SUDDIKSHANA KANNADA NEWS/ DAVANAGERE/ DATE:01-01-2025
ದಾವಣಗೆರೆ: ಮನೆಯ ನಕಲು ಕೀ ಬಳಸಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಕೆಟಿಜೆ ನಗರ ಪೊಲೀಸರು ಬಂಧಿಸಿ, ಸ್ವತ್ತು ವಶಪಡಿಸಿಕೊಂಡಿದ್ದಾರೆ.
ನಗರದ ಜಯನಗರ ಬಿ ಬ್ಲಾಕ್ ಟವರ್ ಲೇ ಔಟ್ ವಾಸಿಯಾದ ಅಜ್ಜಪ್ಪ ಎಸ್. ಅವರು ತನ್ನ ಮನೆಗೆ ಲಾಕ್ ಮಾಡಿ ಸಂಬಂಧಿಕರ ಮದುವೆಗೆ ಹೊಳಲ್ಕೆರೆಗೆ ಹೋಗಿದ್ದರು. ಡಿಸೆಂಬರ್ 23ರಂದು ಸಂಜೆ 4.30 ಗಂಟೆಗೆ ಹೋದವರು ಡಿಸೆಂಬರ್ 26ರ ಸಂಜೆ 5 ಗಂಟೆಗೆ ಮದುವೆ ಮುಗಿಸಿ ವಾಪಸ್ ಆಗಿದ್ದರು.
ಈ ಅವಧಿಯಲ್ಲಿ ಜಯನಗರ ಬಿ ಬ್ಲಾಕ್ ಟವರ್ ಲೇ ಔಟ್ ನಲ್ಲಿರುವ ಪಿರ್ಯಾದಿಯವರ ಮನೆಯ ಇಂಟರ್ ಲಾಕ್ ಓಪನ್ ಮಾಡಿ ಕೊಂಡು ಮನೆಯೊಳಗೆ ಪ್ರವೇಶ ಮಾಡಿ ಮನೆಯ ವಾಲ್ ಡ್ರೂಪ್ ಡ್ರಾ ನಲ್ಲಿಟ್ಟಿದ್ದ 52000 ರೂ. ನಗದು ಹಣ ಮತ್ತು ಒಟ್ಟು ಸುಮಾರು 2,80,000 ರೂ ಮೌಲ್ಯದ ಸುಮಾರು 45 ಗ್ರಾಂ ಬಂಗಾರದ ಆಭರಣಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಕೆಟಿಜೆ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಕೆ.ಟಿ.ಜೆ. ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಬಲೆ ಬೀಸಿದ್ದರು. ಟವರ್ ಲೇ ಔಟ್ ನ ಜಯನಗರ 2ನೇ ಹಂತದ ನಂದೀಶ್ (32)ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ. ಕಳ್ಳತನ ಮಾಡಿಕೊಂಡು ಹೋಗಿದ್ದ ಒಟ್ಟು 2,80,000-ರೂ ಬೆಲೆಯ 20 ಗ್ರಾಂ ತೂಕದ ಬಂಗಾರದ ಕೊರಳ ಚೈನ್, 25 ಗ್ರಾಂ ತೂಕದ ಬಂಗಾರದ ಕೈ ಕಡಗ, 30,000 ರೂಪಾಯಿ ನಗದು ಹಾಗೂ ಕೃತ್ಯಕ್ಕೆ ಬಳಸಿದ ಮನೆಯ ನಕಲು ಕೀ ಅನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾಪ್ರಶಾಂತ್ ಶ್ಲಾಘಿಸಿದ್ದಾರೆ.