SUDDIKSHANA KANNADA NEWS/ DAVANAGERE/ DATE:24-10-2024
ಬೆಂಗಳೂರು: ರಾಜ್ಯದಲ್ಲಿ ಹಿಂಗಾರು ಮಳೆಗೆ ಜನರು ಸುಸ್ತೋ ಸುಸ್ತು. ಮಾತ್ರವಲ್ಲ, ಈಗಾಗಲೇ ಮಳೆ ರುದ್ರನರ್ತನಕ್ಕೆ ಜನರು ಮಾತ್ರವಲ್ಲ, ರೈತಾಪಿ ವರ್ಗ ಬೆಚ್ಚಿಬಿದ್ದಿದೆ. ಮಳೆ ನೀರಿನ ರಭಸಕ್ಕೆ ರೈತರ ಬದುಕು ಕೊಚ್ಚಿ ಹೋಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನ ಜನರಂತೂ ಸಾಕು ಸಾಕಾಗಿ ಹೋಗಿದ್ದಾರೆ. ಕೆಲವೆಡೆ ಇನ್ನೂ ಮಳೆ ನೆನೆದರೆ ರಾತ್ರಿ ನಿದ್ರೆ ಬಾರದಂತಾಗಿದೆ. ಹಲವೆಡೆ ರಸ್ತೆಗಳಲ್ಲಿ ನೀರು ತುಂಬಿ ತುಳುಕುತ್ತಿದೆ. ಮನೆಗಳಿಗೆ ನೀರು ನುಗ್ಗಿ ಸೃಷ್ಟಿಸಿರುವ ಅವಾಂತರ ಒಂದೆರಡಲ್ಲ. ಮಳೆ ಸಾಕಪ್ಪಾ ಸಾಕು ಎನ್ನುತ್ತಿದ್ದಾರೆ. ಕಳೆದ ವರ್ಷ ಹುಯ್ಯೋ ಹುಯ್ಯೋ ಮಳೆರಾಯ ಎಂದ ಬೆಂಗಳೂರಿನ ಮಂದಿ ಈಗ ನಿಲ್ಲು ನಿಲ್ಲು ಮಳೆರಾಯ ಎಂದು ಪ್ರಾರ್ಥನೆ ಮಾಡತೊಡಗಿದ್ದಾರೆ.
ಚಂಡಮಾರುತ ಎಫೆಕ್ಟ್: ರಾಜ್ಯದ 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಚಂಡಮಾರುತಗಳು ರಾಜ್ಯದ ಒಳನಾಡಿನಲ್ಲಿ ವಾಯುಭಾರ ಕುಸಿತಕ್ಕೆ ಕಾರಣವಾಗಿ ನಿರೀಕ್ಷೆಗೂ ಮೀರಿದ ಧಾರಾಕಾರ ವರ್ಷಧಾರೆ ಆಗಿದೆ. ಶುಕ್ರವಾರದಂದು 24 ಗಂಟೆಗಳಿಗೆ ಅನ್ವಯವಾಗುವಂತೆ ದಕ್ಷಿಣ ಒಳನಾಡಿನ ರಾಜ್ಯದ 12 ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.
ಶಿವಮೊಗ್ಗ, ಮೈಸೂರು, ಕೊಡಗು, ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ, ಮಂಡ್ಯ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ವರುಣನ ಆರ್ಭಟ ಇರಲಿದೆ ಎಂದು ಹವಾಮಾನ ಇಲಾಖೆಯು ಎಚ್ಚರಿಕೆ ನೀಡಿದೆ.
ತಮಿಳುನಾಡಿನಲ್ಲಿ ಮಾತ್ರ ವಾಯುಭಾರ ಕುಸಿತ ಮುಂದುವರೆದಿದ್ದು, 5.8 ಕಿ.ಮೀ ಎತ್ತರದಲ್ಲಿದೆ. ಹೀಗಾಗಿ, ಇಂದಿನಿಂದ ಕೊಂಚ ಅಬ್ಬರ ತಗ್ಗಿದಂತೆ ಕಂಡುಬಂದರೂ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.