SUDDIKSHANA KANNADA NEWS/ DAVANAGERE/ DATE:20-01-2025
ದಾವಣಗೆರೆ: ಶ್ರೇಷ್ಠ ಸಾಹಿತ್ಯಕಾರ ಶರತ್ ಚಂದ್ರ ಚಟೋಪಾಧ್ಯಾಯರ ಸ್ಮರಣಾರ್ಥವಾಗಿ, ಅವರ ಪ್ರಸಿದ್ಧ ಕಾದಂಬರಿ “ಅಧಿಕಾರ” ಕಾದಂಬರಿ ಕುರಿತು ಅಧ್ಯಯನ ತರಗತಿಯನ್ನು AIMSS ಜಿಲ್ಲಾ ಸಮಿತಿ ವತಿಯಿಂದ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಎಸ್ ಯು ಸಿ ಐ (ಸಿ) ಪಕ್ಷದ ರಾಜ್ಯ ಸೆಕ್ರೆಟೇರಿಯಟ್ ಹಿರಿಯ ಸದಸ್ಯ ಸುನೀತ್ ಕುಮಾರ್ ಅವರು ಶರತ್ ಚಂದ್ರರು ತಮ್ಮ ಕಾದಂಬರಿಗಳಲ್ಲಿ ಮಹಿಳೆಯರ ಸಮಸ್ಯೆಗಳ ಬಗ್ಗೆ ಆಳವಾದ ಚಿಂತನೆಗಳನ್ನು ಪ್ರಸ್ತಾಪಿಸಿದ್ದಾರೆ. “ಅಧಿಕಾರ” ಕಾದಂಬರಿಯು ಒಂದು ಕ್ರಾಂತಿಕಾರಿ ಕಾದಂಬರಿಯಾಗಿದ್ದು, ಈ ಕಾದಂಬರಿಯನ್ನು ಅರಿಯುವುದು ಕ್ರಾಂತಿಕಾರಿ ಸಂಘಟನೆಯಾದ AIMSS ಗೆ ತುಂಬಾ ಮುಖ್ಯವಾದುದ್ದು, ಅವರು ಮಾಡಿದ ಆಲೋಚನೆಗಳು ಇಂದಿಗೂ ಪ್ರಸಕ್ತವಾಗಿವೆ ಎಂದರು.
ಶರತ್ ಚಂದ್ರ ಚಟೋಪಾಧ್ಯಾಯರು ತಮ್ಮ ಕಾಲದ ಮುನ್ನೋಟದ ಸಾಹಿತಿಗಳಲ್ಲಿ ಒಬ್ಬರು. ಅವರು ಮಹಿಳೆಯರ ಬಗ್ಗೆ ಹಾಸ್ಯವಿಲ್ಲದ ಗಂಭೀರ ದೃಷ್ಟಿಕೋನ ಹೊಂದಿದ್ದರು. ಅವರ ಸಾಹಿತ್ಯದಲ್ಲಿ ಮಹಿಳೆಯರ ಸಮಸ್ಯೆಗಳು, ಅವರ ಅಸಮಾನತೆ, ಮತ್ತು ಅವರ ಹಕ್ಕುಗಳನ್ನು ಕೇವಲ ಸಾಮಾಜಿಕವಾಗಿ ಮಾತ್ರವಲ್ಲ, ಮನೋವೈಜ್ಞಾನಿಕ ದೃಷ್ಟಿಯಿಂದಲೂ ಬಿಂಬಿಸಲಾಗಿದೆ ಎಂದು ತಿಳಿಸಿದರು.
ಶರತ್ ಚಂದ್ರರು ಮಹಿಳೆಯರು ಸ್ವತಂತ್ರರಾಗಬೇಕೆಂಬ ಅಭಿಪ್ರಾಯವನ್ನು ದೃಢವಾಗಿ ಹೊಂದಿದ್ದರು. ಅವರು ಮಹಿಳೆಯರು ಕೇವಲ ಗೃಹಿಣಿಯ ಪಾತ್ರದಲ್ಲಿ ಸೀಮಿತವಾಗದೆ, ಶ್ರೇಯೋಭಿವೃದ್ಧಿಗೆ ತಮ್ಮದೇ ಆದ ಪಾತ್ರವನ್ನು ನಿರ್ವಹಿಸಬೇಕು ಎಂದು ನಂಬಿದವರು. ಅವರ ಕಾದಂಬರಿಗಳು, ಸಾಮಾಜಿಕ ರೂಢಿಗಳನ್ನು ಪ್ರಶ್ನಿಸುತ್ತವೆ. “ಶೇಷಪ್ರಶ್ನೆ” ಮತ್ತು “ಶ್ರೀಕಾಂತ” ಇಂತಹ ಕೃತಿಗಳು ಮಹಿಳೆಯರ ಮೇಲೆ ಹೇರಲಾಗುವ ದಮನ ಮತ್ತು ನಿರ್ಧಾರಾತ್ಮಕ ಹಕ್ಕುಗಳ
ಕೊರತೆಯನ್ನು ತೀಕ್ಷ್ಣವಾಗಿ ಚಿತ್ರಿಸುತ್ತವೆ ಎಂದು ತಿಳಿಸಿದರು.
