SUDDIKSHANA KANNADA NEWS/DAVANAGERE/DATE:12_11_2025
ಬೆಂಗಳೂರು: ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಕನಿಷ್ಠ 12 ನಾಗರಿಕರು ಮೃತಪಟ್ಟು, ಹಲವರು ಗಾಯಗೊಂಡ ಭಯೋತ್ಪಾದಕ ಕೃತ್ಯದ ಬಗ್ಗೆ ತನಿಖೆ ನಡೆಯುತ್ತಿರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತಿತರ ಕಾಂಗ್ರೆಸ್ ನಾಯಕರ ಬೇಜವಾಬ್ದಾರಿ, ಅಸಂವೇದನೀಯ, ಕೀಳು ರಾಜಕೀಯ ಹೇಳಿಕೆಗಳು ಖಂಡನೀಯ ಮಾತ್ರವಲ್ಲ ಆತಂಕಕಾರಿಯೂ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
READ ALSO THIS STORY: ಭತ್ತ ಖರೀದಿಯಲ್ಲಿ ರೈತರಿಂದ ಸೂಟ್ ತೆಗೆದುಕೊಳ್ಳುವಂತಿಲ್ಲ: ಖರೀದಿದಾರರಿಗೆ ಡಿಸಿ ಖಡಕ್ ಎಚ್ಚರಿಕೆ
ದೇಶದ ವಿರುದ್ಧ ನಡೆದಿರಬಹುದಾದ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಇಡೀ ದೇಶ ಒಂದು ಧ್ವನಿಯಲ್ಲಿ ಮಾತನಾಡಬೇಕಾದ ಸೂಕ್ಷ್ಮ ಸಂದರ್ಭದಲ್ಲೂ ಇವರುಗಳು ಕೀಳು ಮಟ್ಟದ ರಾಜಕೀಯ ಮಾಡುತ್ತಿರುವುದು ರಾಜ್ಯದ ದುರಂತ, ದೇಶದ ದೌರ್ಭಾಗ್ಯ. ಕಾಂಗ್ರೆಸ್ ಪಕ್ಷಕ್ಕೆ ದೇಶದ ಭದ್ರತೆ, ನಾಗರಿಕರ ಸಾವು-ನೋವುಗಳು, ನಮ್ಮ ಸೈನಿಕರ ತ್ಯಾಗ, ರಾಷ್ಟ್ರೀಯ ಗೌರವಗಳಂತಹ ವಿಷಯಗಳೂ ಕೂಡ ಕೇವಲ ರಾಜಕೀಯ ಅಸ್ತ್ರವಾಗಿರುವುದು ನಿಜಕ್ಕೂ ಆತಂಕಕಾರಿಯಾಗಿದೆ ಎಂದಿದ್ದಾರೆ.
