SUDDIKSHANA KANNADA NEWS/ DAVANAGERE/ DATE:23-03-2024
ದಾವಣಗೆರೆ: ನಗರದ ರಾಂ ಅಂಡ್ ಕೋ ಸರ್ಕಲ್ ನಲ್ಲಿ ಮಾ.24 ರಂದು ಸಂಜೆ ಕಾಮದಹನ ಹಾಗೂ ಮಾ.25ರಂದು ಬೃಹತ್ ಹೋಳಿಹಬ್ಬ ಆಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಹಿಂದೂ ಪದ್ಧತಿಯಂತೆ ಹಾಗೂ ಸಾರ್ವಜನಿಕರ ಒತ್ತಾಯದ ಮೇರೆಗೆ ರಾಂ ಅಂಡ್ ಕೋ ಸರ್ಕಲ್ ನಲ್ಲಿ ಹೋಳಿ ಹಬ್ಬವನ್ನು ಆಚರಣೆ ಮಾಡಲು ತೀರ್ಮಾನಿಸಲಾಗಿದೆ. ಮಾ.25ರಂದು ರಾಂ ಅಂಡ್ ಕೋ ವೃತ್ತದಲ್ಲಿ
ವಿಜೃಂಭಣೆಯ ಹೋಳಿ ಆಚರಣೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಹಬ್ಬವನ್ನು ಯಶಸ್ವಿಗೊಳಿಸಬೇಕಾಗಿ ಸಾರ್ವಜನಿಕ ಹಿಂದೂ ಮಹಾಗಣವತಿ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಜೊಳ್ಳಿ ಗುರು ತಿಳಿಸಿದ್ದಾರೆ.
ಪೊಲೀಸ್ ಇಲಾಖೆ ಕೊಟ್ಟ ಸೂಚನೆಗಳೇನು…?
ಜಿಲ್ಲೆಯಾದ್ಯಂತ ಮಾರ್ಚ್ 25ರಂದು ಹೋಳಿ ಹಬ್ಬವನ್ನು ಆಚರಣೆ ಮಾಡುವುದಾಗಿ ತಿಳಿದು ಬಂದಿದೆ. ಸಾರ್ವಜನಿಕರು ಈ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಪೊಲೀಸ್ ಇಲಾಖೆಯು ಸೂಚನೆಗಳನ್ನು ನೀಡಿದೆ.
ಯಾವುದೇ ವ್ಯಕ್ತಿಗಳ ಮೇಲೆ ಒತ್ತಾಯ ಪೂರ್ವಕವಾಗಿ ಬಣ್ಣ ಎರಚುವವರ ವಿರುದ್ಧ, ಪಿಯುಸಿ ಪರೀಕ್ಷೆಗಳು ಹಾಗೂ ಇತರೆ ಪರೀಕ್ಷೆಗಳು ನಡೆಯುತ್ತಿರುವುದರಿಂದ ಪರೀಕ್ಷೆಗೆ ಹಾಜರಾಗುವಂತಹ ವಿದ್ಯಾರ್ಥಿಗಳಿಗೆ ಯಾವುದೇ ಬಣ್ಣ ಎರಚಬಾರದು, ಯಾರಾದರೂ ಕಿಡಿಗೇಡಿತನಕ್ಕೆ ಮುಂದಾದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು.
ಪೇಂಟ್, ವಾರ್ನಿಷ್, ಆಸಿಡ್, ಡಾಂಬರ್, ಗಾಣದ ಎಣ್ಣೆ, ಮೊಟ್ಟೆ ಹಾಗೂ ಯಾವುದೇ ಅಪಾಯಕಾರಿ ರಾಸಾಯನಿಕ ಮಿಶ್ರಣಗಳನ್ನು ಮೈಮೇಲೆ ಎರಚುವವರ ವಿರುದ್ಧ ಮತ್ತು ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರ ಮತ್ತು ನೌಕರರು ಹಾಗೂ ಶಾಲಾ ವಿದ್ಯಾರ್ಥಿಗಳ ಮೇಲೆ ಬಣ್ಣ ಎರಚುವಂತಿಲ್ಲ. ಸಾರ್ವಜನಿಕ ನೀರು ಸರಬರಾಜು ಸ್ಥಳಗಳಲ್ಲಿ ಬಣ್ಣ ತೊಳೆದು ನೀರನ್ನು ಮಲೀನ ಮಾಡಬಾರದು.
