SUDDIKSHANA KANNADA NEWS/ DAVANAGERE/ DATE:15-11-2024
ದಾವಣಗೆರೆ: ರೈತರು ಮತ್ತು ದಲ್ಲಾಳಿಗಳಿಂದ ಮೆಕ್ಕೆಜೋಳ ಹಾಗೂ ಭತ್ತ ಖರೀದಿ ಮಾಡಿ ಹಣ ನೀಡದೆ ವಂಚನೆ ಮಾಡಿದ್ದ ಪ್ರಕರಣಗಳಲ್ಲಿ ಆರೋಪಿ ಶ್ರೀನಿವಾಸನನ್ನು ಬಂಧಿಸಲಾಗಿದೆ.
ಆಂಧ್ರಪ್ರದೇಶದ ಕೊವಿಲ ಕೊಂಟಾಲ ಕಂಪಮಲ್ಲಾ ಗ್ರಾಮದ ಭತ್ತದ ಬ್ರೋಕರ್ ಕೆಲಸ ಮಾಡುತ್ತಿದ್ದ ನರಸಯ್ಯ ಎಂಬುವವರು ಆರ್ ಎಂ ಸಿ ಯಾರ್ಡ್ ಪೊಲೀಸರಿಗೆ ಶ್ರೀನಿವಾಸ್ ವಿರುದ್ಧ ವಂಚಿಸಿರುವುದಾಗಿ ದೂರು ನೀಡಿದ್ದರು.
ನರಸಯ್ಯ ತಮ್ಮ ಊರಿನ ಸುತ್ತಮುತ್ತ ಇರುವ ರೈತರಿಂದ ಭತ್ತವನ್ನು ಕೊಡಿಸುವ ಬ್ರೋಕರ್ ಕೆಲಸವನ್ನು ಮಾಡುತ್ತಿದ್ಜರು. ಈ ಹಿಂದೆ ದಾವಣಗೆರೆಯ ಶ್ರೀನಿವಾಸ ಅಲಿಯಾಸ್ ಶಿವಣ್ಣನಿಗೆ ದೂರವಾಣಿ ಕರೆ ಮಾಡಿ ನಾನು ನಿಮ್ಮ ಲಾರಿಯ ಡ್ರೈವರ್ ಕಡೆಯಿಂದ ನಿಮ್ಮ ನಂಬರ್ ಪಡೆದುಕೊಂಡಿದ್ದೇನೆ. ನನ್ನದು ಭತ್ತದ ಮಿಲ್ ಇರುತ್ತದೆ. ನೀವು ನನಗೆ ಭತ್ತವನ್ನು ಕಳುಹಿಸಿ. ನಾನು ಅವರಿಗಿಂತ 50 ರೂ. ಹೆಚ್ಚಿಗೆ ಕೊಡುತ್ತೇನೆ. ಭತ್ತ ಮಾರಾಟಕ್ಕೆ ನನ್ನ ಜಿ ಎಸ್ ಟಿ ಇದೆ. ನಿಮಗೆ ಬೇಕಾದರೆ ಕೊಡುತ್ತೇನೆಂದು ನರಸಯ್ಯನಿಗೆ ತಿಳಿಸಿದ್ದ.
ಬಳಿಕ ನರಸಯ್ಯರು ಆರೋಪಿತನಿಗೆ 2023ರ ಏಪ್ರಿಲ್ 28ರಿಂದ ಮೇ 21ರ ಅವಧಿಯಲ್ಲಿ ಸುಮಾರು 40 ಲೋಡ್ 40 ಲೋಡ್ ಭತ್ತ ಕಳುಹಿಸಿದ್ದರು. ಅದರ ಒಟ್ಟು ಮೊತ್ತ 2,58,65,200 ಆಗಿತ್ತು. ಈ ಪೈಕಿ ಮೊದಮೊದಲು ಕಳುಹಿಸಿರುವ 15 ಲೋಡ್ ಭತ್ತದ ಹಣಕ್ಕೆ, ಅದರ ಮೊತ್ತ ರೂ. 75,00,000 ಆರೋಪಿತ ಶ್ರೀನಿವಾಸ ಅಲಿಯಾಸ್ ಶಿವಣ್ಣ ಅವರು ಪಿರ್ಯಾದಿಗೆ ಕಳುಹಿಸಿ ನಂಬಿಕೆಯನ್ನು ಹುಟ್ಟಿಸಿದ್ದರು.
ಅದೇ ನಂಬಿಕೆಯಿಂದ ಪಿರ್ಯಾದಿಯವರು ಉಳಿದ 25 ಲೋಡ್ ಭತ್ತವನ್ನು ನೆರೆಹೊರೆಯ ರೈತರಿಂದ ಪಡೆದು ಶ್ರೀನಿವಾಸ ಅಲಿಯಾಸ್ ಶಿವಣ್ಣ ಅವರಿಗೆ ಕಳುಹಿಸಿಕೊಟ್ಟಿದ್ದರು. ನಂತರ 25 ಲೋಡ್ ಭತ್ತದ ಬಾಕಿ ಉಳಿದಿರುವ ರೂ. 1,83,65,200 ಹಣವನ್ನು ಕೊಡದೆ ಸಬೂಬು ಹೇಳುತ್ತಾ ಬಂದಿದ್ದು, ನಂತರ ಶ್ರೀನಿವಾಸ ಅಲಿಯಾಸ್ ಶಿವಣ್ಣನು ಫೋನ್ ರಿಸೀವ್ ಮಾಡದೇ ಇದ್ದುದರಿಂದ ದಾವಣಗೆರೆಗೆ ಹುಡುಕಿಕೊಂಡು ಬಂದಿದ್ದಾರೆ. ಅವರ ವಿಳಾಸ, ಇತರೆ ಮಾಹಿತಿ ದೊರೆತಿರಲಿಲ್ಲ.
ಶ್ರೀನಿವಾಸ ಅಲಿಯಾಸ್ ಶಿವಣ್ಣನು ಪಿರ್ಯಾದಿಗೆ ಮೊದಮೊದಲು ನೀಡಿದ ಭತ್ತಕ್ಕೆ ಹಣವನ್ನು ನನಗೆ ಸರಿಯಾಗಿ ನೀಡಿ, ನಂಬಿಕೆ ಹುಟ್ಟಿಸಿ ಮೋಸ ಮಾಡುವ ಉದ್ದೇಶದಿಂದಲೇ ಉಳಿದ 25 ಲೋಡ್ ಭತ್ತವನ್ನು ತರಿಸಿಕೊಂಡು ರೂ. 1,83,65,200 ಹಣವನ್ನು ಪಿರ್ಯಾದಿಗೆ ನೀಡದೇ ಮೋಸ ಮಾಡಿದ್ದು, ಶ್ರೀನಿವಾಸ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಅಂತ ಪಿರ್ಯಾದಿ ನೀಡಿದ ದೂರನ್ನು ಸ್ವೀಕರಿಸಿ ಆರ್.ಎಂ.ಸಿ. ಪೊಲೀಸ್ ಠಾಣೆಯ ಪಿ.ಎಸ್.ಐ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಪ್ರಕರಣದ ಕಡತವನ್ನು ಪೊಲೀಸ್ ಅಧೀಕ್ಷಕರವರು ಮುಂದಿನ ತನಿಖೆ ಕೈಗೊಳ್ಳಲು ಸಿಇಎನ್ ಪೊಲೀಸ್ ಠಾಣೆಯ ಡಿವೈಎಸ್ಪಿ ರವರಿಗೆ ವರ್ಗಾವಣೆ ನೀಡಿದ್ದು ಸದರಿ ಪ್ರಕರಣದ ತನಿಖೆಯನ್ನು ಪಡೆದುಕೊಂಡು ತನಿಖೆ ಕೈಗೊಂಡು ಪ್ರಕರಣದ ಆರೋಪಿತನ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ಪಿಎಸ್ಐ ರೂಪಾ ತೆಂಬದ್, ಸಿಬ್ಬಂದಿಯವರಾದ ಸೋಮಶೇಖರಪ್ಪ, ಲೋಹಿತ್, ಮಲ್ಲಿಕಾರ್ಜುನ ಹಾದಿಮನಿ, ಗೋವಿಂದರಾಜ್, ಸಣ್ಣ ಬುಡೇನ್ ವಲಿ ಅವರನ್ನೊಳಳಗೊಂಡ ತಂಡವು ಮಹಾಲಕ್ಷ್ಮೀ ಲೇ ಔಟ್ ನ 10 ನೇ ಕ್ರಾಸ್ ನ ವಾಸಿ ಶ್ರೀನಿವಾಸ್ (46)ನನ್ನು ಬಂಧಿಸಿದೆ.
ವಂಚಿಸಿದ್ದ ಪ್ರಕರಣಗಳು:
– ಆರೋಪಿತನ ಮೇಲೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ-187/2020 ಕಲಂ 406,420 ಐಪಿಸಿ
– ಹದಡಿ ಪೊಲೀಸ್ ಠಾಣೆ ಪಿಎಸ್-174/2021 ಕಲಂ 406,420 ಐಪಿಸಿ
– ಆರ್.ಎಂ.ಸಿ. ಪೊಲೀಸ್ ಠಾಣೆಯ 77/2023 ಹಾಗೂ ಕಲಂ 406,420 ಐಪಿಸಿ
– ಬಸವನಗರ ಪೊಲೀಸ್ ಠಾಣೆ 17/2022, 59/2022 ಕಲಂ 406,420 ಐಪಿಸಿ
– ಆಂಧ್ರಪ್ರದೇಶ ರಾಜ್ಯದ ತಿರುಪತಿ ಜಿಲ್ಲೆಯ ಸತ್ಯವೇಡು ಪೊಲೀಸ್ ಠಾಣೆ ಗುನ್ನೆನಂ 56/2023 ಕಲಂ 406,420 ಐಪಿಸಿ ರಿತ್ಯ ಪ್ರಕರಣ ದಾಖಲಾಗಿರುತ್ತವೆ.
ಆರೋಪಿಯ ಮೇಲೆ ರಾಜ್ಯದಲ್ಲಿನ ರೈತರಲ್ಲಿ ಭತ್ತವನ್ನುಪಡೆದು ಹಣವನ್ನು ವಾಪಸ್ ಕೊಡದೆ ಹಲವು ದೂರುಗಳು ದಾಖಲಾಗಿರುವ ಬಗ್ಗೆ ಮಾಹಿತಿ ಇದ್ದು ಈ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಹಲವಾರು ರೈತರಿಗೆ ಹಾಗೂ ದಲ್ಲಾಳಿಗೆ ವರ್ತಕರಿಗೆ ವಂಚನೆ ಮಾಡಿದ್ದ ಆರೋಪಿತ ಶ್ರೀನಿವಾಸ ವಿ. ನನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾದ ಸಿಇಎನ್ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡವನ್ನು ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರು ಶ್ಲಾಘಿಸಿ, ಪ್ರಶಂಸನಾ ಪತ್ರ ನೀಡಿದ್ದಾರೆ.