SUDDIKSHANA KANNADA NEWS/ DAVANAGERE/ DATE:10-03-2025
ದಾವಣಗೆರೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರ ನೀಡಿರುವ ಭರವಸೆಗಳನ್ನು ಈಡೇರಿಸಿದೆ, ಜನತೆಯ ನಂಬುಗೆಯ ಸರ್ಕಾರ ಎಂದು ಇದ್ದರೆ ಅದು ಕಾಂಗ್ರೆಸ್ ಸರ್ಕಾರ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್.ಮಲ್ಲಿಕಾರ್ಜುನ್ ಅವರು ತಿಳಿಸಿದರು.
ನಗರದ ಗೃಹ ಕಚೇರಿಯಲ್ಲಿ ಇ-ಖಾತಾ ಅಭಿಯಾನದ ಅಂಗವಾಗಿ ದಾವಣಗೆರೆ ಉತ್ತರ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ಬಿ-ಖಾತಾ ಪ್ರಮಾಣ ಪತ್ರಗಳನ್ನು ಸಾಂಕೇತಿಕವಾಗಿ ವಿತರಣೆ ಮಾಡಿ ಮಾತನಾಡಿದರು.
ಬಡವರ, ನಿರ್ಗತೀಕರ, ದೀನದಲಿತರ ಅಭಿವದ್ದಿಗೆ ಕಾಂಗ್ರೆಸ್ ಪಕ್ಷವು ಪಣತೊಟ್ಟಿದೆ. ಈ ಹಿಂದೆ, ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 15 ಸಾವಿರ ಆಶ್ರಯ ಮನೆಗಳ ನಿರ್ಮಾಣವಾಗಿದ್ದು ಪ್ರಸ್ತುತ ಒಂದೊಂದು ಮನೆಯ ಬೆಲೆ 35-40 ಲಕ್ಷ ಆಗಿವೆ. 40 ಸಾವಿರಕ್ಕು ಅಧಿಕ ಮನೆಗಳನ್ನು ಅಕ್ರಮ-ಸಕ್ರಮದಡಿ ವಿಲೇವಾರಿ ಮಾಡಲಾಗಿದ್ದು, ಪ್ರಸ್ತುತ ಸರ್ಕಾರದ ನೂತನ ಯೋಜನೆಯಾಗಿರುವ ಇ-ಖಾತಾ ಅಭಿಯಾನದಡಿ 20 ಸಾವಿರಕ್ಕು ಅಧಿಕ ಅರ್ಜಿಗಳು ವಿಲೇವಾರಿಯಾಗಲಿವೆ ಎಂದರು.
ಇ-ಖಾತಾ ಪ್ರಮಾಣ ಪತ್ರ ನೀಡಲು ಪಾಲಿಕೆಯಿಂದ 10 ಸಾವಿರ ರೂಪಾಯಿ ನಿಗಧಿ ಮಾಡಲಾಗಿತ್ತು. ಬಡವರಿಗೆ ಇದು ಹೊರೆಯಾಗಲಿದೆ ಎಂದು ಸಂಬಂಧ ಪಟ್ಟವರಿಗೆ ಸೂಚಿಸಿದ್ದರಿಂದ ಉಚಿತವಾಗಿ ಪ್ರಮಾಣ ಪತ್ರಗಳನ್ನು ಪಡೆಯಬಹುದಾಗಿದೆ. ಜನತೆಯು ಇದರ ಸದೂಪಯೋಗ ಪಡೆದುಕೊಳ್ಳುವಂತೆ ಸಚಿವರು ತಿಳಿಸಿದರು.
ಪಾಲಿಕೆಯ ಆಯುಕ್ತರಾದ ರೇಣುಕಾ ಅವರು ಮಾತನಾಡಿ ಪಾಲಿಕೆ ವ್ಯಾಪ್ತಿಯಲ್ಲಿನ ಬೇತೂರು ರಸ್ತೆ, ಎಲ್ಲಮ್ಮನಗರ, ನಿಟುವಳ್ಳಿ, ಅಶೋಕನಗರ, ಬೂದಾಳು ರಸ್ತೆ, ಮಾಗನಹಳ್ಳಿ ರಸ್ತೆ, ಪಾಮೇನಹಳ್ಳಿ, ಬಸಾಪುರ ಸೇರಿದಂತೆ ಸುಮಾರು ಜನರು ಇ-ಖಾತೆಗಾಗಿ ಅರ್ಜಿಯನ್ನು ಸಲ್ಲಿಕೆ ಮಾಡಿದ್ದರು. ಈ ಮೂಲಕ ಸಾಂಕೇತಿಕವಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರದ ಹಿರಿಯ ಶಾಸಕರಿಂದ 250 ಅರ್ಹ ಫಲಾನುಭವಿಗಳಿಗೆ ಬಿ-ಖಾತಾ ಪ್ರಮಾಣಪತ್ರಗಳನ್ನು ವಿತರಣೆ ಮಾಡಲಾಗಿದೆ. ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಹಾಗೂ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರು ಸೂಚನೆಯಂತೆ ಇ-ಖಾತಾ ವಿತರಣೆಯ ಗೊಂದಲ ನಿವಾರಣೆಯಾಗಿದ್ದು ಅರ್ಹ ಫಲಾನುಭವಿಗಳು ಅರ್ಜಿಗಳನ್ನು ಸಲ್ಲಿಸಿ ಯೋಜನೆಯ ಸದೂಪಯೋಗ ಪಡೆಯಲು ಕೋರಿದರು.
ಈ ಸಂದರ್ಭದಲ್ಲಿ ಮಾಜಿ ಮೇಯರ್ ಕೆ.ಚಮನ್ ಸಾಬ್, ಪಾಲಿಕೆಯ ಮಾಜಿ ಸದಸ್ಯರಾದ ಏ.ನಾಗರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.