SUDDIKSHANA KANNADA NEWS/ DAVANAGERE/ DATE:19-08-2024
ದಾವಣಗೆರೆ: ಐರಣಿ ಮಠದ ಸ್ವಾಮೀಜಿಯ ಶಿಷ್ಯರೆಂದು ಬಾಕ್ಸ್ ನೀಡಿ ವಂಚನೆ ಮಾಡುತ್ತಿದ್ದ ಆರೋಪಿಗಳ ಬಂಧಿಸಿರುವ ಹರಿಹರ ಪೊಲೀಸರು, ಬಂಧಿತರಿಂದ 2,80,000 ನಗದು ಹಾಗು 15, 00.000 ರೂ. ಬೆಲೆಯ 3 ಕಾರುಗಳನ್ನು ಜಪ್ತಿ ಮಾಡಿದ್ದಾರೆ.
ಇಲಿಯಾಜ್, ಕಿರಣ, ದಾದಾಪೀರ್, ಮಹಾಂತೇಶ, ಮಂಜುನಾಥ ಬಂಧಿತ ಆರೋಪಿಗಳು.
ಘಟನೆ ಹಿನ್ನೆಲೆ ಏನು…?
2023ರ ಅಕ್ಟೋಬರ್ 21ರಂದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೆಂಚನಾಲ್ ಗ್ರಾಮದ ಚಮನ್ ಸಾಬ್ ಎಂಬುವವರಿಗೆ ನಾವು ಐರಣಿ ಮಠದ ಸ್ವಾಮೀಜಿಯವರ ಶಿಷ್ಯರೆಂದು ನಮ್ಮ ಬಳಿ 100 ರೂ ಮುಖಬೆಲೆಯ ನೋಟುಗಳಿವೆ.
ನೀವು 500 ರೂ ಮುಖಬೆಲೆಯ ನೋಟುಗಳನ್ನು ನೀಡಿದರೆ ನಾವು ನಿಮಗೆ ಹೆಚ್ಚಿನ ಹಣ ನೀಡುತ್ತೇವೆಂದು ನಂಬಿಸಿ ಬಾಕ್ಸ್ ನೀಡಿ ಮೋಸ ಮಾಡಿದ್ದರು.
ಪ್ರಕರಣದಲ್ಲಿ ಆರೋಪಿತರ ಪತ್ತೆ ಕಾರ್ಯದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯ್ ಕುಮಾರ್ ಸಂತೋಷ, ಮಂಜುನಾಥ ಜಿ. ಹಾಗೂ ದಾವಣಗೆರೆ ಗ್ರಾಮಂತರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬಸವರಾಜ ಬಿ.ಎಸ್. ಅವರ ಮಾರ್ಗದರ್ಶನದಲ್ಲಿ ಹರಿಹರ ಪೊಲೀಸ್ ವೃತ್ತ ನಿರೀಕ್ಷಕ ಸುರೇಶ ಸಗರಿ ನೇತೃತ್ವದಲ್ಲಿ ಹರಿಹರ ಗ್ರಾಮಾಂತರ ಪೊಲೀಶ್ ಠಾಣೆಯ ಪಿಎಸ್ ಐ ಮಂಜುನಾಥ ಎಸ್. ಕುಪ್ಪೇಲೂರು, ಪಿಎಸ್ ಐ ಚಿದಾನಂದಪ್ಪ, ಸಿಬ್ಬಂದಿ ತಿಪ್ಪೇಸ್ವಾಮಿ, ನಾಗರಾಜ. ಕರಿಯಪ್ಪ, ರಮೇಶ, ದಾದಾಪೀರ್, ನೀಲಮೂರ್ತಿ, ಸತೀಶ, ಎಲ್. ಡಿ. ಹನುಮಂತಪ್ಪ, ಅರ್ಜುನ ರಾಯಲ್, ಅನಿಲ್ ಕುಮಾರ್ ನಾಯ್ಕ, ರಿಜ್ವಾನ್ ನಾಸೂರ್, ಗಂಗಾಧರ, ಪ್ರಸನ್ನಕಾಂತ, ಸುರೇಶ, ಅರ್ಜುನ್ ನಂದ್ಯಾಲ, ಮಹೇಂದ್ರ, ನಾಗರಾಜ, ಸಿದ್ದಪ್ಪ, ಮುರುಳಿ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ಸಿಬ್ಬಂದಿ ರಾಘವೇಂದ್ರ ಶಾಂತರಾಜ ಅವರನ್ನೊಳಗೊಂಡ ತಂಡವು ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ 2,80, 000 ರೂ ನಗದು ಹಾಗೂ ಕೃತ್ಯಕ್ಕೆ ಬಳಸಿದ 15, 00, 000 ರೂ ಮೌಲ್ಯದ 3 ಕಾರುಗಳು ವಶಕ್ಕೆ ವಶಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತನಿಖೆ ಮುಂದುವರೆದಿದೆ. ಆರೋಪಿತ ಕಿರಣ್ ಮೇಲೆ ರಾಮನಗರ ಜಿಲ್ಲೆಯ ಕುದೂರು ಪೊಲೀಸ್ ಠಾಣೆಯಲ್ಲಿ 2019 ರಲ್ಲಿ ವಂಚನೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಆರೋಪಿತರ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರು ಶ್ಲಾಘಿಸಿದ್ದಾರೆ.