SUDDIKSHANA KANNADA NEWS/ DAVANAGERE/ DATE:16-02-2025
ದಾವಣಗೆರೆ: ಪೂಜೆ ಮಾಡಿ ಕಷ್ಟ ಪರಿಹರಿಸುವ ಸೋಗಿನಲ್ಲಿ ಬಂದು ಮನೆ ಕಳವು ಮಾಡುತ್ತಿದ್ದ ಇಬ್ಬರು ಆರೋಪಿತರನ್ನು ಬಂಧಿಸುವಲ್ಲಿ ಹರಿಹರ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದು, 8,65,000 ರೂಪಾಯಿ ಮೌಲ್ಯದ 90 ಗ್ರಾಂ ತೂಕದ ಬಂಗಾರ ಆಭರಣಗಳು ಹಾಗೂ 750 ಗ್ರಾಂ ತೂಕದ ಬೆಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ.
ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದ ರಮೇಶ್ ಎಂಬುವವರ ಪತ್ನಿ ಶಶಿಕಲಾ ಅವರ ಮನೆಯಲ್ಲಿರುವ ಹಣಕಾಸಿನ ಸಮಸ್ಯೆ ಪರಿಹಾರ ಮಾಡಲು ಪೂಜೆ ಮಾಡುತ್ತೇವೆ ಎಂದು ಹೇಳಿಕೊಂಡು ಇಸ್ಮಾಯಿಲ್ ಜಬೀವುಲ್ಲಾ ಮತ್ತು ರುಕ್ಸಾನ ಬೇಗಂ ಎಂಬುವರು ಕಳೆದ ಫೆಬ್ರವರಿ 11ರಂದು ಬಂದಿದ್ದರು. ಸಂಜೆ 4 ಗಂಟೆಯಿಂದ 6 ಗಂಟೆಯ ಮಧ್ಯದ ಅವಧಿಯಲ್ಲಿ ಶಶಿಕಲಾ ಅವರ ಮನೆಯಲ್ಲಿದ್ದ ಒಟ್ಟು 1,44,000 ರೂ ಬೆಲೆಯ 2 ತೊಲ 2 ಗ್ರಾಂ ಬಂಗಾರದ ಆಭರಣಗಳನ್ನು ಪೂಜೆ ಮಾಡಿಕೊಡುತ್ತೇವೆ ಅಂತಾ ಹೇಳಿ ಕಳ್ಳತನ ಮಾಡಿಕೊಂಡು ಹೋಗಿದ್ದರು.
ಆರೋಪಿಗಳನ್ನು ಪತ್ತೆ ಮಾಡಿ ಸೂಕ್ತ ಕಾನೂನು ರೀತಿಯ ಕ್ರಮ ಜರುಗಿಸಿ ಅಂತಾ ನೀಡಿದ ದೂರಿನ ಮೇರೆಗೆ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ಆರೋಪಿತರ ಪತ್ತೆ ಕಾರ್ಯದಲ್ಲಿ ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿಗಳಾದ ವಿಜಯ್ ಕುಮಾರ್ ಸಂತೋಷ, ಮಂಜುನಾಥ ಜಿ., ಗ್ರಾಮಾಂತರ ಉಪವಿಭಾಗದ ಡಿವೈಎಸ್ಪಿ ಬಿ. ಎಸ್. ಬಸವರಾಜ, ಹರಿಹರ ವೃತ್ತ ನಿರೀಕ್ಷಕ ಸುರೇಶ ಸಗರಿ ಮಾರ್ಗದರ್ಶನದಲ್ಲಿ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ ಐ ಮಂಜುನಾಥ ಎಸ್. ಕುಪ್ಪೇಲೂರು ನೇತೃತ್ವದಲ್ಲಿ ಪಿಎಸ್ ಐ ಮಹದೇವ ಸಿದ್ದಪ್ಪ ಭತ್ತೆ, ಠಾಣೆಯ ಸಿಬ್ಬಂದಿಗಳನ್ನೊಳಗೊಂಡ ತಂಡ ರಚಿಸಲಾಗಿತ್ತು.
ಕಾರ್ಯಚರಣೆ ನಡೆಸಿ ಆರೋಪಿತರುಗಳಾದ ದಾವಣಗೆರೆ ಬಾಷಾ ನಗರದ ಎಲೆಕ್ಟ್ರಿಷಿಯನ್ ಇಸ್ಮಾಯಿಲ್ ಜಬೀವುಲ್ಲಾ (30). ಒಡಿಶಾದ ಜಗತ್ ಸಿಂಗ್ ಪುರದ ಟೈಲರಿಂಗ್ ಕೆಲಸ ಮಾಡುತ್ತಿದ್ದ ರುಕ್ಸಾನ ಬೇಗಂ ಬಂಧಿಸಿದ್ದಾರೆ. ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ 2 ಪ್ರಕರಣಗಳು ಮತು ಆಜಾದ್ ನಗರ ಠಾಣೆಯ 1 ಪ್ರಕರಣ ಪತ್ತೆಯಾಗಿದ್ದು ಬಂಧಿತರಿಂದ 8,65,000 ರೂಪಾಯಿ ಮೌಲ್ಯದ 90 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 750 ಗ್ರಾಂ ತೂಕದ ಬೆಳ್ಳಿಯ ಸಾಮಾನುಗಳನ್ನು ವಶಪಡಿಸಿಕೊಂಡಿದ್ದು, ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ತನಿಖೆ ಮುಂದುವರೆದಿದೆ.
ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳಾದ-ತಿಪ್ಪೇಸ್ವಾಮಿ, ರಮೇಶ ಜಿ.ಎನ್, ನೀಲಮೂರ್ತಿ, ದಾದಾಪೀರ್, ಅನಿಲ ಕುಮಾರ, ಬಸವನಗೌಡ, ಲಿಂಗರಾಜ್. ಕರಿಯಪ್ಪ, ಸತೀಶ್ ಟಿ.ವಿ, ರಿಜ್ವಾನ್ ನಾಸೂರ್, ಗಂಗಾಧರ, ಸುರೇಶ ಉಪ್ಪಾರ, ಪ್ರಸನ್ನಕಾಂತ, ಅನಿಲ್ ಕುಮಾರ್ ನಾಯ್ಕ, ಕಡೇಮನಿ ನಾಗಪ್ಪ, ಅರ್ಜುನ್ ನಂದ್ಯಾಲ, ಸುಶೀಲ ಸಿ.ಎಂ, ನಾಜೀಮಾ, ಪವಿತ್ರ ಹಾಗೂ ಸಿದ್ದಪ್ಪರವರನ್ನೊಳಗೊಂಡ ತಂಡವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರು ಶ್ಲಾಘಿಸಿದ್ದಾರೆ.