2019ರ ಭೀಕರ ಪುಲ್ವಾಮಾ ದಾಳಿಯ ನಂತರವೂ ಕಾಂಗ್ರೆಸ್ ನಾಯಕರು, ಪಾಕಿಸ್ತಾನದ ಪ್ರಚಾರಕ್ಕೆ ಸಹಾಯವಾಗುವ ಹೇಳಿಕೆಗಳನ್ನು ನೀಡಿದ್ದನ್ನು ದೇಶ ಮರೆತಿಲ್ಲ. ಮುಖ್ಯಮಂತ್ರಿಗಳ ಈಗಿನ ಹೇಳಿಕೆ ಕೂಡ ಕಾಂಗ್ರೆಸ್ನ ಅದೇ ರಾಷ್ಟ್ರ ವಿರೋಧಿ ಪರಂಪರೆಯ ಮುಂದುವರಿಕೆಯಾಗಿದೆ. ದೇಶದ ಸಾರ್ವಭೌಮತೆ ಮತ್ತು ಭದ್ರತೆಗೆ ಧಕ್ಕೆ ಬಂದಾಗ ಇಡೀ ದೇಶ ಒಗ್ಗಟ್ಟಿನಿಂದ ನಿಲ್ಲಬೇಕು. ಇದನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಕಾಂಗ್ರೆಸ್ ನಾಯಕರ ಧೋರಣೆ ಅವರ ಅಸಲಿಯತ್ತನ್ನು ಬಯಲು ಮಾಡಿದೆ. ಯುಪಿಎ ಅವಧಿಯಲ್ಲಿ (2004-2014) ಮುಂಬೈ ದಾಳಿ ಸೇರಿದಂತೆ ದೇಶದಲ್ಲಿ 45ಕ್ಕೂ ಅಧಿಕ ಬಾಂಬ್ ಸ್ಫೋಟ, ಉಗ್ರಕೃತ್ಯಗಳು ನಡೆದು ಸಾವಿರಾರು ಮಂದಿ ಸಾವನ್ನಪ್ಪಿದಾಗ, ಆಗಿನ ಅಸಮರ್ಥ ಕೇಂದ್ರ ಸರ್ಕಾರ ಪ್ರತಿ ಕ್ರಮಗಳೇನನ್ನೂ ತೆಗೆದುಕೊಳ್ಳದೆ ಇದ್ದಾಗಲೂ ದೇಶದ ಭದ್ರತೆ ವಿಷಯದಲ್ಲಿ ದೇಶ ಒಂದಾಗಿರಬೇಕೆಂದು ಆಗ ಪ್ರತಿಪಕ್ಷ ರಾಜಕೀಯ ನಡೆಸಲಿಲ್ಲ ಎಂದು ಹೇಳಿದ್ದಾರೆ.
ರಾಜ್ಯದ ಆಡಳಿತ ವೈಫಲ್ಯ, ಶೂನ್ಯ ಅಭಿವೃದ್ಧಿ ಮತ್ತು ಭ್ರಷ್ಟಾಚಾರದ ಮೇಲಿನ ಆರೋಪಗಳಿಗೆ ಉತ್ತರದಾಯಿಗಳಾಗಿರುವ ಮುಖ್ಯಮಂತ್ರಿಗಳು ಮತ್ತು ಆಡಳಿತ ಪಕ್ಷದ ನಾಯಕರು, ಜನರ ಗಮನ ಬೇರೆಡೆ ಸೆಳೆಯಲು ಹೀಗೆ ಅಗ್ಗದ ರಾಜಕೀಯ ತಂತ್ರವನ್ನು ಅನುಸರಿಸುತ್ತಿರುವುದನ್ನು ನೋಡಿ ಜನರೇ ಛೀಮಾರಿ ಹಾಕುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಮುಖ್ಯಮಂತ್ರಿಗಳು ತಮ್ಮ ಹೇಳಿಕೆಯನ್ನು ಕೂಡಲೇ ಹಿಂಪಡೆಯಬೇಕು. ಕಾಂಗ್ರೆಸ್ನ ದೇಶ-ವಿರೋಧಿ, ಸಂವೇದನಾರಹಿತ, ಕೀಳು ರಾಜಕೀಯಕ್ಕೆ ಬಿಹಾರದ ಜನತೆ ಉತ್ತರ ನೀಡುತ್ತಿರುವಂತೆಯೇ ರಾಜ್ಯದ ಜನರೂ ಕೂಡ ತಕ್ಕ ಉತ್ತರ ನೀಡಲಿದ್ದಾರೆ. ಇದು ಪಕ್ಷ ರಾಜಕಾರಣದ ಮಾತಲ್ಲ, ನಿಜವಾದ ದೇಶಭಕ್ತ ಭಾರತೀಯರಿಗೆ ಯಾವಾಗಲೂ ‘ದೇಶ ಮೊದಲು’, ಉಳಿದದ್ದೆಲ್ಲವೂ ನಂತರ ಎಂದಿದ್ದಾರೆ.








