SUDDIKSHANA KANNADA NEWS/ DAVANAGERE/ DATE:18-02-2025
ದಾವಣಗೆರೆ: ತಾಲ್ಲೂಕಿನ ಮಾಯಕೊಂಡ ಗ್ರಾಮದ ರೈತ ಮಾಳಜ್ಜರ ಗುಡ್ಡಪ್ಪ ಸೇರಿದಂತೆ ಜಿಲ್ಲೆಯ ಹಲವು ಗ್ರಾಮಗಳ ರೈತರ ಮನೆಗೆ ಹೌಸಿಂಗ್ ಫೈನಾನ್ಸ್ ನವರು ಸಾಲ ಮರುಪಾವತಿ ನೋಟಿಸ್ ಅಂಟಿಸಿರುವುದನ್ನು ವಿರೋಧಿಸಿ ಮಂಗಳವಾರ ರಾಜ್ಯ ರೈತ ಸಂಘ-ಹಸಿರು ಸೇನೆ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದಿಂದ ಬೃಹತ್ ಬೈಕ್ ರ್ಯಾಲಿ ಪ್ರತಿಭಟನೆ ನಡೆಸಲಾಯಿತು.
ಮಾಯಕೊಂಡ ಗ್ರಾಮದಿಂದ ಆನಗೋಡು ಮಾರ್ಗವಾಗಿ ದಾವಣಗೆರೆಗೆ ಬೈಕ್ ರ್ಯಾಲಿಯ ಮೂಲಕ ಆಗಮಿಸಿದ ಪ್ರತಿಭಟನಕಾರರು ನಗರದ ಲಾಯರ್ ರಸ್ತೆಯಲ್ಲಿರುವ ಹೋಂ ಫೈನಾನ್ಸ್ ಎದುರು ಧರಣಿ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ, ರೈತ ಗುಡ್ಡಪ್ಪ ಗೃಹಂ ಹೌಸಿಂಗ್ ಫೈನಾನ್ಸ್ನಲ್ಲಿ ಮನೆ ನಿರ್ಮಾಣಕ್ಕಾಗಿ 18 ಲಕ್ಷ ಸಾಲ ಪಡೆದಿದ್ದರು. ಈಗಾಗಲೇ 9 ಲಕ್ಷ ರೂ ಸಾಲ ಮರುಪಾವತಿ ಮಾಡಿದ್ದಾರೆ ಆದರೆ ಫೈನಾನ್ಸ್ ನವರು ಮೊದಲು ಕಟ್ಟಿದ ಎಲ್ಲ ಸಾಲದ ಕಂತುಗಳನ್ನು ಬಡ್ಡಿಗೆ ಜಮಾ ಮಾಡಿಕೊಂಡು ಇನ್ನೂ 18 ಲಕ್ಷ ಸಾಲ ಬಾಕಿ ಇದೆ ಎಂದು ಮನೆಗೆ ನೋಟಿಸ್ ಅಂಟಿಸಿ ಹರಾಜು ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದರು.
ಗುಡ್ಡಪ್ಪ ಕೇವಲ ಎರಡು ಕಂತು ಬಾಕಿ ಉಳಿಸಿಕೊಂಡಿದ್ದರು. ಆದರೂ ಇನ್ನೂ 18 ಲಕ್ಷ ರೂ ಬಾಕಿ ಇದೆ ಎಂದು ಫೈನಾನ್ಸ್ ನವರ ಬೆದರಿಕೆಯಿಂದ ನೊಂದ ಗುಡ್ಡಪ್ಪ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ಕುಟುಂಬದ ಸದಸ್ಯರು ಧೈರ್ಯ ನೀಡಿದ ನಂತರ ವಿಷಯ ತಿಳಿದು ರೈತ ಸಂಘ ಈ ಹೋರಾಟ ಹಮ್ಮಿಕೊಂಡಿದ್ದು, ರೈತನಿಗೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಕೇವಲ ಎರಡು ಕಂತು ಬಾಕಿ ಉಳಿಸಿಕೊಂಡರೆ ಆಸ್ತಿ ಹರಾಜಿಗೆ ಕಾನೂನಿನಲ್ಲಿ ಅವಕಾಶವಿಲ್ಲ. ಆದರೂ ಹರಾಜು ಸಂಬಂಧ ನೋಟಿಸ್ ಅಂಟಿಸಿರುವುದು ಕಾನೂನು ಉಲ್ಲಂಘನೆಯಾಗಿದೆ. ಹಾಗಾಗಿ ಫೈನಾನ್ಸ್ ಸಿಬ್ಬಂದಿ ಹರಾಜು ಆದೇಶ ಪ್ರತಿ ತೋರಿಸಬೇಕೆಂದು ರೈತರು ಈ ವೇಳೆ ಪಟ್ಟು ಹಿಡಿದರು. ಈ ವೇಳೆ ರೈತರ ಹೋರಾಟಕ್ಕೆ ಬಗ್ಗಿದ್ದ ಫೈನಾನ್ಸ್ ಸಿಬ್ಬಂದಿ ಒನ್ ಟೈಮ್ ಸೆಟಲ್ಮೆಂಟ್ ಮಾಡಿಕೊಳ್ಳುವುದಾಗಿ ಹೇಳಿದರು.
