SUDDIKSHANA KANNADA NEWS\ DAVANAGERE\ DATE:21-10-2023
ಕಲಬುರಗಿ: ಕಲಬುರಗಿ ನಗರದಲ್ಲಿ ಮತ್ತೆ ನೆತ್ತರು ಹರಿದಿದ್ದು, ಜನರು ಭಯಭೀತರಾಗಿದ್ದಾರೆ. ಮೊನ್ನೆ ನಡೆದ ಹತ್ಯೆ ಮಾಸುವ ಮುನ್ನವೇ ಮತ್ತೊಂದು ಕೊಲೆ ನಡೆದಿದೆ.
ಭೀಮಾ ತೀರದ ಚೌಡಾಪುರನಲ್ಲಿ ನಡೆದ ಗ್ರಾಮ ಪಂಚಾಯತಿ ಅಧ್ಯಕ್ಷನ ಕೊಲೆ ಪ್ರಕರಣ ಮಾಸುವ ಮುನ್ನವೆ ಮತ್ತೆ ರಕ್ತದೋಕುಳಿ ಆಗಿದೆ.
ಅಫಜಲಪುರ ತಾಲೂಕಿನ ಸಿಧನೂರ ಗ್ರಾಮದಲ್ಲಿ ಬಲಭೀಮ ಸಗರ (23) ಎಂಬಾತನನ್ನು ಕೊಲೆ ಮಾಡಲಾಗಿದೆ. ದಸರಾ ಹಬ್ಬಕ್ಕೆಂದು ಊರಿಗೆ ಬಂದವನ ಹಂತಕರು ಕೊಂದು ಹಾಕಿದ್ದಾರೆ.
ಶುಕ್ರವಾರ ರಾತ್ರಿ ಜಮೀನಿನ ವಿಚಾರ ಹಾಗೂ ಹಳೇ ವೈಷಮ್ಯದ ಹಿನ್ನಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ರುಂಡ ಕತ್ತರಿಸಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಕೊಲೆಯಾದ ಬಲಭೀಮ ಜಮೀನು ವಿಚಾರವಾಗಿ ಗಲಾಟೆ ಮಾಡಿಕೊಂಡು ಜೈಲು ಸೇರಿದ್ದ. ಇತ್ತಿಚೀಗಷ್ಟೆ ನ್ಯಾಯಾಲಯದಿಂದ ಜಾಮೀನು ಪಡೆದು ಕಲಬುರಗಿ ನಗರದಲ್ಲಿ ವಾಸವಿದ್ದ, ದಸರಾ ಹಬ್ಬದ ಹಿನ್ನಲೆ ಗ್ರಾಮಕ್ಕೆ ತೆರಳಿದ್ದಾಗ ಹರಿತವಾದ ಕೊಡಲಿ, ತಲ್ವಾರದಂತ ಮಾರಕಾಸ್ತ್ರದಿಂದ ದುಷ್ಕರ್ಮಿಗಳು ಬಲಭೀಮನ ಶಿರಚ್ಛೇದನ ಮಾಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿಧಿ, ಸಿಪಿಐ ಪಂಡಿತ ಸಗರ ರೇವೂರ ಬಿ ಠಾಣೆಯ ಪಿಎಸ್ಐ ಸವೀತಾ ಕಲ್ಲೂರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಕುರಿತು ರೇವೂರ ಬಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಬಂಧನಕ್ಕೆ ಜಾಲ ಬಿಸಿದ್ದಾರೆ.