SUDDIKSHANA KANNADA NEWS/ DAVANAGERE/ DATE:04-03-2025
ದಾವಣಗೆರೆ: ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಕಟ್ಟಡ ನಿರ್ಮಾಣ ಹಾಗೂ ಮೂಲಸೌಕರ್ಯ ನವೀಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಸಾಮಾನ್ಯ ಯೋಜನೆ ಅಡಿಯಲ್ಲಿ ಬಿಡುಗಡೆಯಾದ ಒಟ್ಟು 1.5 ಕೋಟಿ ರೂ ಮೊತ್ತದ ಕಾಮಗಾರಿಗೆ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಭೂಮಿಪೂಜೆ ನೆರವೇರಿಸಿದರು.
ಕಾರ್ಯಕ್ರಮಕ್ಕೂ ಮುನ್ನ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದ ಸಂಸದರು ವಿದ್ಯಾರ್ಥಿನಿಯರ ಪರೀಕ್ಷಾ ತಯಾರಿ ಹಾಗೂ ಅವರ ಅಭಿರುಚಿಗಳು ಹಾಗೂ ಕಾರ್ಯಕ್ರಮದ ಮಾಹಿತಿ ಹೀಗೆ ವಿವಿಧ ಪ್ರಶ್ನೆಗಳನ್ನು ಹಾಕಿದಾಗ ವಿದ್ಯಾರ್ಥಿಗಳು ಸಮರ್ಪಕ ಉತ್ತರ ನೀಡಿದರು.
ತಮ್ಮ ಆಸಕ್ತಿ,ಅಭಿರುಚಿಯ ಬಗ್ಗೆ ಅನಿಸಿಕೆ ಹಂಚಿಕೊಂಡರು. ನಂತರ ಮಾತನಾಡಿದ ಸಂಸದರು ಎಲ್ಲರೂ ಸರ್ಕಾರಿ ಕಾಲೇಜಿಗೆ ಉತ್ತಮ ಫಲಿತಾಂಶ ತರಬೇಕೆಂದು ಸಲಹೆ ನೀಡಿದರು.ಜೊತೆಗೆ ಐಎಎಸ್ ಹಾಗೂ ಕೆಎಎಸ್ ಪರೀಕ್ಷೆ ತೆಗೆದುಕೊಳ್ಳಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಎಸ್ ಎಸ್ ಕೇರ್ ಟ್ರಸ್ಟ್ ಹಾಗೂ ಜಿಲ್ಲಾಡಳಿತ ಸಹಯೋಗದೊಂದಿಗೆ ಮುಂದಿನ ದಿನಗಳಲ್ಲಿ ತರಬೇತಿ ನೀಡುವ ಅವಕಾಶ ಕಲ್ಪಿಸಲಾಗಿದೆ. ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಆಸಕ್ತರು ಇಂತಹ ಅವಕಾಶ ಪಡೆದುಕೊಂಡು ದಾವಣಗೆರೆ ಜಿಲ್ಲೆಗೆ ಕೀರ್ತಿ ತರಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಮಂಜುನಾಥ್, ಕಾವ್ಯಶ್ರೀ,ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ರಂಗನಾಥ್ ಸ್ವಾಮಿ,ಕೆ.ಎಸ್ ಈಶ್ವರಪ್ಪ,ಕೆ.ಶಿವಪ್ಪ,ಲೋಹಿತ್,ಎಂ.ಎಸ್ ಮಲ್ಲಿಕಾರ್ಜುನ್,ಆರ್.ಜಿ ರುದ್ರೇಶ್,ಪ್ರಭುದೇವ್ ,ಅನಿಲ್ ಗೌಡ ಮತ್ತಿತರರಿದ್ದರು.