ಸೆಟಲ್ಮೆಂಟ್ ವಿಷಯ ಆ ಮೇಲೆ. ಆದರೆ ಪ್ರಾಮಾಣಿಕವಾಗಿ ರೈತ ಗುಡ್ಡಪ್ಪ ಸಾಲ ತೀರಿಸುತ್ತಾರೆ. ಗೌರವಯುತವಾಗಿ ಸಾಲ ವಸೂಲಾತಿ ಮಾಡಿ. ಇದನ್ನು ಬಿಟ್ಟು ಮನೆ ಬಾಗಿಲಿಗೆ ಹೋಗಿ ನೋಟಿಸ್ ಅಂಟಿಸಿ ಬರುವುದರಿಂದ ಆತನಿಗೆ ಅವಮಾನ ಮಾಡಿದಂತಾಗುತ್ತದೆ ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಸುಗ್ರೀವಾಜ್ಞೆ ಅನ್ವಯ ಫೈನಾನ್ಸ್ ವಿರುದ್ಧ ದೂರು ನೀಡುವುದಾಗಿ ಮಂಜುನಾಥ್ ಹೇಳಿದರು.
ಗುಡ್ಟಪ್ಪ ಸೇರಿದಂತೆ ಸಾಲ ಪಡೆದ ಯಾವ ರೈತನ ಮನೆ ಬಾಗಿಲಿಗೂ ಕೂಡ ನೋಟಿಸ್ ಅಂಟಿಸದೇ ಗೌರವಯುತವಾಗಿ ಸಾಲ ವಸೂಲಾತಿ ಮಾಡಬೇಕೆಂದು ಆಗ್ರಹಿಸಲಾಯಿತು. ಇದೇ ರೀತಿ ಬಿ.ಕಲ್ಪನಹಳ್ಳಿಯಲ್ಲಿ 5 ಮನೆ, ಸಿರಗಾನಹಳ್ಳಿ, ಚಿನ್ನ ಸಮುದ್ರ ಸೇರಿದಂತೆ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಇದೇ ರೀತಿ ಸಾಲ ಪಡೆದ ರೈತರ ಮನೆಯ ಗೋಡೆ ಮೇಲೆ ನೋಟಿಸ್ ಹಚ್ಚಲಾಗಿದ್ದು. ಇದು ಅಕ್ಷಮ್ಯ ಅಪರಾಧವಾಗಿದ್ದು, ಇದನ್ನು ಕೂಡಲೇ ನಿಲ್ಲಿಸಬೇಕೆಂದು ಒತ್ತಾಯಿಸಲಾಯಿತು.
ನಂತರ ತಹಶೀಲ್ದಾರ್ ಕಚೇರಿಗೆ ತೆರಳಿ ಅಶ್ವಥ್ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಚಿನ್ನ ಸಮುದ್ರ ಭೀಮಾನಾಯ್ಕ, ಹೂವಿನಮಡು ನಾಗರಾಜ್, ಗಂಡುಗಲಿ, ರಾಜನಹಟ್ಟಿ ರಾಜು, ಸಿರಗಾನಹಳ್ಳಿ ರಾಜಣ್ಣ, ಹುಚ್ಚವ್ವನಹಳ್ಳಿ ಪ್ರಕಾಶ್, ಕೋಗಲೂರು ಕುಮಾರ್, ಆನಗೋಡು ಭೀಮಣ್ಣ, ಮಾಯಕೊಂಡದ ಸಂತೋಷ್ ಕೋಟಿ, ಮುಂಡರಗಿ ರಾಮಣ್ಣ, ಹೊನ್ನಮರಡಿ ಶಿವಕುಮಾರ್, ಗಿರಿಯಾಪುರ ಗಂಗಾಧರಸ್ವಾಮಿ, ಚಿನ್ನಸಮುದ್ರ ಸುರೇಶ್ ನಾಯ್ಕ, ಕುರ್ಕಿ ಹನುಮಂತ, ಪಾಮೇನಹಳ್ಳಿ ಗೌಡ್ರ ಶೇಖರಪ್ಪ, ಉಪ್ಪನಾಯಕನಹಳ್ಳಿ ಉಮೇಶ್ ಮುಂತಾದವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾಯಕೊಂಡ ಗ್ರಾಮದಲ್ಲಿ 50 ಕ್ಕೂ ಅಧಿಕ ರೈತರು ಹಸಿರು ಶಾಲು ದೀಕ್ಷೆ ಪಡೆಯುವ ಮೂಲಕ ರೈತ ಸಂಘಕ್ಕೆ ಸೇರ್ಪಡೆಗೊಂಡರು.