SUDDIKSHANA KANNADA NEWS/ DAVANAGERE/ DATE-07-05-2025
ದಾವಣಗೆರೆ: ನಗರದ ಹದಡಿ ರಸ್ತೆಯ ಕ್ಲಬ್ ವೊಂದರಲ್ಲಿ ರೌಡಿಶೀಟರ್ ಕಣುಮಾ ಅಲಿಯಾಸ್ ಸಂತೋಷ್ ಕುಮಾರ್ ಹತ್ಯೆ ಪ್ರಕರಣ ಸಂಬಂಧ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದ ಆರೋಪಿಗಳನ್ನು ದಾವಣಗೆರೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾದ ಆರೋಪಿ ಚಾವಳಿ ಸಂತು ಮೇಲೆ ಫೈರಿಂಗ್ ನಡೆಸಿದ್ದು, ಎಸ್ಪಿ ಉಮಾ ಪ್ರಶಾಂತ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಣುಮಾ @ ಸಂತೋಷ್ ಕುಮಾರ್ ಹತ್ಯೆ ಪ್ರಕರಣ ಸಂಬಂಧ ಆರೋಪಿಯೊಬ್ಬನನ್ನು ಪಂಚನಾಮೆ ಮಾಡಲು ಕರೆ ತಂದಿದ್ದೆವು. ಪಂಚನಾಮೆ ಮುಗಿದಾಗ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಆಗ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಎಚ್ಚರಿಕೆ ನೀಡಿದರೂ ಕೇಳಿಲ್ಲ. ದಾವಣಗೆರೆ ನಗರ ಡಿವೈಎಸ್ಪಿ ಅವರು ಕಾಲಿಗೆ ಗುಂಡು ಹೊಡೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಆರೋಪಿ ಚಾವಳಿ ಸಂತು ಆವರಗೆರೆ ಬಳಿ ಫೋನ್ ಬಿಸಾಡಿದ್ದೇನೆ ಎಂದು ಹೇಳಿದ್ದ. ಹಾಗಾಗಿ, ಇಲ್ಲಿಗೆ ಕರೆ ತರಲಾಗಿತ್ತು. ನಮಗೆ ಹೆಚ್ಚಿನ ಮಾಹಿತಿ ಪಡೆಯಲು, ಹತ್ಯೆ ಹಿಂದೆ ಯಾರೆಲ್ಲಾ ಇದ್ದಾರೆ ಎಂಬ ಕುರಿತಂತೆ ತಿಳಿಯಲು ಆ ಫೋನ್ ತುಂಬಾನೇ
ಮುಖ್ಯವಾಗಿತ್ತು. ಹಾಗಾಗಿ, ಪಂಚನಾಮೆ ಮಾಡಲು ಕರೆದುಕೊಂಡು ಹೋದಾಗ ಈ ಘಟನೆ ನಡೆದಿದೆ. ಈ ಕುರಿತಂತೆ ಸಮಗ್ರ ಮಾಹಿತಿ ಕಲೆಹಾಕುತ್ತಿದ್ದೇವೆ. ಎಲ್ಲವನ್ನೂ ಈಗಲೇ ಹೇಳಲು ಆಗದು. ತನಿಖೆ ನಡೆಸುತ್ತಿದ್ದೇವೆ. ಇನ್ನೆರಡು ದಿನಗಳಲ್ಲಿ
ಸಂಪೂರ್ಣ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದರು.
ಪ್ರಾಥಮಿಕವಾಗಿ ತನಿಖೆ ನಡೆಸುತ್ತಿದ್ದೇವೆ. ಈಗಲೇ ಎಲ್ಲವನ್ನೂ ಹೇಳಲಾಗದು. ಶೀಘ್ರದಲ್ಲಿಯೇ ಎಲ್ಲಾ ಮಾಹಿತಿ ನೀಡಲಾಗುವುದು. ಆರೋಪಿಗಳ ವಿಚಾರಣೆ ಮುಂದುವರಿದಿದೆ. ಮಾಹಿತಿ ಪಡೆದುಕೊಂಡು ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬ ಕುರಿತಂತೆ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುತ್ತೇವೆ. ಯಾರೂ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಭೀಕರ ಹತ್ಯೆ ಸಂಬಂಧ ನಾಲ್ಕು ತಂಡಗಳನ್ನು ರಚಿಸಲಾಗಿದೆ. ನಗರ ಡಿವೈಎಸ್ಪಿ ಅವರೇ ಖುದ್ದಾಗಿ ತನಿಖೆ ಮಾಡುತ್ತಿದ್ದಾರೆ. ನಾನು ಕೂಡ ಹತ್ಯೆಯಾದ ಕೂಡಲೇ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದೇನೆ. ಈ ಪ್ರಕರಣ ಸಂಬಂಧ ತುಂಬಾ ಆಳವಾಗಿ ತನಿಖೆ ನಡೆಸಿ, ಯಾರೆಲ್ಲಾ ಆರೋಪಿಗಳಿದ್ದಾರೆ ಅವರನ್ನೆಲ್ಲಾ ಬಂಧಿಸುತ್ತೇವೆ ಎಂದು ತಿಳಿಸಿದರು.
ಯಾವುದೇ ರೀತಿಯ ತೊಂದರೆ ಆಗಿದ್ದರೆ ನನ್ನ ಬಳಿ ಇಲ್ಲವೇ ಪೊಲೀಸ್ ಠಾಣೆಗೆ ಬಂದು ದೂರು ನೀಡಬಹುದು. ಎಲ್ಲರ ರಕ್ಷಣೆಗೆ ಇದ್ದೇವೆ. ಕಾನೂನು ಕೈಗೆತ್ತಿಕೊಂಡರೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ. ಅದರಲ್ಲಿ ಯಾವುದೇ ಅನುಮಾನ ಬೇಡ ಎಂದು ಎಸ್ಪಿ ಉಮಾ ಪ್ರಶಾಂತ್ ಅವರು ಖಡಕ್ ವಾರ್ನಿಂಗ್ ನೀಡಿದ್ದಾರೆ.