SUDDIKSHANA KANNADA NEWS/ DAVANAGERE/ DATE-07-05-2025
ನವದೆಹಲಿ: ಪಾಕಿಸ್ತಾನದ 21 ಉಗ್ರರ ಕ್ಯಾಂಪ್ ಗಳ ಮೇಲೆ ಭಾರತೀಯ ಸೇನೆಯು ದೊಡ್ಡ ದಾಳಿ ನಡೆಸಿದೆ. ಈ ಮೂಲಕ ಪಹಲ್ಗಾಮ್ ಪೈಶಾಚಿಕ ಕೃತ್ಯಕ್ಕೆ ತಕ್ಕ ಉತ್ತರ ನೀಡಿರುವ ಭಾರತವು ಪಾಕಿಸ್ತಾನಕ್ಕೆ ಮುಟ್ಟಿನೋಡಿಕೊಳ್ಳುವಂಥ ಶಾಕ್ ಕೊಟ್ಟಿದೆ. ಭಯೋತ್ಪಾದಕರು ಕನಸಿನಲ್ಲಿಯೂ ಊಹಿಸದ ರೀತಿಯಲ್ಲಿ ಉತ್ತರ ನೀಡುತ್ತೇವೆ ಎಂದು ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ಆ ಮಾತಿನಂತೆ ದಾಳಿ ನಡೆಸಿ, ತಕ್ಕ ಪ್ರತ್ಯುತ್ತರ ನೀಡಿದ್ದಾರೆ.
ಸವಾಯ್ ನಾಲಾ, ಸೈಯಿದ್ – ನಾ- ಬಿಲಾಲ್, ಮಸ್ಕರ್ – ಇ- ಇದ್ವಾ, ಚೆಲಾಂಬಡಿ, ಅಬ್ದುಲ್ ಬಿನ್ ಮಸೂದ್, ದುಲೈ ಕ್ಯಾಂಪ್. ಗರ್ಬಿ ಹಬಿಬುಲ್ಲಾ, ಬತ್ರಾಸಿ, ಬಾಲಾಕೋಟ್, ಒಗ್ಗಿ, ಬೋಯಿ, ಸೆನ್ಸಾ, ಗುಲ್ ಪುರ್ ಸೇರಿದಂತೆ ಪಾಕಿಸ್ತಾನದ
21 ಉಗ್ರರ ಕ್ಯಾಂಪ್ ಗಳನ್ನು ಗುರಿಯಾಗಿಸಿಕೊಂಡು ಮೊಟ್ಟಮೊದಲ ಬಾರಿಗೆ ಉಗ್ರರ ಹುಟ್ಟಡಿಗಿಸುವ ಕೆಲಸವನ್ನು ಭಾರತೀಯ ಸೇನೆ ಮಾಡಿದೆ.
ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಹಾಗೂ ಕಮಾಂಡರ್ ಗಳಾದ ವ್ಯೂಮಿಕಾ, ಕರ್ನಲ್ ಸೋಫಿಯಾ ಖುರೇಷಿ ಅವರು ಆಪರೇಷನ್ ಸಿಂಧೂರ್ ಬಗ್ಗೆ ಸಂಪೂರ್ಣ
ಮಾಹಿತಿ ನೀಡಿದರು.
ಪಾಕ್ ನ ನಾಲ್ಕು ಉಗ್ರರ ನೆಲೆಗಳು, ಪಿಒಕೆಯ 5 ನೆಲೆಗಳಿಗೆ ನುಗ್ಗಿ ಭಾರತವು ಹೊಡೆದು ಹಾಕಿದೆ. ಆಧುನಿಕ ತಂತ್ರಜ್ಞಾನದ ಕ್ಷಿಪಣಿ ಬಳಸಿ ಕಾರ್ಯಾಚರಣೆ ನಡೆಸಲಾಗಿದೆ. ಭಯೋತ್ಪಾದನೆ ನಿರ್ಮೂಲನೆ ಗುರಿ ಹೊಂದಿರುವ ಭಾರತವು ಉಗ್ರರ
ಬೆನ್ನೆಲುಬು ಮುರಿಯುವ ಗುರಿ ಆಯ್ಕೆ ಮಾಡಿಕೊಂಡು ಸಶಸ್ತ್ರ ಪಡೆಗಳು ದಾಳಿ ನಡೆಸಿವೆ ಎಂದು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಕರ್ನಲ್ ಸೋಫಿಯಾ ಖುರೇಷಿ, ಭಯೋತ್ಪಾದನೆಯ ಬೆನ್ನೆಲುಬನ್ನು ಮುರಿಯಲು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಗುರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
“ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರು ಹಾಗೂ ಕುಟುಂಬಗಳಿಗೆ ನ್ಯಾಯ ಒದಗಿಸಲು ಕಾರ್ಯಾಚರಣೆ ಸಿಂಧೂರ್ ಅನ್ನು ಪ್ರಾರಂಭಿಸಲಾಯಿತು. ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿ ನಾಶಪಡಿಸಲಾಯಿತು”
ಎಂದು ಖುರೇಷಿ ಹೇಳಿದರು.