SUDDIKSHANA KANNADA NEWS/ DAVANAGERE/ DATE_04-07_2025
ದಾವಣಗೆರೆ: ದಿನ ಕಳೆದಂತೆ ಭದ್ರಾ ಡ್ಯಾಂ (Bhadra Dam) ಗೆ ಭಾರೀ ಪ್ರಮಾಣದಲ್ಲಿ ಒಳಹರಿವು ಬರುತ್ತಿದೆ. ಜಲಾಶಯ ಭರ್ತಿಗೆ ಇನ್ನು ಕೇವಲ 18.9 ಅಡಿ ನೀರು ಮಾತ್ರ ಬೇಕು. ಕಳೆದ ಹದಿನೈದು ದಿನಗಳಿಂದಲೂ ಭದ್ರಾ ಜಲಾಶಯದ ಜಲಾನಯನ ಪ್ರದೇಶ ಮತ್ತು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ವರುಣ ಅಬ್ಬರಿಸುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
ಭದ್ರಾ ಡ್ಯಾಂನ ಇಂದಿನ ನೀರಿನ ಮಟ್ಟ 167.1 ಅಡಿ ಆಗಿದೆ. ಜಲಾಶಯಕ್ಕೆ 21,982 ಕ್ಯೂಸೆಕ್ ಒಳಹರಿವಿದ್ದು, ಜಲಾಶಯದಿಂದ 3394 ಕ್ಯೂಸೆಕ್ ಹೊರ ಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ
127 ಅಡಿ ಸಂಗ್ರಹವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 40 ಅಡಿಗೂ ಹೆಚ್ಚು ನೀರು ಸಂಗ್ರಹವಾಗಿದೆ.
READ ALSO THIS STORY: “19 ಕೋಟಿ 25 ಲಕ್ಷ ರೂ. ಬಂದಿದ್ದರೂ ಕೊಡುತ್ತಿಲ್ಲ”: ಸಾವಿಗೆ ಕಾರಣ ಬರೆದಿಟ್ಟು ಹೋದ ದಾವಣಗೆರೆಯ ಶಶಿಕುಮಾರ!
ಜಲಾಶಯದ ಗರಿಷ್ಠ ನೀರಿನ ಮಟ್ಟ 186 ಅಡಿ ಆಗಿದ್ದು, ಭರ್ತಿಯಾಗಲು ಕೇವಲ 18.9 ಅಡಿ ಮಾತ್ರ ಬರಬೇಕು. ಇದು ಭದ್ರಾ ಅಚ್ಚುಕಟ್ಟು ಪ್ರದೇಶ ಹಾಗೂ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ರೈತರ ಸಂತಸಕ್ಕೆ ಕಾರಣವಾಗಿದೆ.
ಕಳೆದ ವರ್ಷವರುಣ ಅಬ್ಬರಿಸಿ ಬೊಬ್ಬಿರಿದ ಕಾರಣ ಭದ್ರಾ ಜಲಾಶಯವು ಎರಡರಿಂದ ಮೂರು ಬಾರಿ ಭರ್ತಿಯಾಗಿತ್ತು. ಬೇಸಿಗೆ ಕಾಲ ಬಂದರೂ ಜಲಾಶಯದಲ್ಲಿ ನೀರು ಸಂಗ್ರಹವಾಗಿತ್ತು. ನಿಯಮಿತವಾಗಿ ಭದ್ರಾ ಎಡದಂಡೆ, ಬಲದಂಡೆ ನಾಲೆಗಳಲ್ಲಿ ನೀರು ಹರಿಸಿದ ಪರಿಣಾಮ ಜಲಾಶಯದ ನೀರಿನ ಸಂಗ್ರಹ ಕಡಿಮೆಯಾಗಿತ್ತು. ಮತ್ತೆ ಮಳೆ ಶುರುವಾಗಿದ್ದು, ಒಳಹರಿವು ಹೆಚ್ಚಾಗುತ್ತಿದೆ.
ಭದ್ರಾ ನದಿಪಾತ್ರದ ತಗ್ಗುಪ್ರದೇಶದ ಜನರಿಗೆ ಎಚ್ಚರಿಕೆ:
ಭದ್ರಾ ನದಿ ದಂಡೆಯ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರಿಗೆ ಭದ್ರಾ ಜಲಾಶಯದ ಪ್ರದೇಶದಲ್ಲಿ ಮುಂಗಾರು ಮಳೆ ಪ್ರಾರಂಭವಾಗಿದ್ದು, ಸಾಕಷ್ಟು ಒಳಹರಿವು ಬರುತ್ತಿದೆ.
ನೀರಿನ ಸಂಗ್ರಹ ಮಟ್ಟವು ಹೆಚ್ಚಾಗತೊಡಗಿದೆ. ಹರಿದು ಬರುವ ಒಳಹರಿವಿನ ಪ್ರಮಾಣ 20000-25000 ಕ್ಯೂಸೆಕ್ಸ್ ಇದ್ದು, ಅಣಿಕಟ್ಟು ಸುರಕ್ಷತೆ ದೃಷ್ಠಿಯಿಂದ ಹೆಚ್ಚುವರಿ ನೀರನ್ನು ಯಾವ ಸಮಯದಲ್ಲಾದರೂ ಸ್ಪಿಲ್ ವೇ ಗೇಟ್ ಮುಖಾಂತರ ಬೀಡಲಾಗುವುದು.
ಭದ್ರಾ ನದಿಯ ಎಡ ಮತ್ತು ಬಲ ದಂಡೆಯ ಉದ್ದಕ್ಕೂ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಮುಂಜಾಗ್ರತೆಯಾಗಿ ಸುರಕ್ಷಿತ ಸ್ಥಳಗಳಿಗೆ ಹೋಗಬೇಕು. ನದಿ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದು, ಜಾನುವಾರುಗಳನ್ನು ನದಿ ಪಾತ್ರದಲ್ಲಿ ಮೇಯಿಸುವುದನ್ನು ನಿಷೇಧಿಸಲಾಗಿದೆ. ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತದ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.
ಭದ್ರಾ ಜಲಾಶಯದ ನೀರಿನ ಮಟ್ಟ
Date:04_07_2025
ಇಂದಿನ ನೀರಿನ ಮಟ್ಟ: 167.1 ಅಡಿ
ಒಳ ಹರಿವು: 21,9826ಕ್ಯೂಸೆಕ್
ಹೊರ ಹರಿವು: 3394 ಕ್ಯೂಸೆಕ್
ಕಳೆದ ವರ್ಷ ಇದೇ ದಿನ ನೀರಿನ ಮಟ್ಟ: 127 ಅಡಿ
ಕೆಪಾಸಿಟಿ: 18.893 ಟಿಎಂಸಿ
ಜಲಾಶಯದ ಗರಿಷ್ಠ ಮಟ್ಟ: 186 ಅಡಿ