ಶರತ್ ಚಂದ್ರರು ಮಹಿಳೆಯರು ಶಿಕ್ಷಣ ಪಡೆದು ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳಳ್ಳಬೇಕು. ಅವರಲ್ಲಿ ಶಿಕ್ಷಣದ ಪ್ರಾಬಲ್ಯವು ಮಹಿಳೆಯರಿಗೆ ಆತ್ಮವಿಶ್ವಾಸವನ್ನು ಮತ್ತು ಜೀವನದಲ್ಲಿ ಸ್ವತಂತ್ರ ನಿರ್ಧಾರವನ್ನು ನೀಡುತ್ತದೆ ಎಂಬ ನಂಬಿಕೆ ಬಲವಾಗಿತ್ತು
ಎಂದು ಹೇಳಿದರು.
ಶರತ್ ಚಂದ್ರರು ಮಹಿಳೆಯರ ಆತ್ಮಗೌರವವನ್ನು ಉಳಿಸಿಕೊಳ್ಳುವುದು ಅತ್ಯಂತ ಮುಖ್ಯವೆಂದು ಬೋಧಿಸಿದರು. ಅವರ ಕಥಾನಾಯಕೆಗಳು ಸಾಮಾನ್ಯ ಮಹಿಳೆಯರಾಗಿ ಕಾಣಿಸಿಕೊಳ್ಳುತ್ತವೆ, ಆದರೆ ಆಳವಾದ ಬುದ್ಧಿವಂತಿಕೆ ಮತ್ತು ಪ್ರಾಮಾಣಿಕತೆಯನ್ನು ಹೊಂದಿರುತ್ತವೆ .ಮಹಿಳೆಯರು ಶಿಕ್ಷಣದ ಮೂಲಕ ಸ್ವಾವಲಂಬಿ ಆಗಬೇಕು ಎಂಬ ದೃಷ್ಟಿಕೋನವನ್ನು ಹಿರಿದಾಗಿ ಪ್ರಚಾರಿಸಿದರು. ಈ ಅಧ್ಯಯನ ತರಗತಿ ಮೂಲಕ ಯುವ ಪೀಳಿಗೆಯವರು ಮಹಿಳೆಯರ ಸಮಸ್ಯೆಗಳ ಬಗ್ಗೆ ಅರಿವು ಹೊಂದಿ, ಶರತ್ ಚಂದ್ರರ ವಿಚಾರಗಳನ್ನು ಅರ್ಥಮಾಡಿಕೊಳ್ಳಲು ಪ್ರೇರಿತರಾಗುಗುವಂತೆ ಮಾಡುತ್ತವೆ ಎಂದರು.
ಕಾರ್ಯಕ್ರಮಕ್ಕೆ ಇನ್ನೋರ್ವ ಅತಿಥಿಗಳಾಗಿ AIMSS ರಾಜ್ಯ ಕಾರ್ಯದರ್ಶಿ ಎಸ್. ಶೋಭಾ, ಹಾಗೂ ಅಖಿಲ ಭಾರತ ಉಪಾಧ್ಯಕ್ಷೆ ಅಪರ್ಣಾ ಬಿ. ಆರ್, ಜಿಲ್ಲಾ ಸಮಿತಿ ಕಾರ್ಯದರ್ಶಿ ಭಾರತಿ. ಕೆ., ಉಪಾಧ್ಯಕ್ಷೆ ಬನಷ್ರಿ, ಜಿಲ್ಲಾ ಸಮಿತಿ ಸದಸ್ಯರಾದ ಮಮತಾ, ಸುಷ್ಮಾ, ಕವಿತಾ ಮತ್ತಿತರರು ಹಾಜರಿದ್ದರು.