯ – ಪದಾರ್ಥಸಾರ, ಶಾಸ್ತçಸಾರ. ರಟ್ಟಕವಿಯ – ರಟ್ಟಮತ, ಬಾಳಚಂದ್ರಪಂಡಿತನ – ದ್ರವ್ಯ ಸಂಗ್ರಹ ಟೀಕೆ, ಕನಕಚಂದ್ರನ – ಸಹಜಾತ್ಮಪ್ರಕಾಶ ಇವೆಲ್ಲ ಕನ್ನಡದಲ್ಲಿ ಮರೆಯಲಾಗದ ಕೃತಿಗಳು. ನಾಚಿರಾಜನ – ಅಮರಕೋಶ, ಅಮೃತಣಂದಿಯ ವೈದ್ಯ ನಿಘಂಟು, ಬಾಲಚಂದ್ರನ – ಉದ್ಯೋಗಸಾರ ಕನ್ನಡ ಸಾಹಿತ್ಯದ ಪ್ರೌಢ ಅಭ್ಯಾಸಕ್ಕೆ ತಕ್ಕ ಗ್ರಂಥಗಳು.
ಕನ್ನಡ ಕುರಿತು ಭಾಷಾಭಿಮಾನವಿರಲಿ:
ಆದಿ ಕವಿಗಳು ಕನ್ನಡ ನುಡಿಯ ಬಗ್ಗೆ ಅಭಿಮಾನವಿಟ್ಟು, ಕನ್ನಡ ಸಾಹಿತ್ಯರಚನೆ ಮಾಡಿ, ಕನ್ನಡದ ಸಾರಸ್ವತ ಲೋಕಕ್ಕೆ ಅವರು ನೀಡಿದ ಅಮೋಘ ಕೊಡುಗೆ ಕನ್ನಡನಾಡಿನ ಇತಿಹಾಸದಲ್ಲಿ ಶಾಶ್ವತವಾಗಿ ಉಳಿದಿದೆ. ಇಂದು ಕನ್ನಡಿಗರೇ ಕನ್ನಡನಾಡಿನ ಅರಸರಾಗಿದ್ದರೂ, ಕನ್ನಡ ಉಳಿವಿಗೆ ಹೋರಾಟ ಮತ್ತು ಸಂಘಟನೆ ಮಾಡುವ ಪರಿಸ್ಥಿತಿ ಬಂದದ್ದು
ದುರ್ದೈವದ ಸಂಗತಿ. ಕನ್ನಡಿಗರಾದ ನಮ್ಮಲ್ಲಿ ಕನ್ನಡದ ಭಾಷಾಭಿಮಾನವಿರಲಿ. ಕನ್ನಡದಲ್ಲಿ ಉತ್ಕೃಷ್ಟ ಸಾಹಿತ್ಯ ರಚನೆಯಾಗಲಿ ಎಂಬುದು ನನ್ನ ಆಶಯವಾಗಿದೆ.
ವಿಶೇಷ ಲೇಖನ: ಡಾ. ಗಂಗಾಧರಯ್ಯ ಹಿರೇಮಠ, ವಿಶ್ರಾಂತ ಪ್ರಾಧ್ಯಾಪಕರು, ದಾವಣಗೆರೆ