SUDDIKSHANA KANNADA NEWS/ DAVANAGERE/ DATE_04-07_2025
ದಾವಣಗೆರೆ: ಕರ್ನಾಟಕ ಕಾಂಗ್ರೆಸ್ ಪಕ್ಷವು ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳ ಜಿಲ್ಲಾಧ್ಯಕ್ಷರ ಬದಲಾವಣೆಗೆ ಮುಂದಾಗಿದ್ದು, ಹಲವು ವರ್ಷಗಳಿಂದ ಒಂದೇ ಜಿಲ್ಲೆಯಲ್ಲಿ ಅಧ್ಯಕ್ಷರಾಗಿರುವವರ ಬದಲಾವಣೆಗೆ ತೀರ್ಮಾನಿಸಲಾಗಿದೆ. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ಈ 21 ಜಿಲ್ಲೆಗಳಲ್ಲಿ ವೀಕ್ಷಕರ ನೇಮಕ ಮಾಡಲಾಗಿದೆ.
ಈ ವೀಕ್ಷಕರು ಅಭಿಪ್ರಾಯ ಸಂಗ್ರಹಿಸಿ ಕೆಪಿಸಿಸಿಗೆ ವರದಿ ನೀಡಲಿದ್ದಾರೆ. ಈ ವರದಿ ಆಧರಿಸಿ ನೂತನ ಜಿಲ್ಲಾಧ್ಯಕ್ಷರ ನೇಮಕ ಆಗಲಿದೆ. ಪಕ್ಷ ಸಂಘಟನೆ, ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಮಹಾನಗರ ಪಾಲಿಕೆ ಚುನಾವಣೆ ಗಮನದಲ್ಲಿಟ್ಟುಕೊಂಡು ಜಿಲ್ಲಾಧ್ಯಕ್ಷರ ಆಯ್ಕೆ ನಡೆಯಲಿದೆ. ಜಾತಿ ಸಮೀಕರಣವೂ ಇರಲಿದ್ದು, ಎಲ್ಲಾ ವರ್ಗದವರಿಗೆ ಆದ್ಯತೆ ನೀಡುವ ಸಂಬಂಧ ವೀಕ್ಷಕರು ಮಾಹಿತಿ ಸಂಗ್ರಹಿಸಿ ನೀಡಲಿದ್ದಾರೆ.
READ ALSO THIS STORY: ಯಾವುದೇ ಕ್ಷಣದಲ್ಲಿ ಭದ್ರಾ ಡ್ಯಾಂನಿಂದ ನೀರು ಹೊರಕ್ಕೆ: ಭದ್ರಾ ನದಿಪಾತ್ರದ ತಗ್ಗುಪ್ರದೇಶದ ಜನರಿಗೆ ಎಚ್ಚರಿಕೆ
ಎಐಸಿಸಿಯು ಈಗಾಗಲೇ ಒಂದು ಅವಧಿ ಅಥವಾ ಇಲ್ಲವೇ ಎರಡು ಅವಧಿ ಪೂರೈಸಿರುವವರ ಬದಲಾವಣೆಗೆ ಹೈಕಮಾಂಡ್ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಒಂದು ಇಲ್ಲವೇ ಎರಡು ಅವಧಿ ಪೂರ್ಣಗೊಳಿಸಿರುವ
ಜಿಲ್ಲಾಧ್ಯಕ್ಷರ ಬದಲಾವಣೆ ಪಕ್ಕಾ ಎಂದು ಮಾಹಿತಿ ಸಿಕ್ಕಿದೆ.
ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ. ಕೆ. ಶಿವಕುಮಾರ್ ಈಗಾಗಲೇ ಸಭೆ ನಡೆಸಿದ್ದು, ವೀಕ್ಷಕರನ್ನು ನಿಯೋಜಿಸಿದ್ದಾರೆ. ಜಿಲ್ಲಾ ಘಟಕದ ಅಭಿಪ್ರಾಯ, ಸಚಿವರು, ಶಾಸಕರು, ಸಂಸದರು, ಜಿಲ್ಲಾ ವಿವಿಧ ಘಟಕಗಳ ಪದಾಧಿಕಾರಿಗಳು ಸೇರಿದಂತೆ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಇಬ್ಬರು ಅಥವಾ ಮೂವರ ಹೆಸರನ್ನು ಲಕೋಟೆಯಲ್ಲಿ ನೀಡುವಂತೆ ವೀಕ್ಷಕರಿಗೆ ಡಿ. ಕೆ. ಶಿವಕುಮಾರ್ ನಿರ್ದೇಶನ ನೀಡಿದ್ದಾರೆ ಎಂದು ಕೆಪಿಸಿಸಿ ಮೂಲಗಳು ದೃಢಪಡಿಸಿವೆ.
ಪ್ರಮುಖವಾಗಿ ದಾವಣಗೆರೆ, ಹಾಸನ, ಕಲಬುರ್ಗಿ, ಬೆಳಗಾವಿ, ಚಿಕ್ಕೋಡಿ, ಬೆಳಗಾವಿ ನಗರ, ಮೈಸೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ತುಮಕೂರು, ಉಡುಪಿ, ಚಿಕ್ಕಮಗಳೂರು, ಚಾಮರಾಜನಗರ, ವಿಜಯಪುರ, ಚಿತ್ರದುರ್ಗ, ದಕ್ಷಿಣ
ಕನ್ನಡ, ಧಾರವಾಡ ಗ್ರಾಮೀಣ, ಗದಗ, ಹುಬ್ಬಳ್ಳಿ ನಗರ, ಕೋಲಾರ, ಮಂಡ್ಯ ಸೇರಿದಂತೆ 21 ಜಿಲ್ಲೆಗಳಿಗೆ ವೀಕ್ಷಕರನ್ನು ಡಿ. ಕೆ. ಶಿವಕುಮಾರ್ ನಿಯೋಜಿಸಿ ಸೂಚನೆ ನೀಡಿದ್ದಾರೆ.