SUDDIKSHANA KANNADA NEWS/ DAVANAGERE/ DATE:24-03-2025
ಬೆಂಗಳೂರು: ಕಲೆಕ್ಷನ್ ಮಾಡುವುದನ್ನೇ ಅರ್ಹತೆ ಮಾಡಿಕೊಂಡು, ಡಿನೋಟಿಫಿಕೇಷನ್ ಮಾಡುವುದನ್ನೇ ಉದ್ಯೋಗ ಮಾಡಿಕೊಂಡು, ಹೊಂದಾಣಿಕೆ ರಾಜಕೀಯವೇ ನನ್ನ ಧ್ಯೇಯ ಎಂದು ಬಿಜೆಪಿ ಪಕ್ಷದ ಅಧ್ಯಕ್ಷಗಾದಿ ಗಿಟ್ಟಿಸಿಕೊಂಡಿರುವ ಬಿ. ವೈ. ವಿಜಯೇಂದ್ರ ತನ್ನದೆ ಪಕ್ಷದವರು ಮಾಡುತ್ತಿರುವ ಆರೋಪಗಳಿಗೆ ಉತ್ತರಿಸದೆ, ಅಲ್ಲಾಡುತ್ತಿರುವ ಪೇಮೆಂಟ್ ಸೀಟನ್ನು ಭದ್ರ ಮಾಡಿಕೊಳ್ಳಲು ನರೇಂದ್ರ ಮೋದಿ ವಿರುದ್ಧದ ನನ್ನ ಮಾತುಗಳಿಗೆ ಮೈ ಪರಚಿಕೊಂಡಿರುವುದನ್ನ ನೋಡಿ ಯಾವ ದಿಕ್ಕಿನಲ್ಲಿ ಮುಖ ಮಾಡಿ ನಗಬೇಕು ಗೊತ್ತಾಗುತ್ತಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಬಿ. ಕೆ. ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ.
ನನ್ನ ರಾಜಕೀಯ ಜೀವನದ ಅನುಭವದಷ್ಟು ವಯಸ್ಸಾಗಿರದ ಬಿ.ವೈ. ವಿಜಯೇಂದ್ರ ಎಳಸು ರಾಜಕಾರಣಿ ಎನ್ನುವುದನ್ನ ಬಿಜೆಪಿಯ ನಾಯಕರೇ ಹಾದಿಬೀದಿಯಲ್ಲಿ ಮಾತಾಡುತ್ತಿದ್ದಾರೆ. ತನ್ನ ತಂದೆಯ ಹೆಸರಿನಲ್ಲಿ ಚೆಕ್ ಮೂಲಕ ಲಂಚ ತೆಗೆದುಕೊಂಡು ಜೈಲಿಗೆ ಕಳಿಸಿದ ಏಕೈಕ ಎಳಸು ಮಗ ಜಗತ್ತಿನಲ್ಲಿ ದುರ್ಬೀನು ಹಾಕಿ ಹುಡುಕಿದರೆ ವಿಜಯೇಂದ್ರ ಮಾತ್ರ ಸಿಗಬಹುದು ಎಂದು ಕಿಡಿಕಾರಿದ್ದಾರೆ.
ಹನಿಟ್ರ್ಯಾಪ್ ಕಾಂಗ್ರೆಸ್ ನಾಯಕರು ಮಾಡಿದ್ದಾರೆ ಎನ್ನುತ್ತಿರುವ ವಿಜಯೇಂದ್ರ ಅವರೇ, ಒಂದಿಷ್ಟು ಸಂಘ ಪರಿವಾರದ ಇತಿಹಾಸವನ್ನಾದರೂ ತಿಳಿದುಕೊಳ್ಳಿ. ಹನಿಟ್ರ್ಯಾಪ್ ನ ಪರಂಪರೆ ಪ್ರಾರಂಭಿಸಿದ್ದೇ ಬಿಜೆಪಿ ಅತಿರಥ ಮಹಾರಥರು. ಪಾಪ ಇನ್ನೂ ರಾಜಕೀಯದಲ್ಲಿ ಎಳಸಾಗಿರುವ ಕಾರಣ ಗೊತ್ತಿಲ್ಲದೆ ಇದ್ದರೆ ನಿಮ್ಮ ಹಿರಿಯರಿಂದ ಸ್ವಲ್ಪ ಇತಿಹಾಸ ಹೇಳಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ಆಪರೇಷನ್ ಕಮಲದ ರೂವಾರಿ ಬಿಜಯೇಂದ್ರ ಅವರೇ, ನಿಮ್ಮ ಅಧಿಕಾರದ ದಾಹಕ್ಕಾಗಿ ಶಾಸಕರನ್ನು ಖರೀದಿ ಮಾಡಿದ ಕಾರಣಕ್ಕಾಗಿ “ಬಾಂಬೆ ಬಾಯ್ಸ್”ಗಳು ತಮ್ಮ ವಿರುದ್ಧ ಯಾವುದೇ ಮಾನಹಾನಿ ಪ್ರಸಾರ ಮಾಡಬಾರದೆಂದು ಕೋರ್ಟ್ ಮೂಲಕ ನಿರ್ಭಂಧ ತಂದಿರುವುದು ಯಾವ ಪುರುಷಾರ್ಥಕ್ಕಾಗಿ? ಆ ಹನಿಟ್ರ್ಯಾಪ್ ನ ಕಿಂಗ್ ಪಿನ್ ನೀವೇ ಎಂದು ಯತ್ನಾಳ್ ಹೇಳಿರುವ ಮಾತಿಗೆ ಇಲ್ಲಿವರೆಗೂ ಉತ್ತರ ಕೊಡುವ ಧೈರ್ಯ ಇದೆಯಾ? ಎಂದು ಪ್ರಶ್ನಿಸಿದ್ದಾರೆ.
ತನ್ನ ಪಕ್ಷದ ಸಿಂಡ್ರೋಮ್ ಗಳಿಂದ ತತ್ತರಿಸುತ್ತಾ ತಲೆ ಬುಡವಿಲ್ಲದ ಮಾತಾಡುವುದನ್ನ ಬಿಡಿ. ನಿಮ್ಮ ಸವಾಲನ್ನು ಸ್ವೀಕರಿಸುತ್ತೇನೆ. ಎಲ್ಲಾ ಪಕ್ಷದ ಹನಿಟ್ರ್ಯಾಪ್ ಗಳ ಬಗ್ಗೆ ಮಾತಾಡುವ ಎದೆಗಾರಿಕೆ, ಧೈರ್ಯ, ಸಾಮಾಜಿಕ ಬದ್ಧತೆ ಎಲ್ಲವನ್ನು ಉಳಿಸಿಕೊಂಡೇ ಬಹಿರಂಗವಾಗಿ ಮಾತಾಡುತ್ತೇನೆ. ಆದರೆ ನಾನು ಕೇಳುವ ಒಂದೇ ಒಂದು ಪೋಕ್ಸೋ ಪ್ರಕರಣದ ಬಗ್ಗೆ ಬಹಿರಂಗವಾಗಿ ಸತ್ಯ ಹೇಳುವ, ಧೈರ್ಯ ಕಿಂಚಿತ್ತಾದರೂ ನಿಮ್ಮ ಎದೆಯಲ್ಲಿ ಇದ್ದರೇ ಬನ್ನಿ ಬಹಿರಂಗ ಸವಾಲಿಗ ಪೇಮೆಂಟ್ ಅಧ್ಯಕ್ಷ ಎಂದು ಆರೋಪಿಸಿದ್ದಾರೆ.