SUDDIKSHANA KANNADA NEWS/ DAVANAGERE/ DATE:09-12-2024
ದಾವಣಗೆರೆ: ಏಕಮುಖ ರಸ್ತೆ, ಸಿಗ್ನಲ್ ಜಂಪ್, ಪಾರ್ಕಿಂಗ್ ಇಲ್ಲದ ಜಾಗದಲ್ಲಿ ಪಾರ್ಕಿಂಗ್ ಮಾಡಿದ ವಾಹನ ಸವಾರರಿಗೆ ದಂಡದ ಜೊತೆಗೆ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಎಚ್ಚರಿಕೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆ, ಘೋಷಿತ ವ್ಯಾಪಾರ ಪ್ರದೇಶ ಹಾಗೂ ನಿರ್ಭಂದಿತ ವ್ಯಾಪಾರ ಪ್ರದೇಶ, ಮತ್ತು ವಾಹನ ಸಂಚಾರ ನಿಯಮಗಳ ಪಾಲನೆ ಕುರಿತು ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತಾನಾಡಿದರು.
ಸರ್ಕಾರ ಡೀಸೆಲ್ ಮಾದರಿ ಹಾಗೂ ಇತರೆ ಮಾದರಿಯ ವಾಹನಗಳ ಎಫ್.ಸಿ ಮುಗಿದರೂ ವಾಹನಗಳು ವಿಲೇವಾರಿಗೆ ಬರುತ್ತಿಲ್ಲ ಏಕೆ? ಪಾರ್ಕಿಂಗ್ನಲ್ಲಿ ನಿಲ್ಲದೇ ಇರುವ ಕನಿಷ್ಠ 100 ವಾಹನಗಳನ್ನಾದರೂ ತಡೆದು ದಂಡ ವಿಧಿಸಿ, ಗಾಡಿಗಳನ್ನು ಜಾಪ್ತಿ ಮಾಡಿ ಎಂದು ಆರ್ ಟಿ ಓ ಅಧಿಕಾರಿಗಳಿಗೆ ಸೂಚಿಸಿದರು.
ಟ್ರಾಕ್ಟರ್ ಸಿಟಿ ಒಳಗಡೆ ಬರುತ್ತಿವೆ, ಅಂತಹ ಟ್ರ್ಯಾಕ್ಟರ್ ಮೇಲೆ ಕೂಡಲೇ ಕೇಸ್ ಮಾಡಿ, ಲಾರಿಗಳು ನಗರದ ಒಳಗಡೆ ಪ್ರವೇಶಸಲು ಸಮಯ ನಿಗಧಿಮಾಡಬೇಕು. ಸಿ.ಜಿ ಆಸ್ಪತ್ರೆಯ ಸುತ್ತಮುತ್ತ, ಹೈಸ್ಕೂಲ್ ಮೈದಾನದ ಹತ್ತಿರ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ದನಕರುಗಳು ರಸ್ತೆಯಲ್ಲಿ ಓಡಾಡುತ್ತಿವೆ. ಇದರಿಂದ ವಾಹನ ಸವಾರರಿಗೆ ತುಂಬಾ ತೊಂದರೆಯಾಗಿ ಅಪಘಾತಗಳು ಸಹ ಹೆಚ್ಚುತ್ತಿವೆ. ನಗರದಲ್ಲಿ ವಾಹನಗಳ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗಿದ್ದು, ಹಾಗಾಗಿ ರಸ್ತೆ ಸಾಲದೆ ಪುಟ್ ಬಾತ್ ಮೇಲೂ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ ಎಂದರು.
