SUDDIKSHANA KANNADA NEWS/ DAVANAGERE/ DATE:18-03-2025
ದಾವಣಗೆರೆ: ಹರಿಹರದಲ್ಲಿ ನೆಲೆ ನಿಂತಿರುವ 66 ಗ್ರಾಮಗಳ ಒಡತಿ, ಗ್ರಾಮದೇವತೆ ಊರಮ್ಮ ಉತ್ಸವದಲ್ಲಿ ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕರೂ ಆದ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಅವರು ಕುಟುಂಬ ಸಮೇತ ಪಾಲ್ಗೊಂಡರು.
ಪತ್ನಿ ಸ್ವಾತಿ ವಿನಯ್ ಕುಮಾರ್ ಜೊತೆ ಗ್ರಾಮದೇವತೆ ದರ್ಶನ ಪಡೆದ ವಿನಯ್ ಕುಮಾರ್ ಅವರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ದಂಪತಿ ವಿಶೇಷ ಪ್ರಾರ್ಥನೆಯನ್ನೂ ಸಲ್ಲಿಸಿದರು.
ವಿನಯ್ ಕುಮಾರ್ ಹಾಗೂ ಸ್ವಾತಿ ವಿನಯ್ ಕುಮಾರ್ ದಂಪತಿ ಆಗಮಿಸುತ್ತಿದ್ದಂತೆ ದೇವಸ್ಥಾನದ ವ್ಯವಸ್ಥಾಪಕರು ಬರಮಾಡಿಕೊಂಡರು. ಅರ್ಚಕರು ದೇವಿಯಲ್ಲಿ ಪೂಜೆ ಸಲ್ಲಿಸಿ ತೀರ್ಥ, ಪ್ರಸಾದ ನೀಡಿದರು.
ಈ ವೇಳೆ ಮಾತನಾಡಿದ ವಿನಯ್ ಕುಮಾರ್ ಅವರು, ನನ್ನ ಪತ್ನಿ ಹರಿಹರದವರು. ಹಾಗಾಗಿ ನಾನು ಹರಿಹರದ ಅಳಿಯ. 66 ಗ್ರಾಮಗಳ ಆರಾಧ್ಯ ದೇವತೆ ಊರಮ್ಮ ದರ್ಶನಕ್ಕೆ ಆಗಮಿಸಿದ್ದು ಖುಷಿ ನೀಡಿದೆ. ಇಷ್ಟೊಂದು ಅದ್ಧೂರಿ, ವಿಜೃಂಭಣೆಯಿಂದ ಉತ್ಸವ ನೆರವೇರುತ್ತಿದೆ. ಲಕ್ಷಾಂತರ ಭಕ್ತರು ಈ ಉತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ. ದೇವಿಯು ಎಲ್ಲರಿಗೂ ಒಳಿತು ಮಾಡಲಿ. ಮಳೆ, ಬೆಳೆ ಚೆನ್ನಾಗಿ ಆಗಿ ರೈತ ಸಮುದಾಯವೂ ಸೇರಿದಂತೆ ಎಲ್ಲರೂ ನೆಮ್ಮದಿಯಂತೆ ಬಾಳುವಂತೆ ಅನುಗ್ರಹಿಸಲಿ ಎಂದು ಪ್ರಾರ್ಥನೆ ಸಲ್ಲಿಸಿರುವುದಾಗಿ ತಿಳಿಸಿದರು.
ಮಂಗಳವಾರದಿಂದ ಮೂರು ದಿನಗಳ ಕಾಲ ಈ ಉತ್ಸವ ನಡೆಯಲಿದೆ. ಮೂರು ವರ್ಷಕ್ಕೊಮ್ಮೆ ನಡೆಯುವ ಊರಮ್ಮ ಜಾತ್ರೆಯನ್ನು ನೋಡುವುದೇ ಒಂದು ಸೌಭಾಗ್ಯ. ದೇವಿ ದರ್ಶನ ಪಡೆದಿದ್ದು ಖುಷಿ ಕೊಟ್ಟಿದೆ ಎಂದು ವಿನಯ್ ಕುಮಾರ್
ಅವರು ಹೇಳಿದರು.