SUDDIKSHANA KANNADA NEWS/ DAVANAGERE/ DATE:13-01-2025
ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ಕಷ್ಟಪಟ್ಟು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತಂದಿದ್ದಾರೆ. ಅವರೇ ಮುಖ್ಯಮಂತ್ರಿಯಾಗಬೇಕಿತ್ತು. ಬದಲಾದ ಬೆಳವಣಿಗೆಯಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದರು. ಸದ್ಯಕ್ಕೆ ಸಿಎಂ ಖುರ್ಚಿ ಖಾಲಿ ಇಲ್ಲ. ಖಾಲಿಯಾದ ಬಳಿಕ ಡಿ. ಕೆ. ಶಿವಕುಮಾರ್ ಅವರು ಹಕ್ಕು ಮಂಡನೆ ಮಾಡುತ್ತಾರೆ ಎಂದು ಚನ್ನಗಿರಿ ಕಾಂಗ್ರೆಸ್ ಶಾಸಕ ಶಿವಗಂಗಾ ವಿ. ಬಸವರಾಜ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರು ಬಹುಮತ ಬಂದಾಗ ಸಿಎಂ ಆಗುವುದು ಕಾಂಗ್ರೆಸ್ ಸಂಪ್ರದಾಯ. ಕಷ್ಟಪಟ್ಟಿದ್ದು, ಮುಂದಿನ ದಿನಗಳಲ್ಲಿ ಒಳ್ಳೆಯ ದಿನಗಳು ಡಿ. ಕೆ. ಶಿವಕುಮಾರ್ ಅವರಿಗೆ ಬರುತ್ತದೆ.
ಇದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರು.
ನನ್ನ ಕ್ಷೇತ್ರದಲ್ಲಿನ ಜನರು ನನ್ನನ್ನು ಭೇಟಿಗೆ ಬಂದಾಗ ಕೆಲಸ ಮಾಡಿಕೊಡಿ ಎಂದು ಕೈ ಮುಗಿಯುತ್ತಾರೆ, ಕಾಲಿಗೆ ಬೀಳಲು ಬರುತ್ತಾರೆ. ಅವರಿಗೆ ನಾನು ಹೇಳುತ್ತೇನೆ, ನೀವು ಆರ್ಡರ್ ಮಾಡಬೇಕೆಂದು. ಯಾಕೆಂದರೆ ಜನರು ಗೆಲ್ಲಿಸಿದ್ದಾರೆ. ಅದೇ
ರೀತಿಯಲ್ಲಿ ಶಾಸಕರನ್ನು ಗೆಲ್ಲಿಸಿರುವ ಡಿ. ಕೆ. ಶಿವಕುಮಾರ್ ಅವರು ನಮಗೆ ಆರ್ಡರ್ ಮಾಡಬೇಕು. 130 ಶಾಸಕರು ಕಾಂಗ್ರೆಸ್ ಪಕ್ಷದ ಸರ್ಕಾರದ ಪರವಾಗಿಯೇ ಇದ್ದೇವೆ ಎಂದು ತಿಳಿಸಿದರು.
ಸಿಎಂ ಸ್ಥಾನದ ಬಗ್ಗೆ ಸಚಿವರು ಹಾಗೂ ಶಾಸಕರು ನನ್ನ ಪರವಾಗಿ ಬ್ಯಾಟ್ ಬೀಸುವುದು ಬೇಡ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಡಿ. ಕೆ. ಶಿವಕುಮಾರ್ ಅವರು ಒಳ್ಳೆಯ ಅರ್ಥದಲ್ಲಿ ಹೇಳಿದ್ದಾರೆ. ತಪ್ಪಾಗಿ ಕೆಟ್ಟಾದಾಗಿ ನೋಡಿದರೆ
ತಪ್ಪಾಗಿ ಕೆಟ್ಟದಾಗಿ ಕಾಣುತ್ತದೆ. ಒಳ್ಳೆ ರೀತಿಯಲ್ಲಿ ನೋಡಿದರೆ ಒಳ್ಳೆಯದಾಗಿ ಕಾಣುತ್ತದೆ. ಯಾಕೆಂದರೆ ಕಷ್ಟಪಟ್ಟು ಶಾಸಕರನ್ನು ಗೆಲ್ಲಿಸಿದ್ದಾರೆ, ಶಾಸಕರಿಗೋಸ್ಕರ ದುಡಿದಿದ್ದಾರೆ. ಹಾಗಾಗಿ ಅವರು ಸಿಎಂ ಆಗಿಯೇ ಆಗುತ್ತಾರೆ ಎಂಬ ಹೇಳಿಕೆಯಲ್ಲಿ ಬದಲಾವಣೆ ಇಲ್ಲ ಎಂದು ತಿಳಿಸಿದರು.
ಡಿ. ಕೆ. ಶಿವಕುಮಾರ್ ಅವರ ಪರವಾಗಿ ಕಾಂಗ್ರೆಸ್ ಶಾಸಕರ ಬೆಂಬಲ ಇದೆ. ಹೈಕಮಾಂಡ್ ನಿರ್ಧಾರವೇ ಅಂತಿಮ. ಹೈಕಮಾಂಡ್ ತೀರ್ಮಾನ ಪ್ರಶ್ನಿಸಲು ನಾವು ಆಗದು. ಸಿಎಂ ಸ್ಥಾನ ನೀಡುವುದು ಹೈಕಮಾಂಡ್. ನಾನು ಹಾಗೂ ಮತ್ತೊಬ್ಬ ಸಚಿವರು ಹಾಗೂ ಶಾಸಕರಲ್ಲ. ಸಚಿವ ಕೆ. ಎನ್. ರಾಜಣ್ಣ ಹೇಳಿದಂತೆ ಡಿ. ಕೆ. ಶಿವಕುಮಾರ್ ಅವರು ಐದು ವರ್ಷ ಮುಖ್ಯಮಂತ್ರಿಯಾಗಬೇಕು. ಎರಡೂವರೆ ವರ್ಷವಲ್ಲ. ಆದ್ರೆ, ಬದಲಾದ ರಾಜಕೀಯದಲ್ಲಿ ಹೈಕಮಾಂಡ್ ಒಪ್ಪಿದರೆ ಡಿ. ಕೆ. ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.