SUDDIKSHANA KANNADA NEWS/ DAVANAGERE/ DATE:05-01-2025
ದಾವಣಗೆರೆ: ರಾಜ್ಯ ಮಟ್ಟದ ಯುವಜನೋತ್ಸವ ಅಂಗವಾಗಿ ದಾವಣಗೆರೆ ನಗರದ ಬಿ.ಐ.ಇ.ಟಿ ಕಾಲೇಜಿನ ಎಸ್.ಎಸ್.ಮಲ್ಲಿಕಾರ್ಜುನ ಸಾಂಸ್ಕೃತಿಕ ಕಲಾಕೇಂದ್ರದಲ್ಲಿ ಆಯೋಜಿಸಲಾದ ಜಾನಪದ ನೃತ್ಯ ಸ್ಪರ್ಧೆಯಲ್ಲಿ
ರಾಜ್ಯ ವಿವಿಧ ಜಾನಪದ ನೃತ್ಯಗಳ ವೈಭವ ಮೇಳೈಯಿಸಿತು.
29 ಜಿಲ್ಲೆಗಳಿಂದ ಆಗಮಿಸಿದ ತಂಡಗಳು ವಿಭಿನ್ನ ರೀತಿಯ ಡೊಳ್ಳು ಕುಣಿತ, ಕೋಲಾಟ, ಜಾನಪದ ಗೀತೆಗಳಿಗೆ ನೃತ್ಯವನ್ನು ಪ್ರದರ್ಶಿಸಿದರು.
ಜಾನಪದ ನೃತ್ಯ ಸ್ಪರ್ಧೆಯಲ್ಲಿ ಕೋಲಾರ ಜಿಲ್ಲಾ ತಂಡ, ಕೋಳಿ ಜೂಜಾಟ ಪಂದ್ಯದ ಕುರಿತು ಜಾನಪದ ಗೀತೆಯನ್ನು ನೃತ್ಯದೊಂದಿಗೆ ಪ್ರದರ್ಶಿಸಿದರು. ಕೋಲಾರ ಜಿಲ್ಲೆ ಸೇರಿದಂತೆ ಆಂದ್ರ ಗಡಿ ಭಾಗದಲ್ಲಿ ಪ್ರಚಲಿತ ಇರುವ ಕೋಳಿ ಪಂದ್ಯ ಗ್ರಾಮೀಣ ಭಾಗದಲ್ಲಿನ ಮೋಜಿನ ಆಟವಾಗಿದೆ. ಇದರಲ್ಲಿ ಗ್ರಾಮೀಣ ಪುರುಷರು ಹಣ, ಬಂಗಾರಗಳನ್ನು ಪಣದಲ್ಲಿ ಇಟ್ಟು ಸೋತು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದರು. ಇದರಿಂದ ಬಾದಿತವಾದ ಹೆಣ್ಣು ಮಗಳು ತನ್ನ ಗಂಡನಿಗೆ ಕೋಳಿ ಪಂದ್ಯ ಆಡದಂತೆ, ವಿವಿದ ರೂಪಕಗಳಲ್ಲಿ ಎಚ್ಚರಿಸುತ್ತಾರೆ.
ಪ್ರಸ್ತುತ ಸಮಾಜದಲ್ಲಿ ಆನ್ ಲೈನ್ ಬೆಟ್ಟಿಂಗ್ ಭೂತಕ್ಕೆ ರಾಜ್ಯದಲ್ಲಿ ಹಲವರು ಹಣ ಸೋತು ಆತ್ಮಹತ್ಯೆ ಮಾಡಿಕೊಂಡ ಸುದ್ದಿಗಳು ಮಾಧ್ಯಮದಲ್ಲಿ ವರದಿಯಾಗಿವೆ. ಈ ಹಿನ್ನಲೆಯಲ್ಲಿ ಕೋಳಿ ಪಂದ್ಯ ಅಥವಾ ಆನ್ ಲೈನ್ ಬೆಟ್ಟಿಂಗ್ ಇರಲಿ ಇಂದಿಗೂ ಮಹಿಳೆಯರು ಜೂಜಟದ ಬವಣೆ ಎದುರಿಸುತ್ತಿರುವುದನ್ನು ಪ್ರಸ್ತುತ ಪಡಿಸಿತು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ತಂಡ ಡೊಳ್ಳು ಕುಣಿತ, ಹಾವೇರಿ ಜಿಲ್ಲೆ ಕೋಲಾಟ ಸೇರಿದಂತೆ ವಿವಿಧ ಜಿಲ್ಲೆಯ ತಂಡಗಳ ನೃತ್ಯ ಜನಮನ ಸೂರೆಗೊಂಡಿವು. ನಾಡಿನ ಜಾನಪದ ಕಲಾ ಸಂಸ್ಕೃತಿ ಹಾಗೂ ವೈವಿದ್ಯತೆಯನ್ನು ಯುವಜನರು ನೃತ್ಯಗಳ ಮೂಲಕ ಅನಾವರಣಗೊಳಿಸಿದರು. ಜನಪದ ತಜ್ಞರಾದ ಸಾಗರ್ ಗೋಪಾಲ್, ಡಾ.ಶ್ರೀರಾಮಾಂಜನೇಯ ಅಶ್ವರಾಮ್, ಡಾ.ಕೋಸಿ ನಾಗರ್ಜಿ, ಡಾ.ಪ್ರೇಮಾ ತೀರ್ಪುಗಾರಾಗಿ ಕಾರ್ಯನಿರ್ವಹಿಸಿದರು.
ಶಾಸಕರಾದ ಬಸವರಾಜ್ ವಿ.ಶಿವಗಂಗಾ, ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಅವರು ಸ್ಪರ್ಧಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿದರು.