SUDDIKSHANA KANNADA NEWS/ DAVANAGERE/ DATE:30-12-2024
ಬೆಂಗಳೂರು: ಬೀದರ್ ನ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣ ಸಂಬಂಧ ಸಚಿವ ಪ್ರಿಯಾಂಕಾ ಖರ್ಗೆ ರಾಜೀನಾಮೆ ಪಡೆಯಲು ಗಡುವು ನೀಡಿರುವ ಬಿಜೆಪಿಯು ಜನವರಿ 3ರೊಳಗೆ ಕ್ರಮ ಜರುಗಿಸದಿದ್ದರೆ ಕಲಬುರ್ಗಿಯ ಪ್ರಿಯಾಂಕಾ ಖರ್ಗೆ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದೆ.
ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕಾ ಖರ್ಗೆ ಕೈವಾಡವಿರುವುದು ನಿಜ. ಕೂಡಲೇ ಕಾಂಗ್ರೆಸ್ ಹೈಕಮಾಂಡ್ ಹಾಗೂ ಸಿದ್ದರಾಮಯ್ಯರು ಪ್ರಿಯಾಂಕಾ ಖರ್ಗೆ ರಾಜೀನಾಮೆ ಪಡೆಯಲೇಬೇಕು. ಇಲ್ಲದಿದ್ದರೆ ಬಿಜೆಪಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ವಾರ್ನಿಂಗ್ ನೀಡಿದ್ದಾರೆ.
ಸಚಿವ ಪ್ರಿಯಾಂಕಾ ಖರ್ಗೆ ಅವರ ದುಷ್ಟ ಕೂಟದ ಸದಸ್ಯರ ಕಿರುಕುಳ, ಬೆದರಿಕೆಗಳಿಂದಲೇ ಸಚಿನ್ ಸಾವಿಗೆ ಶರಣಾಗಿರುವುದು. ಪೊಲೀಸರು ಸಹ ಏಕಪಕ್ಷೀಯವಾಗಿ ನಡೆದುಕೊಂಡಿದ್ದಾರೆ. ಸಚಿನ್ ಕುಟುಂಬದವರು ದೂರು ನೀಡಲು
ಹೋದರೆ ಸ್ವೀಕರಿಸಿಲ್ಲ. ಹಾಗಾಗಿ, ಅವರ ಮನೆಗೆ ಹೋದಾಗ ಪೊಲೀಸರು ಒಳಗಡೆ ಬರಲು ಬಿಡುತ್ತಿಲ್ಲ. ಪ್ರಿಯಾಂಕಾ ಖರ್ಗೆ ಸೂಚನೆಯಂತೆ ಮತ್ತು ಬೆಂಬಲಿಗರ ಅಣತಿಯಂತೆ ಪೊಲೀಸರು ಕಾರ್ಯನಿರ್ವಹಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕುಟುಂಬಸ್ಥರೇ ಆರೋಪ ಮಾಡಿದ್ದಾರೆ. ಹಾಗಾಗಿ, ಕೂಡಲೇ ಸಚಿವ ಪ್ರಿಯಾಂಕಾ ಖರ್ಗೆ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಬೆಂಬಲದಿಂದಲೇ ಪ್ರಿಯಾಂಕಾ ಖರ್ಗೆ ಈ ಮಟ್ಟಕ್ಕೆ ಹೋಗಿರುವುದು. ತಂದೆ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಯಾರೂ ಏನೂ ಮಾಡಲು ಆಗದು ಎಂಬ ದುರಹಂಕಾರದ ವರ್ತನೆ ತೋರುತ್ತಿರುವ ಪ್ರಿಯಾಂಕಾ ಖರ್ಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಸ್ವಚ್ಛ ಹಾಗೂ ಪಾರದರ್ಶಕವಾಗಿದ್ದರೆ ರಾಜೀನಾಮೆ ನೀಡಿ ತನಿಖೆ ಎದುರಿಸಲಿ. ಆರೋಪಮುಕ್ತರಾಗಿ ಬಂದರೆ ಸಚಿವರಾಗಲಿ. ಆದ್ರೆ, ಕಳಂಕಿತರಾಗಿ ಅಧಿಕಾರದಲ್ಲಿ ಮುಂದುವರಿಯಬಾರದು ಎಂದು ವಿಜಯೇಂದ್ರ ಗುಡುಗಿದ್ದಾರೆ.