SUDDIKSHANA KANNADA NEWS/ DAVANAGERE/ DATE:06-02-2025
ದಾವಣಗೆರೆ: ‘ಹಾಸಿಗೆ ಇದ್ದಷ್ಟು ಕಾಲು ಚಾಚು’ ಎಂಬ ಗಾದೆ ಮಾತಿನಂತೆ ಸ್ವಸಹಾಯ ಸಂಘಗಳು ಅಥವಾ ಮೈಕ್ರೋ ಫೈನಾನ್ಸ್ಗಳಲ್ಲಿ ನಮ್ಮ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಸಾಲ ಪಡೆದು ಸಕಾಲದಲ್ಲಿ ಸಾಲ ತೀರಿಸಿ. ಸಾಲ ತೀರಿಸಲು ಆಗದೆ ಅಮೂಲ್ಯ ಜೀವ ಕಳೆದುಕೊಳ್ಳಬೇಡಿ ಎಂದು ಗ್ರಾಮಸ್ಥರಿಗೆ ಶಾಸಕ ಕೆ.ಎಸ್.ಬಸವಂತಪ್ಪ ಕಿವಿಮಾತು ಹೇಳಿದರು.
ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನರಗನಹಳ್ಳಿ ಗ್ರಾಮ ಪಂಚಾಯಿತಿಗೆ ಒಳಪಡುವ ಹೊನ್ನನಾಯಕನಹಳ್ಳಿ ಗ್ರಾಮದಲ್ಲಿ ಶ್ರೀಕ್ಷೇತ್ರದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರಯವ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಅಮಾಯಕರು ಮೈಕ್ರೋ ಫೈನಾನ್ಸ್ ಗಳು ಅಥವಾ ಸ್ವಸಹಾಯ ಸಂಘಗಳಲ್ಲಿ ಅತಿಯಾದ ಸಾಲ ಪಡೆದು ಸಾಲ ಕಟ್ಟಲು ಆಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನು ನೋಡಿದರೆ ನಮಗೆ ನೋವು ಆಗುತ್ತದೆ. ಕುಟುಂಬ ನಿರ್ವಹಣೆ
ಬಹಳ ಕಷ್ಟ. ದಿನನಿತ್ಯ ಕೆಲಸ ಮಾಡುವುದು ಒಂದು ದಿನ ನಿಂತರೆ ಮನುಷ್ಯ ನಿಭಾಯಿಸುವುದು ಕಷ್ಟ. ಅದಕ್ಕೋಸ್ಕರ ನಾವು ಎಷ್ಟು ಹಾಸಿಗೆ ಇದೆ, ಅಷ್ಟು ಕಾಲು ಚಾಚಿಕೊಳ್ಳೋಣ. ಹೆಚ್ಚಿನ ಸಂಘಗಳಲ್ಲಿ ಸಾಲ ಪಡೆದುಕೊಳ್ಳಬೇಡಿ ಎಂದು ಮನವಿ ಮಾಡಿದರು.
ಸಾಲ ತೆಗೆದು ಹಬ್ಬ ಮಾಡಿ ಎಂದು ಯಾವ ದೇವರುಗಳು ಹೇಳುವುದಿಲ್ಲ. ನಮ್ಮ ತೃಪ್ತಿಗೋಸ್ಕರ ಹಬ್ಬ ಆಚರಿಸುತ್ತೇವೆ. ನಮ್ಮ ಇತಿಮಿತಿಯೊಳಗೆ ಹಬ್ಬ ಆಚರಿಸಬೇಕೇ ಹೊರತು, ದುಪ್ಪಟ್ಟು ಸಾಲ ಮಾಡಿ ಆಚರಿಸುವುದರಿಂದ ನಷ್ಟವೇ ಹೆಚ್ಚು. ಕೊನೆಗೆ ಸಾಲ ಕಟ್ಟಲು ಆಗದೆ ತಪ್ಪಿಸಿಕೊಂಡು ಓಡಾಡುವ ಪರಿಸ್ಥಿತಿ ಬರುತ್ತದೆ. ಇದು ನಮಗೆ ಬೇಕಾ ಎಂದು ಗ್ರಾಮಸ್ಥರನ್ನೇ ಪ್ರಶ್ನಿಸಿದರು.
ಮೈಕ್ರೋ ಫೈನಾನ್ಸ್ ಗಳಲ್ಲಿ ಹಣ ಇರುತ್ತದೆ. ಅವರು ಹಿಂದೆ-ಮುಂದೆ ನೋಡದೆ ಸಾಲ ಕೊಡ್ತಾರೆ. ಸಾಲ ಮರಳಿ ಕಟ್ಟದಿದ್ದಾಗ ಮನೆ ಬಾಗಿಲಿಗೆ ಬಂದು ನಿಲ್ಲುತ್ತಾರೆ. ಆಗ ಮನೆ ಬಿಟ್ಟು ಓಡುವ ಪರಿಸ್ಥಿತಿ ತಂದುಕೊಳ್ಳುತ್ತಾರೆ. ಹೀಗಾಗಿ ನಮಗೆ ಎಷ್ಟು ಸಾಲ ಬೇಕೋ ಅಷ್ಟೇ ಸಾಲ ಮಾಡಿ ಮರಳಿ ಕಟ್ಟಿ. ಅದನ್ನು ಬಿಟ್ಟು ಕೊಡುವ ಎಲ್ಲಾ ಸಂಘಗಳಲ್ಲಿ, ಮೈಕ್ರೋ ಫೆನಾನ್ಸ್ಗಳಲ್ಲಿ ಸಾಲ ಪಡೆದು ಊರು ಬಿಡುವ ಸ್ಥಿತಿಗೆ ಬರಬೇಡಿ ಎಂದು ಮನವಿ ಮಾಡಿದರು.
ಕುಡಿಯುವ ನೀರು ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಕುಡಿಯುವ ನೀರು ಶುದ್ಧವಾಗಿದ್ದರೆ ಎಷ್ಟೋ ಕಾಯಿಲೆಯನ್ನು ದೂರು ಮಾಡಬಹುದಾಗಿದೆ. ಇಂತಹದೊಂದು ಉತ್ತಮ ಕಾರ್ಯವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಮಾಡಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ ನಾಗರಾಜು, ಗ್ರಾಪಂ ಪಿಡಿಒ ಲಕ್ಷ್ಮಣ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕಿ ಗೀತಾ, ಗ್ರಾಮದ ಮುಖಂಡರಾದ ದೇವೇಂದ್ರಪ್ಪ, ಹನುಮಂತಪ್ಪ, ತಿಪ್ಪನಾಯ್ಕ್, ಸಿದ್ದಪ್ಪ, ಕಿರಣ್, ಕಾಂತಣ್ಣ, ಮಲ್ಲೇಶ್, ಆಶಾಬಾಯಿ, ಸಂತೋಷ್ ನಾಯ್ಕ್, ರುದ್ರೇಶಪ್ಪ, ಚಂದ್ರಪ್ಪ, ಮುರುಗೇಂದ್ರಪ್ಪ, ಶಿವಾನಂದಪ್ಪ, ಮೈಲಪ್ಪ, ಯೋಗೇಶ್ ಹಾಗೂ ಗ್ರಾಮಸ್ಥರು ಇದ್ದರು.