ಕಟ್ಟಡ ನಿರ್ಮಾಣ ಸಾಮಗ್ರಿಗಳಾದ ಎಂ.ಸ್ಯಾಂಡ್, ಮರಳು, ಸಿಮೆಂಟ್, ಇಟ್ಟಿಗೆಗಳನ್ನು ಸಾಗಾಣಿಕೆ ಮಾಡುವ ಭಾರಿ ವಾಹನ, ಲಘು ವಾಹನ, ಟ್ರ್ಯಾಂಕ್ಟರ್ಗಳು ಮೇಲು ಹೊದಿಕೆಯನ್ನು ಹಾಕಿಕೊಳ್ಳದೆ ವಾಹನಗಳನ್ನು ಚಾಲನೆ ಮಾಡುವ ಕಾರಣ ಈ ವಾಹನಗಳ ಹಿಂಭಾಗ ಚಾಲನೆ ಮಾಡುವ ದ್ವಿಚಕ್ರ ವಾಹನ ಚಾಲಕರ ಕಣ್ಣಿಗೆ ದೂಳು, ಮಣ್ಣಿನ ಕಣಗಳು, ಕಲ್ಲಿನ ಕಣಗಳು ಬಿದ್ದು ಅಪಘಾತಗಳು ಸಂಭವಿಸುತ್ತಿರುವ ಕಾರಣ ಸಂಚಾರ ಪೊಲೀಸ್ ಅಧಿಕಾರಿಗಳು ಇಂತಹ ವಾಹನಗಳ ಮೇಲೆ ದಂಡ ವಿಧಿಸುವುದು ಹಾಗೂ ಸಂಬಂಧಪಟ್ಟ ಪ್ರಾದೇಶಿಕ ಸಾರಿಗೆ ಆಧಿಕಾರಿಗಳು ನಿರ್ಧಾಕ್ಷೀಣ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.
ಖಾಸಗಿ ಬಸ್, ಭಾರಿ ವಾಹನಗಳು, ಕೆಲವು ಶಾಲಾ-ಕಾಲೇಜು ಬಸ್ಸುಗಳು ಆಟೋರಿಕ್ಷಾ ವಾಹನಗಳು ಕರ್ಕಶ ಹಾರನ್ಗಳನ್ನು ಅಳವಡಿಸಿಕೊಂಡು ಚಾಲನೆ ಮಾಡುವುದರಿಂದ ನಗರದ ನಾಗರಿಕರಿಗೆ ಹಾಗೂ ಆಸ್ಪತ್ರೆಗಳ ಪ್ರದೇಶದಲ್ಲಿ ಶಬ್ದ ಮಾಲಿನ್ಯವು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಅಂತಹ ವಾಹನ ಚಾಲಕರ ಮೇಲೆ ದಂಡ ವಿಧಿಸಬೇಕು ಎಂದರು.
ಬಾಡಾ ಕ್ರಾಸ್, ಮಾಗನಹಳ್ಳಿ ಕ್ರಾಸ್, ಮಹಾನಗರಪಾಲಿಕೆ, ತರಳಬಾಳು ಶಾಲೆ, ಎಸ್ ಎಸ್.ಆಸ್ಪತ್ರೆಯ ಹತ್ತಿರ ಬೀದಿ ದೀಪದ ಬೆಳಕು ಕೂಡ ಇರುವುದಿಲ್ಲ. ಹಾಗೂ ನಾಯಿಗಳು ನಗರದಲ್ಲಿ ತುಂಬಾ ಜನರಿಗೆ ಕಚ್ಚುತ್ತಿವೆ, ಅವುಗಳನ್ನು ಸೂಕ್ತ ಜಾಗದಲ್ಲಿ ಇರಿಸಬೇಕು ಎಂದು ಪಾಲಿಕೆಯ ಸ್ಥಾಯಿ ಸಮಿತಿಯ ಸದಸ್ಯರು ತಿಳಿಸಿದರು.
ಸಭೆಯಲ್ಲಿ ಎಸ್ಪಿ ಉಮಾ ಪ್ರಶಾಂತ್, ಪಾಲಿಕೆಯ ಮಹಾಪೌರರಾದ ಚಮನ್ ಸಾಬ್.ಕೆ, ಉಪಮಹಾಪೌರರಾದ ಸೋಗಿ ಶಾಂತಕುಮಾರ್, ಹೆಚ್ಚುವರಿ ಪೊಲೀಸ್ ಅಧಿಕಾರಿ ವಿಜಯಕುಮಾರ್ ಎಂ. ಸಂತೋಷ್, ಮಂಜುನಾಥ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕಿ ನಿರ್ದೇಶಕ ವೀರೇಶ್, ಆರ್.ಟಿ.ಓ ಅಧಿಕಾರಿ ಪ್ರಮುತೇಶ್, ಪಾಲಿಕೆ ವಿರೋಧ ಪಕ್ಷದ ನಾಯಕರಾದ ಪ್ರಸನ್ನಕುಮಾರ್, ಸ್ಥಾಯಿ ಸಮಿತಿ ಸದಸ್ಯರು ಹಾಗೂ ಉಪಸ್ಥಿತರಿದ್ದರು.