SUDDIKSHANA KANNADA NEWS/ DAVANAGERE/ DATE:09-01-2024
ದಾವಣಗೆರೆ: ಪ್ರಸಕ್ತ ಸಾಲಿನ ಭದ್ರಾ ಜಲಾಶಯದ ಬೇಸಿಗೆ ಹಂಗಾಮಿಗೆ ಬಲದಂಡೆ ಎಡದಂಡೆ ಕಾಲುವೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ.
ಭದ್ರಾ ಬಲದಂಡೆ ನಾಲೆಗಳಿಗೆ ಜನವರಿ 15 ರಿಂದ 53 ದಿನಗಳು ಹಾಗೂ ಎಡದಂಡೆ ನಾಲೆಗೆ ಜನವರಿ 10 ರಿಂದ ಒಟ್ಟು 70 ದಿನಗಳಿಗೆ ನೀರು ಹರಿಸಲಾಗುವುದು ಎಂದು ಭದ್ರಾ ಯೋಜನಾ ನೀರಾವರಿ ಸಲಹಾ
ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಕ.ನೀ.ನಿ.ನಿ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.
ರೈತ ಒಕ್ಕೂಟ ಪ್ರತಿಭಟನೆ:
ಭದ್ರಾ ನೀರನ್ನು ಸಮರ್ಪಕವಾಗಿ ಹರಿಸದ ಐಸಿಸಿ ನಿರ್ಣಯ ಖಂಡಿಸಿ ಜ.10ರಂದು ಜಿಲ್ಲಾ ರೈತ ಒಕ್ಕೂಟವು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.
ಹಳ್ಳಿ ಹಳ್ಳಿಗಳಿಗೆ ತೆರಳಿ ಎ. ಕೆ. ಫೌಂಡೇಶನ್ ಅಧ್ಯಕ್ಷರೂ ಆದ ದಾವಣಗೆರೆ ಲೋಕಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಕೆ. ಬಿ. ಕೊಟ್ರೇಶ್ ಅವರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಜ. 10ರಂದು ಬೆಳಿಗ್ಗೆ 10 ಗಂಟೆಗೆ ದಾವಣಗೆರೆಯ ಪಿ. ಬಿ. ರಸ್ತೆಯ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಜಮಾವಣೆಗೊಳ್ಳಬೇಕು. ರೈತರು, ಭದ್ರಾ ನೀರು ಬಳಕೆ ಮಾಡುವವರು ಈ ಪ್ರತಿಭಟನೆಗೆ ಬನ್ನಿ. ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸೋಣ. ಐಸಿಸಿ ಸಭೆ ನಿರ್ಣಯ ಬದಲಾಯಿಸುವವರೆಗೆ ಹೋರಾಟ ಮಾಡೋಣ ಎಂದು ಕೆ. ಬಿ. ಕೊಟ್ರೇಶ್ ಮನವಿ ಮಾಡಿದ್ದಾರೆ.
ಜಿಲ್ಲೆಯ 28 ಹಳ್ಳಿಗಳಿಗೆ ತೆರಳಿ ಪ್ರತಿಭಟನೆಯಲ್ಲಿ ರೈತರು ಭಾಗವಹಿಸುವಂತೆ ಮನವಿ ಮಾಡಿದರು. ಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶ ಇರುವುದು ದಾವಣಗೆರೆ ಜಿಲ್ಲೆಯಲ್ಲಿ. ಎಲ್ಲಾ ರೈತರು ಸಂಘಟಿತರಾಗಿ, ಒಗ್ಗಟ್ಟಾಗಿ ಹೋರಾಟ ಮಾಡಿದರೆ ಸರ್ಕಾರದ ಗಮನ ಸೆಳೆಯಬಹುದು. ಹಾಗಾಗಿ, ರೈತರು ಈ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಕೋರಿದರು.
ಕುಂದೂರು, ಕೂಲಂಬಿ ಸೇರಿದಂತೆ ಇತರೆ ಹಳ್ಳಿಗಳಿಗೆ ಕೆ. ಬಿ. ಕೊಟ್ರೇಶ್ ತೆರಳಿ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದು, ಉಳಿದ ತಂಡಗಳು ಬೇರೆ ಗ್ರಾಮಗಳಿಗೆ ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿವೆ. ದಾವಣಗೆರೆ ರೈತರ ಹಿತ ಕಾಪಾಡುವಂತ ನಿರ್ಣಯ ತೆಗೆದುಕೊಳ್ಳಬೇಕು ಎಂದು ರೈತ ಮುಖಂಡರಾದ ಕೊಳೇನಹಳ್ಳಿ ಸತೀಶ್, ಶಾಮನೂರು ಲಿಂಗರಾಜ್, ನಾಗೇಶ್ವರ ರಾವ್ ಮತ್ತಿತರರು ಕೋರಿದ್ದಾರೆ.