SUDDIKSHANA KANNADA NEWS/ DAVANAGERE/ DATE-06-06-2025
ದಾವಣಗೆರೆ: ದಾವಣಗೆರೆ ಮಹಾನಗರಪಾಲಿಕೆ ವಲಯ ಕಚೇರಿ-2ರಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರೂಪಾ.ಹೆಚ್ ಇವರನ್ನು ನಗದು ವಹಿಯಲ್ಲಿ ತಪ್ಪು ನಮೂದು, ತಪಾಸಣೆ ನಡೆಸಿದ ವೇಳೆ ಅಸಹಕಾರ ಮತ್ತು ಅನಧಿಕೃತ ವ್ಯಕ್ತಿಯನ್ನು ಸಹಕಾರಕ್ಕಾಗಿ ನೇಮಿಸಿಕೊಂಡಿರುವ ಆರೋಪದ ಮೇಲೆ ಕರ್ತವ್ಯ ಲೋಪವೆಂದು ಪರಿಗಣಿಸಿ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಅಮಾನತು ಮಾಡಿ ಆದೇಶಿಸಿದ್ದಾರೆ.
ರೂಪಾ.ಹೆಚ್. ದ್ವಿತೀಯ ದರ್ಜೆ ಸಹಾಯಕರು ರವರು ವಲಯ ಕಛೇರಿ-2. ಮಹಾನಗರಪಾಲಿಕೆ ದಾವಣಗೆರೆ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಪಾಲಿಕೆಯಲ್ಲಿ “ಎ” ಖಾತಾ ಮತ್ತು “ಬಿ ಖಾತಾ ಆಂದೋಲನದ ಪ್ರಗತಿ ಕುರಿತು ಜಿಲ್ಲಾಧಿಕಾರಿ ಅವರು
ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಮಯದಲ್ಲಿ ವಲಯ ಕಛೇರಿ-2 ರಲ್ಲಿ ನಿರ್ವಹಿಸಲಾಗುತ್ತಿರುವ ನಗದು ವಹಿಯಲ್ಲಿ ನೌಕರಳು ತನ್ನ ಬಳಿ ರೂ.500 ಇರುವುದೆಂದು ಘೋಷಿಸಿಕೊಂಡಿರುತ್ತಾರೆ.
ಆದರೆ ನೌಕರರನ್ನು ತಪಾಸಣೆ ನಡೆಸಿದ ಸಮಯದಲ್ಲಿ ಇವರ ಬಳಿ ರೂ 3600 ಹಣವಿತ್ತು. ಘೋಷಣೆಗಿಂತ ಹೆಚ್ಚಾಗಿರುವ ಹಣದ ಕುರಿತು ವಿವರಣೆ ನೀಡುವಲ್ಲಿ ಹಾಗೂ ತಪಾಸಣೆ ನಡೆಸಲು ಅಸಹಕಾರ ತೋರಿದ್ದರಿಂದ, ನೌಕರಳ ಬಳಿ ಲಭ್ಯವಿರುವ ಹಣವು ಲಂಚದ ಹಣವಾಗಿರಬಹುದೆಂದು ಪರಿಗಣಿಸಿ ಹಾಗೂ ತಾನು ನಿರ್ವಹಿಸುತ್ತಿರುವ ಶಾಖೆಯಲ್ಲಿ ಅನಧಿಕೃತ ವ್ಯಕ್ತಿಯಿಂದ ತನ್ನ ಕರ್ತವ್ಯವನ್ನು ನಡೆಸುತ್ತಿದ್ದು ಕಂಡು ಬಂದಿದ್ದು ಇದು ಸಹ ಕೆ.ಸಿ.ಎಸ್.ಆರ್ ಮತ್ತು ನಡೆತ ನಿಯಮಗಳ ವಿರುದ್ಧವಾದ ಕ್ರಮವಾಗಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.