SUDDIKSHANA KANNADA NEWS/ DAVANAGERE/ DATE:23-03-2025
ದಾವಣಗೆರೆ: ಕಾವೇರಿ ಮಾತಾ ಪ್ಲಂಬರ್ ಕಾರ್ಮಿಕರ ಸಂಘದ 13ನೇ ವಾರ್ಷಿಕೋತ್ಸವದ ಜತೆ ಫ್ಲಂಬರ್ ದಿನವನ್ನು ಆಚರಿಸಲಾಗುತ್ತಿದ್ದು, ಸಾರ್ವಜನಿಕ ಆರೋಗ್ಯವನ್ನು ರಕ್ಷಿಸುವಲ್ಲಿ, ನೀರಿನ ಪರಿಹಾರಗಳನ್ನು ಮುನ್ನಡೆಗೆ ಫ್ಲಂಬರ್ಗಳ ಪಾತ್ರ ಅತಿಮುಖ್ಯ ಎಂದು ರೇಣುಕಾ ಸಾಂಸ್ಕೃತಿಕ ಸಂಘದ ಅಧ್ಯಕ್ಷ ದೇವರಮನೆ ಶಿವರಾಜ್ ಹೇಳಿದರು.
ದಾವಣಗೆರೆ ನಗರದ ಕಾವೇರಿ ಮಾತಾ ಪ್ಲಂಬರ್ ಕಾರ್ಮಿಕರ ಸಂಘದಿಂದ ವಿಶ್ವ ಪ್ಲಂಬರ್ ದಿನಾಚರಣೆ ಹಾಗೂ ಕಾವೇರಿ ಮಾತಾ ಪ್ಲಂಬರ್ ಕಾರ್ಮಿಕರ ಸಂಘದ 13ನೇ ವರ್ಷದ ವಾರ್ಷಿಕೋತ್ಸವ ಮತ್ತು ವಿಶ್ವಜಲ ದಿನಾಚರಣೆ ಅಂಗವಾಗಿ 60 ವರ್ಷ ಪೂರೈಸಿದ ಹಿರಿಯ ಫ್ಲಂಬರ್ ಮೇಸ್ತ್ರಿಗಳಿಗೆ ಗೌರವ ಪುರಸ್ಕಾರ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭಕ್ಕೂ ಮುನ್ನ ಭಾನುವಾರ ಬೆಳಿಗ್ಗೆ ನಗರದ ಜಯದೇವ ವೃತ್ತದಲ್ಲಿ ಆಯೋಜಿಸಲಾಗಿದ್ದ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.
ಭೂಮಿಯ ಮೇಲೆ ಬದುಕುವ ಮಾನವ ಸೇರಿದಂತೆ ಕೋಟಿಗಟ್ಟಲೇ ಜೀವರಾಶಿ, ಸಸ್ಯ ಸಂಕುಲ, ಪ್ರಾಣಿ ಪಕ್ಷಿಗಳಿಗೂ ನೀರು ಅಗತ್ಯವಾದ ವಸ್ತು. ಆದರೆ ನಾವುಗಳು ನೀರಿನ ಮಹತ್ವ ಅರಿಯದೇ ನೀರನ್ನು ಪೋಲು ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ ಇದರ ದುಷ್ಪರಿಣಾಮ ನಾವು ಎದುರಿಸಬೇಕಾಗಿ ಬರುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಾವೇರಿ ಮಾತಾ ಫ್ಲಂಬರ್ ಕಾರ್ಮಿಕರ ಸಂಘದ ಪ್ರದಾನ ಕಾರ್ಯದರ್ಶಿ ಶಿವಕುಮಾರ್ ಡಿ.ಶೆಟ್ಟರ್ ಮಾತನಾಡಿ, ನೀರಿಲ್ಲದೇ ಮಾನವ ಬದುಕಲಾರ, ಅಷ್ಟೇ ಅಲ್ಲ. ಸಸ್ಯ ರಾಶಿ, ಪ್ರಾಣಿ ಸಂಕುಲಗಳು ಸಹ ನೀರಿಲ್ಲದೇ ಬದುಕುವುದಿಲ್ಲ. ನೀರನ್ನು ಮುಂದಿನ ಪೀಳಿಗೆಗೆ ಉಳಿಸದಿದ್ದರೆ ನಮ್ಮಂತ ಅಧರ್ಮಿಯರು ಯಾರು ಇಲ್ಲ ಅನಿಸುತ್ತದೆ. ಆದ್ದರಿಂದ ನಾವು ನೀವೆಲ್ಲರೂ ಸೇರಿ ನೀರು ಉಳಿಸಿ ಗಿಡಮರಗಳನ್ನು ಬೆಳೆಸೋಣ ಎಂಬ ಪ್ರತಿಜ್ಞೆ
ಮಾಡೋಣ ಎಂದು ಕರೆ ನೀಡಿದರು.
ನೀರಿನ ಸಂರಕ್ಷಣೆ ದೇಶದ ಭದ್ರತೆಗೆ ಸಮ. ನೀರು ಅಮೃತಕ್ಕೆ ಸಮಾನ. ಆದ್ದರಿಂದ ನೀರಿನ ರಕ್ಷಣೆ ಉಳಿವು ನಮ್ಮೆಲ್ಲರ ಕರ್ತವ್ಯ ಎಲ್ಲಾ ಮನೆ ಮಾಲೀಕರು ಇಂಗು ಗುಂಡಿಗಳನ್ನು ಮಾಡಿಸಿ ಅಂತರ್ಜಲ ಹೆಚ್ಚಿಸುವುದಕ್ಕೆ ಸಹಕರಿಸಬೇಕೆಂದರು.
ಸಂಘದ ಅಧ್ಯಕ್ಷ ಎಸ್.ಬಿ.ರುದ್ರೇಶ್ ಮಾತನಾಡಿ, ನೀರು ನಮ್ಮೆಲ್ಲರ ಜೀವನಾಡಿ ನೀರು ಉಳಿಸದಿದ್ದರೆ ಜನಜಾನುವಾರುಗಳ ಜೀವ ಉಳಿಸಿದಂತೆ. ನೀರನ್ನು ವ್ಯರ್ಥ ಮಾಡದಂತೆ ಬಳಕೆ ಮಾಡಬೇಕು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ತಿಳಿಸಿದರು.
ಈ ವೇಳೆ ಎಸ್.ಎಂ.ಸಿದ್ದಲಿಂಗಪ್ಪ, ಕೆ.ಜಿ.ಡಿ.ಬಸವರಾಜ್, ಎಸ್.ಹೊಳೆಬಸಪ್ಪ, ಎಸ್.ಶರಣಪ್ಪ, ಅಣ್ಣಪ್ಪ, ಹೆಚ್.ರಂಗಸ್ವಾಮಿ, ಎಸ್.ಚಂದ್ರಶೇಖರ್, ವೀರೇಶ್ ಮುತ್ತಿಗೆ, ಹೆಚ್.ಚಂದ್ರಶೇಖರ್ ಮೀಸೆ, ಬಸವರಾಜ್ ಇತರರು ಇದ್ದರು.