ಹೋಳಿ ಹಬ್ಬದ ನೆಪದಲ್ಲಿ ಸಾರ್ವಜನಿಕರಿಂದ ಒತ್ತಾಯ ಪೂರ್ವಕವಾಗಿ ಹಣ ವಸೂಲಿ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ವಿಶೇಷವಾಗಿ ಮೆಡಿಕಲ್ ಮತ್ತು ಇಂಜಿನಿಯರ್ ವಿದ್ಯಾರ್ಥಿಗಳು ಒಂದು ವಿದ್ಯಾರ್ಥಿ ನಿಲಯದಿಂದ ಇನ್ನೊಂದು ವಿದ್ಯಾರ್ಥಿ ನಿಲಯಕ್ಕೆ ಹೋಗಿ ಬಣ್ಣ ಎರಚುವುದಾಗಲಿ ಅಥವಾ ಮಹಿಳಾ ವಿದ್ಯಾರ್ಥಿ ನಿಲಯಗಳ ಬಳಿ ತೆರಳಿ ಮಹಿಳಾ ವಿದ್ಯಾರ್ಥಿಗಳ ಮೇಲೆ ಬಣ್ಣ ಎರಚುವುದನ್ನು ನಿಷೇಧಿಸಿದ್ದು, ಯಾರಾದರೂ ಕಿಡಿಗೇಡಿತನಕ್ಕೆ ಮುಂದಾದಲ್ಲಿ ಕ್ರಮ ಖಚಿತ.
ಧ್ವನಿವರ್ಧಕ ಅಳವಡಿಕೆ ನಿಯಮವನ್ನು ಮತ್ತು ಅನುಮತಿಯನ್ನು ಸಂಬAಧಪಟ್ಟ ಆಯೋಜಕರು ಕಟ್ಟುನಿಟ್ಟಾಗಿ ಪಾಲಿಸಬೇಕು. ಬಣ್ಣ ಎರಚುವ ನೆಪದಲ್ಲಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತನೆ ಮಾಡುವವರು, ಚುಡಾಯಿಸುವವರು ಕಂಡು ಬಂದಲ್ಲಿ ಸಹಿಸಲು ಸಾಧ್ಯವಿಲ್ಲ. ಮದ್ಯಪಾನ ಸೇವನೆ ಮಾಡಿ ಅತಿವೇಗ ಅಪಾಯಕಾರಿಯಾಗಿ ವಾಹನ ಚಾಲನೆ ಮಾಡುವಂತಿಲ್ಲ.
ಬಣ್ಣ ಹಚ್ಚುವ ಸಮಯದ ಕೊನೆಯ ಹಂತದಲ್ಲಿ ಕೆಲವು ಕಿಡಿಗೇಡಿಗಳು ಮೈ ಮೇಲಿನ ಬಟ್ಟೆಗಳನ್ನು ಹರಿದು ಸಾರ್ವಜನಿಕವಾಗಿ ಅಸಹ್ಯವಾಗುವ ರೀತಿಯಲ್ಲಿ ನೃತ್ಯ ಮಾಡುವಂತಿಲ್ಲ. ಧಾರ್ಮಿಕ ಕಟ್ಟಡಗಳಾದ ಚರ್ಚು, ಮಸೀದಿ, ದರ್ಗಾ ಮತ್ತು ದೇವಾಲಯಗಳಿಗೆ ಬಣ್ಣ ಎರಚುವಂತಿಲ್ಲ.ದ್ವಿಚಕ್ರ ವಾಹನಗಳಲ್ಲಿ ಮೂವರು ಸೇರಿ ಸವಾರಿ ಮಾಡಿಕೊಂಡು ಚಲಿಸುವುದಾಗಲಿ, ವಾಹನದ ಸೈಲೆನ್ಸ್ರ್ಗಳನ್ನು ತೆಗೆದು ಕರ್ಕಶವಾದ ಶಬ್ದವನ್ನು ಉಂಟುಮಾಡುವ ಸೈಲೆನ್ಸ್ರ್ಗಳನ್ನು ಉಪಯೋಗಿಸುವುದು ಕಂಡುಬಂದಲ್ಲಿ ವಾಹನಗಳನ್ನು ಸೀಜ್ ಮಾಡಲಾಗುವುದು.
ದ್ವಿಚಕ್ರ ವಾಹನಗಳ ನಂಬರ್ ಪ್ಲೇಟ್ಗಳಿಗೆ ನಂಬರ್ ಕಾಣದಂತೆ ಬಟ್ಟೆ ಕಟ್ಟುವುದು ಹಾಗೂ ಬಣ್ಣ, ಗ್ರೀಸ್ ಹಚ್ಚಿಕೊಂಡು ಸಂಚರಿಸುವುದು ಅಪರಾಧ. ಅಂತಹ ವಾಹನಗಳು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕಾಮದಹನವನ್ನು ಹಾಗೂ ಹೋಳಿ ಹಬ್ಬವನ್ನು ನಿಗಧಿತ ಸಮಯಕ್ಕೆ ಮುಗಿಸಬೇಕು.